
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣಾ ಆಯೋಗದ ಆದೇಶದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ಸಿಬ್ಬಂದಿ ನೇಮಿಸಿ ಕಾರ್ಯಾರಂಭ ಮಾಡಲಾಗಿದ್ದು ಯಶಸ್ಸುಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರ ದಕ್ಷಿಣ ಎರಡು ವಿಭಾಗಗಳಿದ್ದು, ದಕ್ಷಿಣಕ್ಕೆ ಚುನಾವಣಾ ಅಧಿಕಾರಿಯಾಗಿ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಮ್ ಅವರು, ಸಹಾಯಕ ಚುನಾವಣೆ ಅಧಿಕಾರಿಯಾಗಿ ಡಾ. ಸಿದ್ದು ಹುಲ್ಲೋಳಿ ಹಾಗೂ ಉತ್ತರ ಭಾಗದ ಚುನಾವಣೆ ಅಧಿಕಾರಿಯಾಗಿ ಪಾಲಿಕೆ ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ತಳವಾರ, ಸಹ ಚುನಾವಣಾ ಅಧಿಕಾರಿಯಾಗಿ ಅಭಿಯಂತರರಾದ ಲಕ್ಷ್ಮೀ ನಿಪ್ಪಾಣಿಕರ್ ಜವಾಬ್ದಾರಿ ನಿಭಾಯಿಸಲಿದ್ದಾರೆ . 40 ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಉತ್ತರ ದಕ್ಷಿಣ ಸೇರಿ ಒಟ್ಟು 514 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುವರು. ಈಗಾಗಲೇ ಉತ್ತರದಲ್ಲಿ ಶೇ. 68.60, ದಕ್ಷಿಣದಲ್ಲಿ ಶೇ. 77.06 ರಷ್ಟು ಮ್ಯಾಪಿಂಗ್ ಕಾರ್ಯ ಮುಗಿದಿದ್ದು, ಶೇ.90 ರಷ್ಟು ಗುರಿ ತಲುಪಲು ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದ್ದು. ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜೂ. 20 ರಿಂದ ಕಾರ್ಯ ಆರಂಭವಾಗಲಿದ್ದು ನಿಗದಿತ ಅವಧಿಯಲ್ಲಿ ಎಸ್ಐಆರ್ ಕಾರ್ಯವನ್ನು ಪೂರ್ಣಗೊಳಿಸಲು ಆಯುಕ್ತರು ಸಿಬ್ಬಂದಿಗೆ ಸೂಚಿಸಿದ್ದಾರೆಂದು ಹೇಳಿದರು.



