
ಪ್ರಗತಿವಾಹಿನಿ ಸುದ್ದಿ : ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಂಡೆ ಕುಸಿದು 7 ಜನ ಕಾರ್ಮಿಕರು ಸ್ಥಳದಲ್ಲೇ ಜೀವ ಕಳೆದುಕೊಂಡಿರುವ ಘಟನೆ ನಡೆದಿದೆ
ಬೆಂಗಳೂರಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕಾವೇರಿ ಕಂಪನಿಗೆ ಸೇರಿದ ಕ್ವಾರಿಯಲ್ಲಿ ಈ ಘಟನೆ ನಡೆದಿದ್ದು, ಬಂಡೆಯ ಅಡಿಯಲ್ಲಿ ಇನ್ನೂ ಏಳು ಜನ ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾದಪಟ್ಟಣ ಗ್ರಾಮದ ಕಾವೇರಿ ಕಂಪನಿಯ ಈ ಕ್ರಷರ್ನಲ್ಲಿ ಇಂದು ಎಂದಿನಂತೆ ಬೆಳಿಗ್ಗೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಕ್ವಾರಿಯ ಮೇಲ್ಬಾಗದಲ್ಲಿ ಹಿಟಾಚಿ ಯಂತ್ರದ ಮೂಲಕ ಗಣಿಗಾರಿಕೆ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮೇಲಿದ್ದ ಬೃಹತ್ ಬಂಡೆಯೊಂದು ಭಾರೀ ಸದ್ದಿನೊಂದಿಗೆ ಕೆಳಗೆ ಉರುಳಿ ಬಿದ್ದಿದೆ.
ಅದೇ ಸಮಯದಲ್ಲಿ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಈ ಬಂಡೆ ಬಿದ್ದಿದೆ. ಬಂಡೆಯ ಅಗಾಧ ಗಾತ್ರಕ್ಕೆ ಸಿಲುಕಿ ಐವರು ಕಾರ್ಮಿಕರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಇಷ್ಟೇ ಅಲ್ಲದೆ, ಗಾಯಗೊಂಡಿರುವ ಹಾಗೂ ಜೀವನ್ಮರಣ ಹೋರಾಟ ನಡೆಸುತ್ತಿರುವ ಸುಮಾರು ಏಳಕ್ಕೂ ಹೆಚ್ಚು ಕಾರ್ಮಿಕರು ಇನ್ನು ಕೂಡ ಬಂಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ತೀವ್ರ ಆತಂಕ ಎದುರಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಸಹಾಯದಿಂದ ಬಂಡೆಗಳನ್ನು ಸರಿಸಿ, ಒಳಗಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಯುದ್ಧೋಪಾದಿಯಲ್ಲಿ ಆರಂಭವಾಗಿದೆ.




