Kannada NewsKarnataka NewsLatest
ಶಿಕ್ಷಕರು ಉಲ್ಲಸಿತರಾಗಿದ್ದಾಗ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ – ಲಕ್ಷ್ಮಿ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿಕ್ಷಕರ ಮೇಲೆ ದೇಶದ ಮುಂದಿನ ಭವಿಷ್ಯ ನಿಂತಿದೆ. ಹಾಗಾಗಿ ಆದರ್ಶ ಮಕ್ಕಳನ್ನು ರೂಪಿಸುವ ಜವಾಬ್ದಾರಿಯನ್ನು ಶಿಕ್ಷಕರು ತೆಗೆದುಕೊಳ್ಳಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಶಿಕ್ಷಕರ ಮೇಲೆ ಈ ಸಮಾಜ ಅಪಾರ ಗೌರವ ಮತ್ತು ವಿಶ್ವಾಸವನ್ನು ಇಟ್ಟಿದೆ. ಅದಕ್ಕೆ ತಕ್ಕಂತೆ ನಡೆದುಕೊಂಡು ಸಮಾಜದ ನಿರೀಕ್ಷೆಯನ್ನು ಈಡೇರಿಸುವ ಹೊಣೆ ಶಿಕ್ಷಕರ ಮೇಲಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಪಾಲಕರು ಉದ್ಯೋಗಸ್ಥರಾಗಿರುವುದರಿಂದ ಮಕ್ಕಳ ಕಡೆಗೆ ಲಕ್ಷ್ಯ ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಎಂದ ಹೆಬ್ಬಾಳಕರ್, ಶಿಕ್ಷಕರು ಮಾನಸಿಕವಾಗಿ ಉಲ್ಲಸಿತರಾಗಿದ್ದಾಗ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ನಿಮ್ಮ ಸಮಸ್ಯೆಗಳೇನಿದ್ದರೂ ಸರಕಾರದ ಗಮನಕ್ಕೆ ತಂದು ಪರಿಹರಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆದರ್ಶ ಶಿಕ್ಷಕರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಗಣ್ಯರು ಸನ್ಮಾನಿಸಿದರು.
ಹಿರೇಬಾಗೇವಾಡಿ ಶಿವಾಲಯದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಹಾಗೂ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ವಾತಿ ಇಟಗಿ, ಉಪಾಧ್ಯಕ್ಷೆ ನಾಜರಿನ್ ಕರಿದಾವಲ್, ತಾಲೂಕ ಪಂಚಾಯತ್ ಸದಸ್ಯೆ ಗೌರಮ್ಮ ಪಾಟೀಲ, ಶಮೀನಾ ನದಾಫ್, ಸುರೇಶ ಇಟಗಿ, ಬಿ ಜಿ ವಾಲಿ ಇಟಗಿ, ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.