Kannada NewsKarnataka News

ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಅನಿಶ್ಚಿತತೆಯ ಕಾರ್ಮೋಡ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ ನಿಶ್ಚಯವಾಗಿದೆ. ಅಂದು ಇಡೀ ದಿನ ರಾಜ್ಯ ರಾಜಕೀಯದ ಪ್ರಸ್ತುತ ವಿದ್ಯಮಾನಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿದೆ.

2011, 2017ರ ನಂತರ ಈಗ ಮತ್ತೊಮ್ಮೆ ಬೆಳಗಾವಿಯಲ್ಲಿ ಈ ಸಭೆ ನಡೆಯಲಿದ್ದು, ಬೆಳಗಾವಿ ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವುದರಿಂದ ಮಹತ್ವ ಪಡೆದಿದೆ.

ಡಿಸೆಂಬರ್ 5ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡಿರುವುದರಿಂದ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು, ಪಕ್ಷದ ಎಲ್ಲ ಮುಖಂಡರು ಕಾರ್ಯಕಾರಿಣಿ ಸಭೆಗೆ ಹಾಜರಾಗಬೇಕಿದೆ. ಬಂದ್ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಲ್ಲಿ ನಿಗಾ ಇಡಲು ಸಿಎಂ ಹಾಗೂ ಸಚಿವರು ಕೇಂದ್ರ ಸ್ಥಾನದಲ್ಲಿರಬೇಕಾಗುತ್ತದೆ. ಅಲ್ಲದೆ ಬಂದ್ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೂ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿಣಿ ಮುಂದೂಡಲ್ಪಡುವ ಸಾಧ್ಯತೆಯೂ ಇಲ್ಲದಿಲ್ಲ.

ಆದರೆ, ಬಿಜೆಪಿ ಕಾರ್ಯಕಾರಿಣಿ ಸಭೆಗೆ ಎಲ್ಲ ತಯಾರಿ ನಡೆದಿದೆ. ಧರ್ಮನಾಥ ಭವನ, ಗಾಂಧಿಭವನ ಅಥವಾ ಕೆಎಲ್ಇ ಜೀರಗೆ ಸಭಾಭವನದಲ್ಲಿ ಸಭೆ ನಡೆಸಲಾಗುವುದು. ಸ್ಥಳ ಇಂದು ಅಥವಾ ನಾಳೆಯೊಳಗೆ ಅಂತಿಮವಾಗಲಿದೆ ಎಂದು ಕಾರ್ಯಕಾರಿಣಿ ಆತಿಥ್ಯವಹಿಸಿಕೊಂಡಿರುವ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಕಾರ್ಯಕಾರಿಣಿ ಸಭೆಯ ದಿನಾಂಕ ಬದಲಾಗುವುದಿಲ್ಲ. ಅದು ಒಳಾಂಗಣ ಸಭೆಯಾಗಿದ್ದರಿಂದ ಬಂದ್ ನಿಂದ ಯಾವುದೇ ಪರಿಣಾಮವಾಗುವುದಿಲ್ಲ. ಎಲ್ಲ ನಾಯಕರೂ ಭಾಗವಹಿಸಲಿದ್ದಾರೆ ಎಂದು ಶಶಿಕಾಂತ ಪಾಟೀಲ ತಿಳಿಸಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರು ಈ ಬಗ್ಗೆ ಇನ್ನಷ್ಟೆ ಖಚಿತಪಡಿಸಬೇಕಿದೆ.

ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ಬೆಳಗಾವಿ ಲೋಕಸಭೆ ಉಪಚುನಾವಣೆ: ಎರಡೂ ಪಕ್ಷಗಳಲ್ಲಿ ಮಹತ್ವದ ಬೆಳವಣಿಗೆ

ಸಂಪುಟ ವಿಸ್ತರಣೆ ಕಸರತ್ತು; ಬಿ.ಎಲ್.ಸಂತೋಷ್ ಭೇಟಿಯಾದ ಸಚಿವ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button