Latest

72ನೇ ಗಣರಾಜ್ಯೋತ್ಸವ ಸಂಭ್ರಮ; ರಾಜಪಥ್ ನಲ್ಲಿ ರಾಷ್ಟ್ರಪತಿ ಧ್ವಜಾರೋಹಣ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 72ನೇ ಗಣರಾಜ್ಯೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ರಾಜಪಥ್ ನಲ್ಲಿ ಸೇನಾ ಶಕ್ತಿ ಪ್ರದರ್ಶನ ಅನಾವರಣಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಈಬಾರಿ ಸಂಕ್ಷಿಪ್ತವಾಗಿ ಗಣರಾಜ್ಯೋತ್ಸ ಆಚರಣೆ ನಡೆಯುತ್ತಿದೆ.

72ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಪುಷ್ಪನಾನ ಸಲ್ಲಿಸಿದರು. ಬಳಿಕ ರಾಜಪಥ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಈ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದೇಶಿ ಅತಿಥಿ ಭಾಗಿಯಾಗ್ತಿಲ್ಲ. ಜೊತೆಗೆ ಬಾಂಗ್ಲಾದೇಶ ವಿಮೋಚನೆಯ 50ನೇ ವರ್ಷದ ನೆನಪಿಗಾಗಿ ಈ ಬಾರಿಯ ಗಣರಾಜ್ಯೋತ್ಸವ ಪರೇಡ್​ನಲ್ಲಿ ಬಾಂಗ್ಲಾದೇಶದ ಸೇನಾ ತುಕಡಿ ಭಾಗಿಯಾಗಿದೆ.

ಜಾಟ್ ರೆಜಿಮೆಂಟ್, ಜಮ್ಮು-ಕಾಶೀರ ರೈಫಲ್ ರೆಜಿಮೆಂಟ್, ಸಿಖ್ ರೆಜಿಮೆಂಟ್, ಭೂ ಸೇನೆ, ವಾಯು ಸೇನೆಯ ತಲಾ 96 ಸೈನಿಕರಿಂದ ಪರೇಡ್ ನಡೆಯುತ್ತಿದ್ದು, ನೌಕಾಪಡೆಯ ಐ ಎನ್ ಎಸ್ ವಿಕ್ರಾಂತ್ ಸ್ತಬ್ಧ ಚಿತ್ರ, ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನ ಸೇರಿದಂತೆ 31 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಕೊರೊನಾ ಹಿನ್ನೆಲೆಯಲ್ಲಿ 25 ಸಾವಿರ ಜನರಿಗೆ ಮಾತ್ರ ಪರೇಡ್ ವೀಕ್ಷಣೆ ಅವಕಾಶ ಮಾಡಿಕೊಡಲಾಗಿದೆ. 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಪರೇಡ್ ವೀಕ್ಷಣೆಗೆ ಅವಕಾಶವಿದೆ.

ಗುಜರಾತ್ ನ ಜಮ್ ನಗರದ ರಾಜಮನೆತನ ಉಡುಗೊರೆಯಾಗಿ ನೀಡಿದ್ದ ವಿಶೇಷ ಪಾಗ್ಡಿ ಧರಿಸುವ ಮೂಲಕ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button