Kannada NewsKarnataka News

​ಗ್ರಾಮೀಣದಲ್ಲಿಂದು ಲಕ್ಷ್ಮಿ ಹೆಬ್ಬಾಳಕರ್ ದಿನ – ಅರ್ಥಪೂರ್ಣ ಮಹಿಳಾ ದಿನಾಚರಣೆ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ವೈಶಿಷ್ಠ್ಯಪೂರ್ಣವಾಗಿ ಮಹಿಳಾ ದಿನಾಚರಣೆ ನಡೆಯಿತು. ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಜನತೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುವ ಮೂಲಕ ಮಹಿಳಾ ದಿನಕ್ಕೊಂದು ಅರ್ಥ ನೀಡಿದರು.  
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಭಾನುವಾರ ಬಾಂಧಾರ ನಿರ್ಮಾಣ ಹಾಗೂ ರಸ್ತೆ ಡಾಂಬರಿಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ತಮ್ಮ ಬಹು ವರ್ಷದ ಬೇಡಿಕೆಯನ್ನು ನೆರವೇರಿಸಿ, ಮಹಿಳಾ ದಿನಾಚರಣೆಯ ದಿನ ತಮ್ಮೂರಿಗೆ ಆಗಮಿಸಿ ಉದ್ಘಾಟಿಸಿದ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಗ್ರಾಮಸ್ಥರು ಸತ್ಕರಿಸಿದರು, ಪ್ರೀತಿಯಿಂದ ಹರಸಿ, ಹಾರೈಸಿದರು.
ತುರಮರಿ ಹಾಗೂ ಕಲ್ಲೇಹೊಳ ಭಾಗದ ರೈತರಿಗೆ ಅನುಕೂಲವಾಗುವಂತೆ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಒಟ್ಟು 65 ಲಕ್ಷ ರೂ.ಗಳ ವೆಚ್ಚದಲ್ಲಿ ಬ್ರಿಡ್ಜ್ ಕಂ ಬಾಂದಾರ್ ಸುಧಾರಣೆಯ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು.
​ ಉಚಗಾಂವ ಗ್ರಾಮದಲ್ಲಿ ಕಳೆದ ವರ್ಷ ವಿಪರೀತ ಮಳೆಯಿಂದಾಗಿ ರಸ್ತೆಗಳು ನಾಶವಾಗಿದ್ದು, ಇವತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮದ ಒಳಾಂಗಣ ಪ್ರದೇಶಗಳಾದ ಶಿವಾಜಿ ಸರ್ಕಲ್ ರಸ್ತೆ,  ಸಂಭಾಜಿ ಮೂರ್ತಿಯ ರಸ್ತೆ, ಜಿಎಲ್ ಎಸ್ ಆರ್ ದಿಂದ ಚರ್ಚ್ ರೋಡ್, ಜಿಎಲ್ ಎಸ್ ಆರ್ ದಿಂದ ಉಚಗಾಂವ ಮುಖ್ಯ ರಸ್ತೆ, ದೇಸಾಯಿ ಕಿರಾಣಿ ಅಂಗಡಿಯಿಂದ ಮರಾಗಾಯಿ ದೇವಸ್ಥಾನ ಹಾಗೂ ಉರ್ದು ಶಾಲೆಯ ಮೂಲಕ ಸಂಪರ್ಕ ನೀಡುವ ಎಲ್ಲ ರಸ್ತೆಗಳ ಕಾಂಕ್ರೀಟ್ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು.
ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ ಎರಡು ಅಭಿವೃದ್ಧಿಯ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು.
​ ​ 50 ಲಕ್ಷ ರೂ​.​ಗಳ ವೆಚ್ಚದಲ್ಲಿ ಸುಮಾರು ಒಂದು ಕಿಲೊಮೀಟರ್  ಕಾಂಕ್ರೀಟ್ ರಸ್ತೆಯ ನಿರ್ಮಾಣ​ ಮತ್ತು 43 ಲಕ್ಷ ರೂ​.,ಗಳ ವೆಚ್ಚದಲ್ಲಿ ಶಾಹು ನಗರ ದಿಂದ ಎಮ್ ಆಯ್ ಟ್ಯಾಂಕ್ ವರೆಗೆ ರಸ್ತೆಯ ಡಾಂಬರೀಕರಣದ ಕಾಮಗಾರಿ​ಗೆ ಪೂಜೆ ಸಲ್ಲಿಸಲಾಯಿತು. 
 
ಗ್ರಾಮೀಣ ಕ್ಷೇತ್ರ ಅತ್ಯಂತ ವಿಶಿಷ್ಟವಾಗಿದ್ದು, ಇಲ್ಲಿಯ ಜನರು ಬಹಳ ಮೃಧು ಸ್ವಭಾವದವರು. ಆದರೆ ಈವರೆಗೆ ಜನರ ಮುಗ್ದತೆಯನ್ನು ಬಳಸಿಕೊಂಡು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯಲಿಲ್ಲ. ನಾನು ಶಾಸಕಿಯಾದ ನಂತರ ಕ್ಷೇತ್ರವನ್ನು ಮಾದರಿಯಾಗಿಸುವ ಗುರಿ ಇಟ್ಟುಕೊಂಡು ನಿರಂತರವಾಗಿ ಅಭಿವೃದ್ಧಿ ಯೋಜನೆಗಳನ್ನು ತರುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಕ್ಷೇತ್ರದ ಜನರ ಆಶಿರ್ವಾದ, ಪ್ರೀತಿ ಇದ್ದರೆ ಮುಂದಿನ ದಿನಗಳಲ್ಲಿ ಹಲವಾರು ಬೃಹತ್ ಯೋಜನೆಗಳನ್ನು ತರುವ ಕನಸು ಹೊತ್ತಿದ್ದೇನೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಇಲ್ಲಿನ ಯುವಕರಿಗೆ ಉದ್ಯೋಗ ದೊರೆಯಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣ ನೀರಾವರಿಗೆ ಒಳಪಡಿಸಲಾಗುವುದು. ಜಾತಿ, ಭಾಷೆ, ರಾಜಕೀಯವನ್ನು ಬದಿಗಿಟ್ಟು ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು. 
​ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button