*ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ*

ಪ್ರಗತಿವಾಹಿನಿ ಸುದ್ದಿ: ಈಡಿಗ ಸಮುದಾಯದ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕಲಬುರ್ಗಿ ಶ್ರೀ ಶರಣಬಸವೇಶ್ವರ ಮಠ ಹಾವೇರಿ ಪೀಠಾಧಿಪತಿಗಳಾದ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಟ್ರಸ್ಟ್ ಹಾಗೂ ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ಸ್ವಾಮೀಜಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿಗಳ ಸದಾಶಿವನಗರ ನಿವಾಸಕ್ಕೆ ಸ್ವಾಮೀಜಿಗಳು ಬುಧವಾರ ಭೇಟಿ ನೀಡಿ ಮನವಿ ಮಾಡಿದರು. ಸರ್ವಧರ್ಮ ಸಮಾಜದ ಶ್ರೀ ಸಂಗಮಾನಂದ ಸ್ವಾಮೀಜಿ, ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಬಂಜಾರ ಸಮಾಜದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕುಂಬಾರ ಸಮಾಜದ ಶ್ರೀ ಬಸವಮೂರ್ತಿ ಕುಂಬಾರ ಗುಡ್ಡಯ್ಯ ಸ್ವಾಮೀಜಿ, ಹೂಗಾರ ಸಮಾಜದ ಹಳ್ಳಿರಾಯ ನಾಟಿಕಾರ ಸ್ವಾಮೀಜಿ, ಅರೆ ಅಲೆಮಾರಿ ಸಮಾಜದ ಶ್ರೀ ಕರುಣಾಕರ ಸ್ವಾಮೀಜಿ, ಪಿಂಜಾರ ಸಮಾಜದ ಶ್ರೀ ಮರುಳಶಂಕರ ಸ್ವಾಮೀಜಿಗಳು ಮನವಿ ಸಲ್ಲಿಸಿದರು.
ಶ್ರೀ ಪ್ರಣಾವಾನಂದರಾಮ್ ಮಹಾಸ್ವಾಮಿಗಳು ಈಡಿಗ ಹಾಗೂ ಹಿಂದುಳಿದ ಸಮಾಜಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಗೋಕರ್ಣದಲ್ಲಿ ನಡೆದ ಸಮಾಜ ಸಭೆಯಲ್ಲಿ ಧ್ವನಿ ಎತ್ತಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಮುದಾಯಗಳಿಗೂ ಸಮನಾಗಿ ಅನುದಾನ ಬಿಡುಗಡೆ ಮಾಡಬೇಕಿತ್ತು ಎಂದು ಆಗ್ರಹಿಸಿದ್ದರು. ಹೀಗಾಗಿ ಸ್ವಾಮೀಜಿಗಳ ವಿರುದ್ಧ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕುರುಬ ಸಮಾಜದ ಸಂಘಟನೆಗಳು ಹಾಗೂ ಅವುಗಳ ಕೆಲವು ಮುಖಂಡರು ಶ್ರೀಗಳ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಕಾಮೆಂಟ್ ಗಳಲ್ಲಿ ಇದೇ ಸಮುದಾಯಕ್ಕೆ ಸೇರಿದವರು ಶ್ರೀಗಳನ್ನು ಕೊಲ್ಲುತ್ತೇವೆ ಎಂದು ಬರೆದಿದ್ದಾರೆ. ಜಾತಿಗಳ ಮಧ್ಯೆ ಘರ್ಷಣೆ ಆಗಬಾರದು ಹಾಗೂ ಶ್ರೀಗಳಿಗೆ ತೊಂದರೆ ಆಗಬಾರದು. ಹೀಗಾಗಿ ಪ್ರಣಾವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.



