*ರಾಮದುರ್ಗದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ದಂಡ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮದುರ್ಗ ತಾಲೂಕಿನ ಚಿಂಚಖಂಡಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಘಟನೆಯ ಹಿನ್ನೆಲೆ
ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿ, ಚಿಂಚಖಂಡಿ ಗ್ರಾಮದ ನಿವಾಸಿ. ಇವನು ಫಿರ್ಯಾದಿ ದುಂಡವ್ವ ಕಲ್ಲೋಳಪ್ಪ ಮುದೇನ್ನವರ ಮತ್ತು ಅವರ ಮಗ ಲಕ್ಷ್ಮಣ ಕಲ್ಲೋಳಪ್ಪ ಮುದೇನ್ನವರ ಅವರೊಂದಿಗೆ ಖಾಸಗಿ ಗೆಳೆತನ ಹೊಂದಿದ್ದ.
ದಿನಾಂಕ 22-06-2025 ರಂದು ಇಬ್ಬರೂ ಕೂಡಿಕೊಂಡು ರಾಮದುರ್ಗಕ್ಕೆ ಬಂದು ತಿರುಮಲ ಹೋಟೆಲ್ನಲ್ಲಿ ಸರಾಯಿ ಸೇವಿಸಿದ್ದರು. ಬಳಿಕ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ತುರನೂರ ಗ್ರಾಮದ ಸಮೀಪದ ಮಾಯಪ್ಪ ಧರಿಗೊಂಡ ಅವರ ಜಮೀನಿಗೆ ಹೋಗಿ ಮಧ್ಯಾಹ್ನ 1:15 ರ ಸುಮಾರಿಗೆ ಬಡುವಿನ ಹತ್ತಿರ ಪಾರ್ಟಿ ಮಾಡುತ್ತಿದ್ದರು.
ಕೊಲೆಗೆ ಕಾರಣ
ಪಾರ್ಟಿ ವೇಳೆ ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿ, ಫಿರ್ಯಾದಿಯ ಮಗ ಲಕ್ಷ್ಮಣ ಮುದೇನ್ನವರ ಅವರೊಂದಿಗೆ ಹಣಕಾಸಿನ ವಿಷಯವಾಗಿ ತಂಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ, ಆರೋಪಿಯು ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕೆಳಗೆ ಕಡವಿ ಅವಾಚ್ಯವಾಗಿ ಬೈದಿದ್ದಾನೆ. “ರೊಕ್ಕ ಕೊಡದಿದ್ದರೆ ನಿನ್ನ ಮುಗಿಸುತ್ತೇನೆ” ಎಂದು ಬೆದರಿಸಿ, ಎರಡು ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಲಕ್ಷ್ಮಣ ಅವರ ತಲೆ ಮತ್ತು ಹಣೆಗೆ ಒಗೆದು ಭೀಕರವಾಗಿ ಕೊಲೆ ಮಾಡಿದ್ದಾನೆ.
ಪ್ರಕರಣ ದಾಖಲು ಮತ್ತು ತನಿಖೆ
ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂ: 82/2025 ಕಲಂ 103(1) ಬಿಎನ್ಎಸ್ ಅಡಿ ಪ್ರಕರಣ ದಾಖಲಾಗಿತ್ತು. ಹಿಂದಿನ ಸಿಪಿಐ ವಿನಾಯಕ ಬಡಿಗೇರ ಮತ್ತು ಪಿಎಸ್ಐ ಸವಿತಾ ಮುನ್ನಾಳ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು
ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಆರ್.ಎ.ಗಡಕರಿ ಅವರು ವಾದ ಮಂಡಿಸಿದ್ದರು. ವಾದ-ವಿವಾದ ಆಲಿಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಸುಭಾಷ ಸಂಕದ ಅವರು ಇಂದು ರಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿ, ಚಿಂಚಖಂಡಿ, ರಾಮದುರ್ಗ ತಾಲೂಕು, ಬೆಳಗಾವಿ ಜಿಲ್ಲೆ ಇವನನ್ನು ದೋಷಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಮತ್ತು ರೂ. 25,000 ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ.



