Latest

ಡ್ರಗ್ಸ್ ದಂಧೆ ಬಗ್ಗೆ ಸ್ಫೋಟಕ ಮಾಹಿತಿ ನೀಡ್ತಾರಾ ಬೆಳಗಾವಿ ಮೂಲದ ಸಂಬರಗಿ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟೀಸ್ ನೀಡಿದ ಹಿನ್ನಲೆಯಲ್ಲಿ ಸಂಬರಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಗಾಲೇ ನಾನು ನೀಡಿದ್ದ ಮೂರು ಮಾಹಿತಿಗಳು ನಿಜವಾಗಿವೆ. ನಾನು ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿಯಲ್ಲ. ಕರ್ನಾಟಕದಿಂದ ಮುಂಬೈಗೆ ಸೊಸೆಯಾಗಿ ಹೋಗಿರುವ ಕುಟುಂಬದ ವ್ಯಕ್ತಿ ಬಗ್ಗೆ ನಾನು ಹೇಳಿದ್ದೆ. ಅದರಂತೆ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ಪ್ರಕರಣಕ್ಕೂ ಬೆಂಗಳೂರಿಗೂ ಲಿಂಕ್ ಇದೆ ಎಂದು ಹೇಳಿದ್ದೆ. ಅದರಂತೆ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರ ಕೇಶವ್ ಮೂರ್ತಿ ಮಗನಿಗೆ ಎನ್ ಸಿಬಿ ನೋಟೀಸ್ ನೀಡಿದೆ. ಶಾಸಕ ಜಮೀರ್ ಅಹ್ಮದ್ ಗೂ ಶ್ರೀಲಂಕಾ ಕ್ಯಾಸಿನೋ ನಂಟಿರುವ ಬಗ್ಗೆಯೂ ಹೇಳಿದ್ದೆ ಎಂದು ತಿಳಿಸಿದ್ದಾರೆ.

ಇದೀಗ ಸಿಸಿಬಿ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ನನ್ನ ಬಳಿ ಜಮೀರ್ ಅಹ್ಮದ್ ಬಗ್ಗೆ ದಾಖಲೆಗಳಿದ್ದು, ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಶಾಂತ ಸಂಬರಗಿ ಬೆಳಗಾವಿ ಜಿಲ್ಲೆ ಅಥಣಿಯ ಸಂಬರಗಿ ಮನೆತನದವರು. ಈಗಾಗಲೆ ಡ್ರಗ್ಸ್ ಸಂಬಂಧ ಹಲವಾರು ಮಾಹಿತಿಗಳನ್ನು ಹೊರಹಾಕಿರುವ ಅವರು, ಸಂಜನಾ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕುವುದಾಗಿಯೂ ಹೇಳಿಕೆ ನೀಡಿದ್ದಾರೆ. ಸಂಜನಾ ಅವರು ಸಂಬರಗಿ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button