Kannada NewsKarnataka NewsLatest

ಕೊರೋನಾ ವೈರಸ್‌ನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ವಿಶ್ವದಾದ್ಯಂತ ಇಡೀ ಮಾನವ ಕುಲವನ್ನೇ ಸಂಕಷ್ಟಕ್ಕೆ ತಳ್ಳಿರುವ ಕೊರೋನಾ ವೈರಸ್ ಬಗ್ಗೆ ದೇಶದ ನಾಗರೀಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ನೀಡಿದಂತೆ ಭಾನುವಾರ ಜನತಾ ಕರ್ಫ್ಯೂಗೆ ತಮ್ಮ ಸಹಕಾರ ನೀಡಿ ಅದನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಗತ್ತಿನಾದ್ಯಂತ ಕೊರೋನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಪ್ರಾಯೋಗಿಕವಾಗಿ ಮುಂಜಾನೆ ೭ ಗಂಟೆಯಿಂದ ರಾತ್ರಿ ೯ ಗಂಟೆಯವರೆಗೆ ಜಾರಿ ಮಾಡುತ್ತಿರುವ ಜನತಾ ಕರ್ಫ್ಯೂಗೆ ಎಲ್ಲ ಬಾಂಧವರು ಭಾಗಿಯಾಗುವಂತೆ ಅವರು ಕೋರಿದ್ದಾರೆ.
ಕೊರೋನಾ ವೈರಸ್‌ನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ, ಸಾರ್ವಜನಿಕರು ಇದರ ಬಗ್ಗೆ ಮತ್ತಷ್ಟು ಮುಂಜಾಗ್ರತೆ ವಹಿಸಬೇಕಾಗಿದೆ.  ನಮ್ಮ ದೇಶದ ಬಾಂಧವರು ಕೋರೋನಾ ವೈರಸ್ ಹರಡುವಿಕೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ದೇಶದ ಜನತೆಗೆ ಪ್ರಧಾನಿಯವರು ಕರೆಕೊಟ್ಟಿರುವುದು ಸಾರ್ವಜನಿಕ ಹಿತದೃಷ್ಟಿ ಹಾಗೂ ದೇಶದ ಒಳಿತನ್ನು ಒಳಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕೋರೋನಾದಂತಹ ಮಹಾಮಾರಿಯನ್ನು ತಡೆಯಲು ನಾವೆಲ್ಲ ನಮ್ಮ ಕರ್ತವ್ಯಗಳ ಪಾಲನೆ ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಸಲಹೆ ಮತ್ತು ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಬೇಕಿದೆ. ರೋಗಕ್ಕೆ ತುತ್ತಾಗದಂತಹ ಸ್ವಯಂ ರಕ್ಷಣೆಯ ಜೊತೆಗೆ ಮತ್ತೊಬ್ಬರಿಗೂ ಈ ಸೊಂಕು ಹರಡದಂತೆ ಸಂಕಲ್ಪ ತೊಡಬೇಕಿದೆ. ಈ ಸಂದರ್ಭದಲ್ಲಿ ಜಾಗತೀಕ ಬಿಕ್ಕಟ್ಟಿನ ವೇಳೆಯಲ್ಲಿ ನಾವು ಸ್ವಸ್ಥರಾಗಿದ್ದರೆ ಇಡೀ ಜಗತ್ತೇ ಸ್ವಸ್ಥವಾಗಿ ನಮ್ಮತ್ತ ನೋಡುತ್ತದೆ ಎಂಬ ಪ್ರಧಾನಿಯವರ ಸಂದೇಶವನ್ನು ನಾವೆಲ್ಲರೂ ಪಾಲಿಸಿ ದೇಶಕ್ಕೆ ಒಂದು ಒಳ್ಳೆಯ ಕೊಡುಗೆಯನ್ನು ನೀಡುವ ಮೂಲಕ ಆರೋಗ್ಯವಂತ ದೇಶವನ್ನು ಕಾಣಲು ಕಾರಣಿಭೂತರಾಗೋಣವೆಂದು ಅವರು ತಿಳಿಸಿದ್ದಾರೆ.
ಭಾನುವಾರ ನಡೆಯುವ ಜನತಾ ಕರ್ಫ್ಯೂಗೆ ಇಡೀ ದೇಶವೇ ಬೆಂಬಲ ನೀಡುತ್ತಿದ್ದು, ನಾವು ಕೂಡಾ ಕೋರೋನಾ ವೈರಸ್‌ದಂತಹ ಜಾಗತೀಕ ರೋಗದ ವಿರುದ್ಧ ಹೋರಾಟಕ್ಕೆ ಅಣಿಯಾಗಿ ಅದರಲ್ಲಿ ಜಯಶೀಲರಾಗೋಣ. ಜನತಾ ಕರ್ಫ್ಯೂವನ್ನು ಪೂರ್ಣ ಪ್ರಮಾಣದಲ್ಲಿ ಆಚರಿಸಿ ಭೀಕರ ರೋಗವನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸೋಣ. ಎಲ್ಲರೂ ಪರಸ್ಪರ ಸಹಕಾರ ನೀಡುವ ಮೂಲಕ ಒಗ್ಗಟ್ಟಿನ ಹೋರಾಟಕ್ಕೆ ಅಣಿಯಾಗುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನಿಯವರ ಕರೆಯ ಮೇರೆಗೆ ಮಾ.೨೨ರಂದು ನಾವೆಲ್ಲರೂ ಮನೆಯಿಂದ ಆಚೆಗೆ ಬರದೇ, ನಮ್ಮ ಹಿರಿಯ ಜೀವಿಗಳನ್ನು ಕೂಡಾ ಹೊರಗಡೆ ಬಿಡದಂತೆ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿನಂತಿಸಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button