ಶ್ರೀರಾಮನವಮಿ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ

ಜೀವನದ ನಿಜವಾದ ಮಾರ್ಗವನ್ನು ತೋರಿಸುವ ‘ರಾಮಾಯಣ’

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ಮಹತ್ವ
ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ|’ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.

ಉತ್ಸವವನ್ನು ಆಚರಿಸುವ ಪದ್ಧತಿ
ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆ (ಹರಿಕಥೆ) ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಮಗುವಿನ ತಲೆಗೆ ಕಟ್ಟುವ ಒಂದು ವಸ್ತ್ರ. ಈ ವಸ್ತ್ರವು ಬೆನ್ನಿನವರೆಗೆ ಇರುತ್ತದೆ.) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.’ ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ.

ರಾಮನವಮಿಯ ಮಹತ್ವ
ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮದಿಂದ ಶೇ. ೧೦೦ ರಷ್ಟು ಪರಿಣಾಮವಾಗಿತ್ತು. ಅನಂತರ ಪ್ರತಿವರ್ಷ ಬರುವಂತಹ ಚೈತ್ರ ಶುಕ್ಲ ನವಮಿಗೆ ಬ್ರಹ್ಮಾಂಡದಲ್ಲಿನ ವಾತಾವರಣದಲ್ಲಿ ರಾಮತತ್ತ್ವವು ಪ್ರಕ್ಷೇಪಿಸಿ ವಾತಾವರಣವನ್ನು ಸಾತ್ತ್ವಿಕ ಮತ್ತು ಚೈತನ್ಯಮಯವನ್ನಾಗಿಸಲು ವಿಷ್ಣುಲೋಕದಿಂದ ಶ್ರೀರಾಮತತ್ತ್ವಯುಕ್ತ ವಿಷ್ಣುತತ್ತ್ವವು ಭೂಲೋಕದ ದಿಕ್ಕಿನತ್ತ ಪ್ರಕ್ಷೇಪಿತವಾಗುತ್ತದೆ ಮತ್ತು ಆ ದಿನ ಶ್ರೀರಾಮನ ಅಂಶಾತ್ಮಕ ಜನ್ಮವಾಗುತ್ತದೆ. ಇದರ ಪರಿಣಾಮ ಇಡೀ ವರ್ಷವಿದ್ದು ಬ್ರಹ್ಮಾಂಡದಲ್ಲಿ ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ರಾಮ ತತ್ತ್ವಯುಕ್ತ ಸಾತ್ತ್ವಿಕತೆ ಮತ್ತು ಚೈತನ್ಯವನ್ನು ಬ್ರಹ್ಮಾಂಡದಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಗ್ರಹಿಸಿಕೊಳ್ಳುತ್ತವೆ ಮತ್ತು ಅದರಿಂದ ಅವುಗಳಿಗೆ ತಮ್ಮ ಕಾರ್ಯವನ್ನು ಒಳ್ಳೆಯ ರೀತಿಯಿಂದ ಮಾಡಲು ಸಾಧ್ಯವಾಗುತ್ತದೆ.

ರಾಮಾಯಣದ ಉತ್ಪತ್ತಿ

ಉತ್ಪತ್ತಿ ಮತ್ತು ಅರ್ಥ:
ರಾಮಾಯಣ ಶಬ್ದವು ರಂ + ಅಯನ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತಲೋಕಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ. ‘ಸಮಸ್ತ ಅಯನಂ ರಾಮಾಯಣಮ್|’ ಅಯನ ಎಂದರೆ ಹೋಗುವುದು, ಮಾರ್ಗ ಇತ್ಯಾದಿ ಅರ್ಥವಾಗುತ್ತದೆ. ಪರಬ್ರಹ್ಮ ಪರಮಾತ್ಮಸ್ವರೂಪನಾದ ಶ್ರೀರಾಮನ ಕಡೆಗೆ ಕೊಂಡೊಯ್ಯುವ, ಅದರತ್ತ ಹೋಗಲು ಚಾಲನೆ ನೀಡುವ ಅಥವಾ ಸ್ಫೂರ್ತಿ, ಉತ್ಸಾಹ ನೀಡುವ, ಜೀವನದ ನಿಜವಾದ ಮಾರ್ಗವನ್ನು ತೋರಿಸುವುದೆಂದರೆ ‘ರಾಮಾಯಣ’ವಾಗಿದೆ.

(ಹಬ್ಬಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)

ಸಂಗ್ರಹ –
ಶ್ರೀ. ವಿನೋದ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button