ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಐ ಟಿ ) ದ ಮೆಕ್ಯಾನಿಕಲ್ ವಿಭಾಗದ ನಾಲ್ಕನೆಯ ಸೆಮಿಸ್ಟರ್ ನಲ್ಲಿ ಓದುತ್ತಿರುವ ಅಬ್ದುಲ್ ಜಬ್ಬರ ಖಾನ್, ಅಜಯ್ ಲೆಂಗಡೆ, ಅಂಕುರ್ ಚಿಟ್ನಿಸ್, ಅಜಿತ ನವಿ ಮತ್ತು ಅವನ ಮುನ್ಷಿ ವಿದ್ಯಾರ್ಥಿಗಳನ್ನ ಒಳಗೊಂಡ “ಮೆಕ್ಯಾಟ್ರೊನ್” ತಂಡ ಪ್ರೊ. ಎಸ್. ಎಲ್.ಗೊಂಬಿ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ ಪ್ರಾಜೆಕ್ಟ್, ಹೆಸರಾಂತ ಬಹುರಾಷ್ಟ್ರೀಯ ಕಂಪನಿ ಕೆ ಪಿ ಐ ಟಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ವಿನ್ಯಾಸ ಸ್ಪರ್ಧೆಯಲ್ಲಿ ಶ್ರೇಷ್ಠ ೩೦ ತಂಡಗಳಲ್ಲಿ ಆಯ್ಕೆಯಾಗಿ ಫೆ ೨೨ ರಿಂದ ೨೪ ರವರೆಗೆ ಪುಣೆಯಲ್ಲಿ ನಡೆದ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಪಾಲ್ಗೊಂಡಿತ್ತು.
ಕೆ ಪಿ ಐ ಟಿ ಸ್ಪಾರ್ಕಲ್ -೧೯ ಈ ಸ್ಪರ್ಧೆ ಭಾರತದ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಇದರ ಸಹಯೋಗದೊಂದಿಗೆ ಕೆ ಪಿ ಐ ಟಿ ಟೆಕ್ನಾಲಜೀಸ್ ಲಿಮಿಟೆಡ್ ಶಕ್ತಿ ಮತ್ತು ಅದರ ಚಲಶೀಲತೆ ಎಂಬ ಉದ್ದೇಶದೊಂದಿಗೆ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಂದ ಹೊಸ ಹೊಸ ತಂತ್ರಜ್ಞಾನ ಯೋಜನೆಗಳನ್ನು ಆಹ್ವಾನಿಸಿತ್ತು. ಅರ್ಹತಾ ಸುತ್ತಿನಲ್ಲಿ ಐ ಐ ಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮತ್ತು ಎನ್ ಐ ಟಿ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) 28 ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳ ಜೊತೆಗೆ 1121 ಎಂಜಿನಿಯರಿಂಗ್ ಮತ್ತು ವಿಜ್ಞಾನ ಮಹಾವಿದ್ಯಾಲಯಗಳಿಂದ 22,150 ಕ್ಕಿಂತ ಹೆಚ್ಚಿನ ಐಡಿಯಾಗಳು ಬಂದಿದ್ದವು. ಅವುಗಳ ನಾವಿನ್ಯತೆ, ಲಭ್ಯತೆ, ತಾಂತ್ರಿಕತೆ ಮತ್ತು ವಾಣಿಜ್ಯ ಕಾರ್ಯಸಾಧ್ಯತೆಯ ಅಂಶಗಳ ಮೇಲೆ 1915 ರ ತಂಡಗಳಲ್ಲಿ ಶ್ರೇಷ್ಟ 30 ತಂಡಗಳನ್ನು ಪ್ರದರ್ಶನ ಸುತ್ತಿಗೆ ಆಯ್ಕೆ ಮಾಡಿದರು. ಈ ೩೦ ರಲ್ಲಿ ಜಿ ಐ ಟಿ ಯು ಒಂದಾಗಿತ್ತು. ಈ ಪ್ರೊಜೆಕ್ಟಗೆ ಕೆ ಎಲ್ ಎಸ್ ಸಂಸ್ಥೆ ಅನುದಾನ ಒದಗಿಸಿತ್ತು.
ಜಿ ಐ ಟಿ ಯ ಈ ಪ್ರಾಜೆಕ್ಟ್ ವಿದ್ಯುತ್ ಉತ್ಪಾದನೆ ಮೇಲೆ ವಿನ್ಯಾಸ ಮಾಡಲಾಗಿತ್ತು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ (ಎ ಐ ಸಿ ಟಿ ಇ) ಚೇರಮನ್ ಡಾ. ಅನಿಲ ಸಹಸ್ರಬುದ್ದೆ ಮುಖ್ಯ ನಿರ್ಣಾಯಕರಾಗಿ ಆಗಮಿಸಿ ಖುದ್ದಾಗಿ ಜಿ ಐ ಟಿ ಯ ಪ್ರೊಜೆಕ್ಟನ್ನು ಪರೀಕ್ಷಿಸಿ ಮೌಲ್ಯಮಾಪನ ಮಾಡಿ ವಿದ್ಯಾರ್ಥಿಗಳ ಕಲ್ಪನಾ ಶಕ್ತಿಯನ್ನು ಮತ್ತು ಶ್ರಮವನ್ನು ಶ್ಲಾಘಿಸಿದರು. ಹಾಗೆಯೇ ಈ ಮೌಲ್ಯಮಾಪಕರ ತಂಡದಲ್ಲಿ ಹೆಸರಾಂತ ವಿಜ್ಞಾನಿ ಪದ್ಮ ವಿಭೂಷಣ ಡಾ. ರಘುನಾಥ್ ಮಹಾಶೆಳ್ಕರ್, ಡಾ. ಪೀಟರ್ ಎಫ್., ಡಾ. ಕಾರ್ಲ್ ಪೆರಿನ್ ಹಾಗೂ ಮಾಶಾಹಿಗೆ ಮಿಜ್ಯುಯಾಮ ಇದ್ದರು.
ಈ ಸಾಧನೆಗೆ ಕೆ ಎಲ್ ಎಸ್ ಕಾರ್ಯಾಧ್ಯಕ್ಷ ಎಂ.ಆರ್.ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ.ಎ. ಎಸ್.ದೇಶಪಾಂಡೆ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ ಕಿತ್ತೂರ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.