Kannada NewsKarnataka NewsNationalPolitics

*ಬಿಡದಿ ಟೌನ್‌ಶಿಪ್ ಗಲಾಟೆ: 20ಕ್ಕೂ ಅಧಿಕ ರೈತರ ಮೇಲೆ ಕೇಸ್ ದಾಖಲು*

ಪ್ರಗತಿವಾಹಿನಿ ಸುದ್ದಿ: ರಾಮನಗರದ ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆ ಭಾಗವಾಗಿ ಮಂಡಲಹಳ್ಳಿ ಗ್ರಾಮದಲ್ಲಿ ಜಂಟಿ ಭೂಮಾಪನ ನಡೆಸಲು ತೆರಳಿದ್ದ ಕಂದಾಯ ಇಲಾಖೆಯ ಸಿಬ್ಬಂದಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ 20ಕ್ಕೂ ಅಧಿಕ ರೈತರ ಮೇಲೆ ಕೇಸ್ ದಾಖಲಿಸಲಾಗಿದೆ.

ಬಿಡದಿ ಠಾಣೆಯಲ್ಲಿ 20ಕ್ಕೂ ಹೆಚ್ಚು ರೈತರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.

ಈ ಬೆನ್ನಲ್ಲೇ ಬಿಡದಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಹಳ್ಳಿಗರು ತೀವ್ರ ಆಕ್ರೋಶಗೊಂಡಿದ್ದಾರೆ. ಕಂದಾಯ ಇಲಾಖೆಯಾಗಲಿ ಅಥವಾ ಜಿಲ್ಲಾಡಳಿತದ ತಂಡವಾಗಲಿ ಮತ್ತೊಮ್ಮೆ ಸರ್ವೆ ಮಾಡಲು ಬಂದರೆ ಸ್ಥಳದಲ್ಲೇ ಅವರನ್ನು ಫೇರಾವ್ ಹಾಕಿ ಪ್ರತಿಭಟಿಸಲು ರೈತ ಸಂಘಟನೆಗಳು ಮತ್ತು ಸ್ಥಳೀಯ ಜಮೀನುದಾರರು ಜಂಟಿಯಾಗಿ ತೀರ್ಮಾನಿಸಿದ್ದಾರೆ.

ಎಲ್ಲೆಡೆ ಬಿಗುವಿನ ವಾತಾವರಣ ನೆಲೆಸಿರುವುದರಿಂದ, ಯಾವುದೇ ದೊಡ್ಡ ಗಲಾಟೆಗೆ ಆಸ್ಪದ ನೀಡಬಾರದು ಎಂದು ಸದ್ಯಕ್ಕೆ ಸರ್ವೆ ಕಾರ್ಯವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮೊದಲು ಆಕ್ರೋಶಗೊಂಡಿರುವ ರೈತರ ಜೊತೆ ಶಾಂತಿಯುತ ಸಂಧಾನ ಸಭೆ ನಡೆಸಲು ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

Home add -Advt

ಆದರೆ ಈ ನಡುವೆಯೇ, ಯೋಜನೆಗೆ ಈಗಾಗಲೇ ಸಹಮತಿ ನೀಡಿರುವ ಅಂದರೆ ಜಮೀನು ಬಿಟ್ಟುಕೊಡಲು ಸಿದ್ಧವಿರುವ ರೈತರ ಭೂಮಿಯನ್ನು ಮಾತ್ರ ಸದ್ದಿಲ್ಲದೆ ಸರ್ವೆ ಮಾಡಲು ಜಿಲ್ಲಾಡಳಿತ ಒಳಗೊಳಗೇ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.

ಯಾವುದೇ ಅಡ್ಡಿ ಆತಂಕ ಎದುರಾಗದಂತೆ ಮುನ್ನೆಚ್ಚರಿಕೆಯಾಗಿ ಭಾರಿ ಪೊಲೀಸ್ ಭದ್ರತೆಯೊಂದಿಗೆ ಈ ಸರ್ವೆ ನಡೆಸಲು ಸಿದ್ಧತೆಗಳು ನಡೆದಿವೆ. ಈ ಗದ್ದಲ ಮುಂಬರುವ ದಿನಗಳಲ್ಲಿ ಇನ್ನಷ್ಟು ದೊಡ್ಡ ಪ್ರತಿಭಟನೆಗೆ ದಾರಿ ಮಾಡಿಕೊಡುವ ಮುನ್ಸೂಚನೆ ಕಾಣಿಸುತ್ತಿದೆ.

Related Articles

Back to top button