
ನೂತನ ಕುಲಕರ್ಣಿ
” ಅಪ್ಪಿ ಪುಟ್ಟಿ , ಬರ್ರಿ ಇಲ್ಲೆ ,ಇದ ತೊಗೊಂಡು ಹೋಗ್ರಿ” ,ಅಟ್ಟದ ಮನಿ ಮೆಟ್ಟಲೇರಕೋತ ನಮ್ಮ ಅಣ್ಣಾ ಕೂಗಿ ಹೇಳಿದ್ರು.
ಧಬಧಬನೆ ಓಡಿ ನಾವು ಅಕ್ಕ ತಂಗ್ಯಾರಿಬ್ಬರೂ ಅವರ ಕೈಯೊಳಗಿನ ಪಾಕೀಟನ್ನು ಇಸಗೊಂಡೆವು. ಪೇಪರ್ನಲ್ಲಿ ಹಾಕಿ ದಾರದಿಂದ ಸುತ್ತಿದ ಪ್ಯಾಕ ಇತ್ತದು. ಒಳಗೆ ಕಥಿಪುಸ್ತಕ ಇರಬಹುದು ಅನ್ನಿಸಿ ಬಲೇ ಖುಷಿಯಾಯಿತು. ಒಳಗೆ ಬಂದವರೇ ಅವಸರದಿಂದ ದಾರಹರಿದು, ಪೇಪರ ಕಿತ್ತಿ ನೋಡಿದರೆ ಶೇಡು ಹಳದಿ ಬಣ್ಣದ ಕವರಿನ , ಸಣ್ಣ ಸಣ್ಣ ಗಾತ್ರದ ಪುಸ್ತಕಗಳಿದ್ದವು. ಒಂದು , ಎರಡು , ಮೂರು …..ಬರೋಬ್ಬರಿ ಹತ್ತು ಪುಸ್ತಕಗಳು. ಓಹೋ ! ಬಕಾಸುರನ ಮುಂದೆ ಬಂಡಿ ಭಕ್ಷ್ಯ!
” ಅಣ್ಣಾ ,ಹತ್ತು ಕಥಿ ಪುಸ್ತಕಾನ” , ಖುಷಿ ತಾಳದೇ ಜೋರಾಗಿ ಒದರಿದ್ದೆ. ನೋಡೋಣ , ಯಾವ ಕಥಿ ಪುಸ್ತಕ ಅಂತ ಹೆಸರು ಓದಿದೆ. “ಹ್ಯಾಮ್ಲೆಟ್ ” ಇದೇನಪ್ಪಾ ವಿಚಿತ್ರ ಹೆಸರು ಅನ್ನಿಸಿ, ಮತ್ತೊಂದು ಪುಸ್ತಕ ನೋಡೋಣವೆಂದರೆ ಅದು”ಮ್ಯಾಕ್ಬೆಥ್”. ಮುಂದಿನದು ಕಿಂಗ್ ಲಿಯರ್, ಆಮೇಲೆ ಒಥೆಲೋ , ರೋಮಿಯೋ ಮತ್ತು ಜ್ಯೂಲಿಎಟ್ , ವೇನಿಸದ ವರ್ತಕ , ಜ್ಯೂಲಿಯಸ್ ಸೀಜರ್ , ನಡುಬೇಸಿಗೆಯ ಇರುಳುಗನಸು , ನೀವು ಬಯಸಿದಂತೆ , ಬಿರುಗಾಳಿ.
ನಾವೆಂದೂ ಕೇಳದ ಹೆಸರುಗಳು.
ಮುಖಪುಟದ ಕೆಳಭಾಗದಲ್ಲಿ ” ಮಕ್ಕಳಿಗಾಗಿ ಶೇಕ್ಸಪಿಯರ್ ಮಹಾಕವಿಯ ನಾಟಕದ ಕಥೆಗಳು,
ಲೇಖಕರು : ವರದರಾಜ ಹುಯಿಲಗೋಳ ” ಅಂತ ಬರೆದಿತ್ತು. ನಾನು ಹ್ಯಾಮ್ಲೆಟ್ ಅನ್ನೋ ಪುಸ್ತಕದ ಪುಟಗಳನ್ನು ತೆಗೆದು ಓದಲು ಶುರು ಹಚ್ಚಿಕೊಂಡೇಬಿಟ್ಟೆ. ಅದೊಂದು ಹೊಸದೇ ಲೋಕ. ಡೆನ್ಮಾರ್ಕ್
ದೇಶ , ಹ್ಯಾಮ್ಲೆಟ್ , ಗರಟ್ರೂಡ , ಕ್ಲಾಡಿಯಸ್ , ಓಫಿಲಿಯಾ , ರಾಜನ ಭೂತ ..ಇತ್ಯಾದಿ ಎಲ್ಲವೂ ಎಂದೂ ಕೇಳದ್ದು. ನಾವು ಕೇಳುತ್ತ , ಓದುತ್ತ ಬಂದ ಕಥೆಗಳಿಗಿಂತಲೂ ತೀರ ಭಿನ್ನ. “ಅಣ್ಣಾ , ಎಂತಾ ಕಥಿಗಳಪ್ಪಾ ಇವು? ವಿಚಿತ್ರನ ಅವ” ಅಂತ ನಾನಂದಾಗ ನಮ್ಮ ತಂದೆಯವರಂದರು , ” ಇವು ಶೇಕ್ಸಪಿಯರ್ ಅನ್ನೋ ಮಹಾಕವಿ ಬರೆದ ನಾಟಕಗಳು. ಮೂಲ ಇಂಗ್ಲೀಷ್ ಭಾಷೆಯಲ್ಯವ . ಅವನು ಜಗತ್ತಿನ ಶ್ರೇಷ್ಠ ನಾಟಕಕಾರರೊಳಗ ಒಬ್ಬನು. ಈಗ ನಾನು ತಂದದ್ದು ಅ ನಾಟಕಗಳ ಕಥೆಗಳು ಮಾತ್ರ. ಮಕ್ಕಳಿಗಾಗಿ ಕನ್ನಡದಲ್ಲಿ ಬರೆದದ್ದು.
ಈಗಿನಿಂದನ ನಿಮಗ ಗೊತ್ತಾಗಬೇಕು. ಮುಂದೆ ದೊಡ್ಡವರಾದ ಮೇಲೆ ನೀವು ಒರಿಜಿನಲ್ ನಾಟಕಗಳನ್ನು ಓದಬೇಕು ,ಇಂಗ್ಲೀಷ್ ನ್ಯಾಗ . ಅಗ ನಿಮಗ ಗೊತ್ತಾಗತದ ಈ ನಾಟಕಗಳ ಮಹತ್ವ ಮತ್ತು ಕವಿಯ ಯೋಗ್ಯತೆ !” ಆಗ ನಾನು ನಾಲ್ಕನೆಯ ಕ್ಲಾಸಿನಲ್ಲಿ ಓದುತ್ತಿದ್ದೆ. ಎ ಬಿ ಸಿ ಡಿ ಸಹ ಗೊತ್ತಿರಲಿಲ್ಲ . “ಹೂಂ ಅಣ್ಣಾ” ಅಂದಿದ್ದೆ.
ಮುಂದೆ ಭಡಭಡನೆ ಎಲ್ಲ ಹತ್ತೂ ಕಥೆಗಳನ್ನು ಓದಿ ಮುಗಿಸಿದ್ದೆ. ಇಂಗ್ಲೀಷ್ ಭಾಷೆಯ ಗಂಧ ಗಾಳಿಯಿಲ್ಲದ ವಯಸ್ಸಿನಲ್ಲಿ ನನ್ನ ಮನದಲ್ಲಿ ಶೇಕ್ಸಪಿಯರ್ ಕವಿಯ ಬಗ್ಗೆ ಹಾಗೂ ಇಂಗ್ಲಿಷ್ ಭಾಷೆಯ ಬಗ್ಗೆ ಸಣ್ಣ ಪ್ರೀತಿಯೊಂದು ಮೊಳೆತಿತ್ತು.
ಕ್ರಿ.ಶ. ೧೫೬೪ರ ಎಪ್ರಿಲ್ ೨೩ ರಂದು ಇಂಗ್ಲೆಂಡಿನ ಸ್ಟ್ರಾಟಫೋರ್ಡ ಅಪಾನ್ ಅವನ್ ಎಂಬ ಹಳ್ಳಿಯಲ್ಲಿ ವಿಲಿಯಮ್ ಶೇಕ್ಸಪಿಯರನ ಜನನವಾಯಿತು. ಅಲ್ಲಿಯ ಗ್ರಾಮರ ಸ್ಕೂಲ್
ಒಂದರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದನು. ಶಾಲೆಯ ಕೋಣೆಗಳಲ್ಲಿ
ಕಲಿತದ್ದಕ್ಕಿಂತ ಬಯಲು ಬದುಕಿನಲ್ಲಿ ಕಲಿತದ್ದೇ ಅಪಾರ. ತನ್ನ ವಯಸ್ಸಿನ ೧೮ ನೆಯ ವರ್ಷದಲ್ಲಿ ೨೬ ವರ್ಷದ Anne ಎಂಬ ಯುವತಿಯೊಂದಿಗೆ ಮದುವೆಯೂ ಆದನು. ಮೂರು ಮಕ್ಕಳು
ಹುಟ್ಟಿದರು. ಸುಮಾರು ೧೫೮೫ರ ನಂತರ ರಾಜಧಾನಿ ಲಂಡನ್ ಶಹರಿಗೆ ತೆರಳಿದನು . ( ಇಂಗ್ಲಂಡ್ ಆಗ ಎಲಿಝಬೆತ್ ಒಂದನೆಯ ರಾಣಿಯ ಆಳ್ವಿಕೆಯಲ್ಲಿತ್ತು.ರಾಜಕೀಯವಾಗಿ ಸ್ಥಿರವೂ, ಆರ್ಥಿಕವಾಗಿ ಬಲಿಷ್ಠವೂ ಆಗಿದ್ದ ದೇಶದಲ್ಲಿ ನೆಮ್ಮದಿ, ಶಾಂತಿ ನೆಲೆಸಿತ್ತು. ಸಹಜವಾಗಿಯೇ ಕಾವ್ಯ , ನಾಟಕದಂಥ ಕಲೆಗಳಿಗೆ ಅಧಿಕ ಪ್ರೋತ್ಸಾಹ ದೊರಕಿತು. ಕವಿಗಳಿಗೆ, ಬರಹಗಾರರಿಗೆ, ನಾಟಕ ಕರ್ಮಿಗಳಿಗೆ ಸುಗ್ಗಿಯ ಸಂಭ್ರಮ ! England , Elizabethan England was a nest of singing birds! ) ಕೆಲವರೊಂದಿಗೆ ಸೇರಿ “ದ ಲಾರ್ಡ್ ಚೇಂಬರ್ಲೆನ್ಸ ಮೆನ್” ಎಂಬ ನಾಟಕ ಕಂಪನಿ ಆರಂಭಿಸಿದನು. ನಾಟಕಗಳಲ್ಲಿ ಪಾತ್ರ ಮಾಡುತ್ತ ನಾಟಕಗಳನ್ನುಬರೆಯಲಾರಂಭಿಸಿದ. ಶುರುವಾತಿನಲ್ಲಿ ಐದನೆಯ ಹೆನ್ರಿ , ಆರನೆಯ ಹೆನ್ರಿ, , ಎರಡನೆಯ ರಿಚರ್ಡ ಜ್ಯೂಲಿಯಸ್ ಸೀಜರ್ ಗಳಂತಹ ಐತಿಹಾಸಿಕ ನಾಟಕಗಳನ್ನು ರಚಿಸಿದನು.
ಅಪರೂಪವೆಂಬಂತೆ ರೋಮಿಯೋ ಮತ್ತು ಜ್ಯೂಲಿಎಟ್ ನಂತಹ ದುರಂತ ನಾಟಕವನ್ನೂ ಬರೆದ. ಮುಂದೆ ರೋಮಾನ್ಸ್ ಹಾಗೂ ಹಾಸ್ಯ ನಾಟಕಗಳನ್ನು ಬರೆಯಲಾರಂಭಿಸಿದನು. ” ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ , ಎಜ್ ಯೂ ಲೈಕ್ ಇಟ್ , ಮರ್ಚೆಂಟ್ ಆಫ್ ವೇನಿಸ್ , ಮಚ್ ಅಡೋ ಅಬೌಟ್ ನಥಿಂಗ್ , ಕೊಮಿಡಿ ಆಫ್ ಎರ್ರರ್ಸ….”ಇತ್ಯಾದಿ ನಾಟಕಗಳು ಹೆಸರಾಗಿವೆ .
ಕ್ರಿ .ಶ . ೧೬೦೦ ರ ನಂತರ ಶೇಕ್ಸಪಿಯರನ ಬರವಣಿಗೆಯ ದಿಕ್ಕು ದುರಂತ ನಾಟಕಗಳತ್ತ ತಿರುಗಿತು . “ಹ್ಯಾಮ್ಲೆಟ್ ,ಮ್ಯಾಕ್ಬೆಥ , ಕಿಂಗ್ ಲಿಯರ ಹಾಗೂ ಒಥೆಲೋ” ನಾಟಕಗಳಂತೂ ವಿಶ್ವ ವಿಖ್ಯಾತ
ಎನಿಸಿವೆ. ಜಗತ್ತಿನ ಸುಮಾರು ಎಲ್ಲ ಭಾಷೆಗಳಲ್ಲಿ ಅನುವಾದಗೊಂಡಿವೆಯಲ್ಲದೇ ಇಂದಿಗೂ ಈ ಕಥೆಗಳನ್ನಾಧರಿಸಿದ ರೂಪಾಂತರಗಳನ್ನು ಲೇಖಕರು ಬರೆಯುತ್ತಾರೆ , ನಾಟಕವಾಡುತ್ತಾರೆ,
ಸಿನೆಮಾ ಮಾಡುತ್ತಾರೆ.
ಆನಂತರ ಬರೆದದ್ದು ಟ್ರ್ಯಾಜಿ ಕೊಮಿಡಿಗಳು. ಈ ಕಥೆಗಳು ನೋವಿನ ದಾರಿಯಲ್ಲಿ ಸಾಗಿ ಕೊನೆಗೆ ಸುಖದ ನೆಲೆ ಕಂಡುಕೊಳ್ಳುವ ಕಥೆಗಳು. ” ದ ವಿಂಟರ್ಸ ಟೇಲ್ , ದ ಟೆಂಪೆಸ್ಟ ಮತ್ತು ಸಿಂಬಲಿನ್ ” -ಈ ನಾಟಕಗಳು ಟ್ರ್ಯಾಜಿ ಕೊಮಿಡಿ ಪ್ರಕಾರಕ್ಕೆ ಸೇರಿವೆ. ಒಟ್ಟು ೩೭ ನಾಟಕಗಳನ್ನು ಬರೆದದ್ದಲ್ಲದೇ ಸುಮಾರು ೧೫೦ ಸುನೀತಗಳನ್ನು (sonnets ) ಶೇಕ್ಸಪಿಯರ್ ರಚಿಸಿದ್ದಾನೆ . ಹಾಗೆ ನೋಡಿದರೆ ಅವನ ನಾಟಕಗಳ ಯಾವ ಕಥೆಯೂ ಸ್ವಂತದ್ದಲ್ಲ . ಅದಾಗಲೇ ಪ್ರಚಲಿತವಿದ್ದ ಕಥೆಗಳನ್ನೇ ಉಪಯೋಗಿಸಿ ನಾಟಕಗಳನ್ನು ಬರೆದನು . ಅದರೆ ಪ್ರತಿ ನಾಟಕದ ಪಾತ್ರಗಳನ್ನು ಅದ್ಭುತವೆಂಬಂತೆ ಮರು ಸೃಷ್ಟಿಸಿದನು. ಅವು ಸಹಜ, ಸಶಕ್ತ ಹಾಗೂ ಜೀವಂತ! ಮನುಷ್ಯನ ಮನಸ್ಸಿನ ಭಾವ- ಅನುಭಾವ , ವೇದನೆ-ಸಂವೇದನೆ , ಆಸೆ-ನಿರಾಶೆ , ತವಕ-ತಲ್ಲಣ , ವೇಗ-ಉದ್ವೇಗ , ಕೋಪ- ತಾಪ , ರಾಗ- ಅನುರಾಗ , ದ್ವೇಷ – ರೋಷ, ಸಡಿಲು-ಸಂಯಮಗಳನ್ನು ಆಳವಾದ ಅರಿವಿನಿಂದ ಪಾತ್ರಗಳಲ್ಲಿ ಕಾಣಿಸಿದ್ದಾನೆ . ಅಂತೆಯೇ ದೇಶ , ಭಾಷೆ , ಕಾಲಮಾನಗಳನ್ನು ಮೀರಿ ಶೇಕ್ಸಪಿಯರನು ಎಲ್ಲ ಸಾಹಿತ್ಯಾಸಕ್ತರನ್ನು ತಲುಪಿದ್ದಾನೆ ,ತಟ್ಟಿದ್ದಾನೆ.
ಅವನ ನಾಟಕಗಳ ಪಾತ್ರಗಳಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುತ್ತೇವೆ , ಸುತ್ತ ಮುತ್ತಲಿನವರನ್ನು ಗುರುತಿಸುತ್ತೇವೆ.
ಅದರಲ್ಲೂ ಅವನ ಹ್ಯಾಮ್ಲೆಟ್ , ಮ್ಯಾಕ್ಬೆಥ್ , ಒಥೆಲೋ ಹಾಗೂ ಕಿಂಗ್ ಲಿಯರ ಜಗತ್ತಿನ ಸಾಹಿತ್ಯ ಇತಿಹಾಸದಲ್ಲಿ ಶ್ರೇಷ್ಠ ದುರಂತ ನಾಟಕಗಳೆಂದು ಪರಿಗಣಿಸಲ್ಪಡುತ್ತವೆ. ಈ ಕಥಾನಾಯಕರ
ಬದುಕಿನ ದುರಂತಕ್ಕೆ ವಿಧಿ ಕಾರಣವಲ್ಲ ; ಅವರವರ ಸ್ವಭಾವದಲ್ಲಿಯ ದೋಷ ಮತ್ತು ಅದಕ್ಕನುಗುಣವಾಗಿ ಅವರು ತೆಗೆದುಕೊಂಡ ನಿರ್ಧಾರಗಳ ಪರಿಣಾಮವೇ ಅವರವರ
ಜೀವನದ ದುರಂತಕ್ಕೆ ಕಾರಣ. ತಮ್ಮ ಗೋರಿಯನ್ನು ತಾವೇ ತೋಡಿಕೊಳ್ಳುವ ವಿಷಾದದ ಕಥೆಗಳು! ಮೋಸದಿಂದ ಅಪ್ಪನನ್ನು ಕೊಂದ ಚಿಕ್ಕಪ್ಪನ ಮೇಲೆ ಸೇಡು ತೀರಿಸಿಕೊಳ್ಳಬೇಕಿದ್ದ ಹ್ಯಾಮ್ಲೆಟ್
ಒಂದು ಗಟ್ಟಿ ನಿರ್ಧಾರಕ್ಕೆ ಬರಲೇಯಿಲ್ಲ. ಅವನ ಮನಸ್ಸು ಗೊಂದಲ , ಆತಂಕ , ಸಂಶಯ , ಹಿಂಜರಿತ ,ಭೀತಿ , ದೌರ್ಬಲ್ಯಗಳ ಗೂಡು. ಮನಸ್ಸು ನಿರ್ಧರಿಸಿದರೂ ಸಾಥ್ ಕೊಡದ ಶರೀರ. To be or not to be ಯ ತೊಳಲಾಟದಲ್ಲೇ ಅಂತ್ಯವಾಗಿ ಹೋದ ಹ್ಯಾಮ್ಲೆಟ್.
“ಮುಂದೆ ರಾಜನಾಗುವಿ” ಎಂದು ಮಾಟಗಾತಿಯರು ನುಡಿದ ಭವಿಷ್ಯವನ್ನು ಇಂದೇ ನಿಜಮಾಡುವ ಅತೀ ಅವಸರ ಮ್ಯಾಕ್ಬೆಥನಿಗೆ. ಅವನಿಗೆ ಕುಮ್ಮಕ್ಕು ನೀಡುವ ಹೆಂಡತಿ ಲೇಡಿ ಮ್ಯಾಕ್ಬೆಥ್. ಅತೀ ದುರಾಸೆ ಮತ್ತು ಮಹತ್ವಾಕಾಂಕ್ಷೆಯ ಬೆನ್ನುಹತ್ತಿ , ಭ್ರಮೆಹರಿದಾಗ ಹೆಂಡತಿ ಹುಚ್ಚಿಯಾದರೆ , ಗಂಡ ಶವವಾಗಿ ಹೋದನು. ಇನ್ನು ಒಥೆಲೊನ ಕಥೆಯೇ ಬೇರೆ. ಇನ್ನೊಬ್ಬರ ಮಾತುಕೇಳಿ (ಅದು ನಿಜವೂ ಅಲ್ಲ ) ತನ್ನ ಮುಗ್ಧ ಹೆಂಡತಿಯ ಮೇಲೆ ಸುಖಾಸುಮ್ಮನೆ ಸಂಶಯಪಟ್ಟು , ಕೊನೆಗೂ ಅವಳ ಕೊಲೆಗೈಯ್ಯುವ ಅವಿವೇಕಿ ಒಥೆಲೊ. ಸತ್ಯ ನಿಚ್ಚಳವಾದಾಗ , ಪಶ್ಚಾತ್ತಾಪದಿಂದ ತಾನೂ ಜೀವ ಕಳೆದುಕೊಳ್ಳುತ್ತಾನೆ. ಆಧಾರವಿಲ್ಲದ ಅನುಮಾನದಿಂದಾಗಿ ಪ್ರೇಮಮಯವಾಗಬೇಕಿದ್ದ ಜೀವನವೊಂದು ನಿಷ್ಫಲವಾಗಿ ಹೋಯಿತು. ಸಂಶಯಾತ್ಮಃ ವಿನಶ್ಯತಿ! ಇಂಗ್ಲೆಂಡಿನ ರಾಜ ಲಿಯರನಿಗೆ ಹುಚ್ಚು- ಮುಪ್ಪಿನ ಸ್ಥಿತಿ , ಅಸುರಕ್ಷಿತ ಭಾವ . ಮೂವರು ಹೆಣ್ಣುಮಕ್ಕಳಲ್ಲಿ ಯಾರ್ಯಾರು ತನ್ನನ್ನು ಎಷ್ಟೆಷ್ಟು ಪ್ರೀತಿಸುತ್ತಾರೆಂದು ಪರೀಕ್ಷೆ ಮಾಡಲು ಹೋಗಿ ಪಡಬಾರದ ಸಂಕಟಪಟ್ಟು , ದುರಂತವಾಗುತ್ತಾನೆ ಕಿಂಗ್ ಲಿಯರ.
ಮಹಾಕವಿ ಶೇಕ್ಸಪಿಯರ್ ತನ್ನ ನಾಟಕಗಳಿಂದ ಇಂಗ್ಲೀಷ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರೆ , ಸುಂದರ ಮತ್ತು ಅರ್ಥಗರ್ಭಿತ ನುಡಿಗಟ್ಟುಗಳಿಂದ , ಪದಗುಚ್ಛಗಳಿಂದ ಭಾಷೆಯ
ಭಂಡಾರವನ್ನೂ ತುಂಬಿಸಿ ತುಳುಕಿಸಿದ್ದಾನೆ. ಸಾಹಿತ್ಯ ಹಾಗೂ ಭಾಷಾಪ್ರೇಮಿಗಳಲ್ಲದೇ ಸಾಮಾನ್ಯರೂ ಸಹಜವೆಂಬಂತೆ ಅವನ ನುಡಿಗಟ್ಟುಗಳನ್ನು ಬಳಸುತ್ತಾರೆ. ” Sweet are the uses of
adversity “, ” Lend everyone thy ear but few thy tongue” , Readiness is all” , “The course of true love never did run smooth” , ” Love is blind and lovers can’t
see” , “Et tu Brutus? “, ” When beggers die no comets are seen ” , ” Uneasy lies the head that wears the crown” , “Love’s not love if alters when alteration finds” ,” ” What’s in a name , a rose by any name would smell as sweet “, To thine own self be true “,
“How sharper than the serpent’s tooth, to have a thankless child ” ,”All that glitters is not gold ” ….. ಇನ್ನೂ ಅದೆಷ್ಟೋ.
ಕಳೆದ ಮೂರು ನಾಲ್ಕು ಶತಮಾನಗಳಿಂದ ಮಹಾಕವಿ ಶೇಕ್ಸಪಿಯರನ ಕೃತಿಗಳನ್ನು ವಿಶ್ವದಾದ್ಯಂತ ಲಕ್ಷೋಪಲಕ್ಷ ಆಸಕ್ತರು , ರಸಿಕರು , ಕಲಾವಿದರು, ಪಂಡಿತರು ಓದುತ್ತಿದ್ದಾರೆ , ಅಭ್ಯಸಿಸುತ್ತಿದ್ದಾರೆ ನಟಿಸುತ್ತಿದ್ದಾರೆ , ವಿಮರ್ಶಿಸುತ್ತಿದ್ದಾರೆ , ಸಂಶೋಧಿಸುತ್ತಿದ್ದಾರೆ , ವಾದ – ವಿವಾದ ಮಾಡುತ್ತಿದ್ದಾರೆ , ಅವನ ನಾಟಕಗಳ ಮೂಲಕ ಅವನ ವಯಕ್ತಿಕ ಬದುಕನ್ನು , ಗುಣ ಸ್ವಭಾವವನ್ನು , ಆಚಾರ-ವಿಚಾರಗಳನ್ನು ತಿಳಕೊಳ್ಳಬಹುದೇನೋ ಎಂದು ಶೋಧಿಸುತ್ತಿದ್ದಾರೆ , ಶೇಕ್ಸಪಿಯರ ಎಂಬ ವ್ಯಕ್ತಿ ಇದ್ದಿರಲೇ ಇಲ್ಲ ಎಂದು ಕೆಲವರು ಮಂಡಿಸುತ್ತಿದ್ದರೆ , ಸಾವಿರಾರು ಜನರು ಅದನ್ನು ಖಂಡಿಸುತ್ತಿದ್ದಾರೆ. ಅಂತೂ ನಾನೂರು ವರ್ಷಗಳೇ ಕಳೆದರೂ ಶೇಕ್ಸಪಿಯರನ ಬಗ್ಗೆ ಅಖಂಡ ಪ್ರೀತಿ ಮತ್ತು ಕುತೂಹಲ ಬರಕರಾರ ಆಗಿಯೇ ಉಳಿದಿದೆ. ಇಂಗ್ಲೀಷ್ ಕವಿ ಬೆನ್ ಜಾನ್ಸನ್ ಹೇಳಿದಂತೆ ” Shakespeare was not of an age but for all time ! ” ಎಂಬುದು ಇಂದಿಗೂ ನಿತ್ಯ , ಎಂದೆಂದಿಗೂ ಸತ್ಯ!!