*ಬೆಳಗಾವಿಯಲ್ಲಿ ಬಸವ ಜಯಂತಿ ನಿಮಿತ್ತ ಅದ್ಧೂರಿ ಮೆರವಣಿಗೆ* : *ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಡಾ.ಪ್ರಭಾಕರ ಕೋರೆ ಸೇರಿ ಹಲವು ನಾಯಕರು, ಮಠಾಧೀಶರು ಭಾಗಿ*



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯಲ್ಲಿ ಬಸವ ಜಯಂತಿ ನಿಮಿತ್ತ ಭಾನುವಾರ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆ ಮೂಲಕ ಗಡಿಜಿಲ್ಲೆ ಬೆಳಗಾವಿಯಲ್ಲಿ ಲಿಂಗಾಯತ ಸಮಾಜದ ಶಕ್ತಿ ಪ್ರದರ್ಶನ ನಡೆಯಿತು.
ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ ಹಿನ್ನೆಲೆ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಪಕ್ಷಾತೀತವಾಗಿ ಲಿಂಗಾಯತ ಸಮುದಾಯದ ನಾಯಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ನಿಡಸೋಸಿ ಮಠದ ಶಿವಲಿಂಗೇಶ್ವರ ಸ್ವಾಮಿಗಳು, ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಗಳು, ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸೇರಿ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕೆಎಲ್ಇ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ. ಪ್ರಭಾಕರ ಕೋರೆ, ಸಂಸದ ಜಗದೀಶ ಶೆಟ್ಟರ್, ಶಾಸಕರಾದ ಗಣೇಶ ಹುಕ್ಕೇರಿ, ನಿಖಿಲ್ ಕತ್ತಿ, ಬಾಬಾಸಾಹೇಬ ಪಾಟೀಲ್, ಆಸೀಫ್ ಸೇಠ್, ದುರ್ಯೋಧನ ಐಹೊಳೆ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕ ಮಹಾಂತೇಶ ಕವಟಗಿಮಠ, ಮಹಾಂತೇಶ ಕಡಾಡಿ, ಶಂಕರಗೌಡ ಪಾಟೀಲ, ಎಂ.ಬಿ.ಜಿರಲಿ, ರತ್ನಪ್ರಭಾ ಬೆಲ್ಲದ, ಬಸವರಾಜ ರೊಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮೆರವಣಿಗೆಯಲ್ಲಿ ಮಹಿಳೆಯರ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಟೆಪ್ಸ್ ಹಾಕಿ ಗಮನ ಸೆಳೆದರು.
ವೈಮನಸ್ಸು ಮರೆತು ಮೆರವಣಿಗೆಯಲ್ಲಿ ಲಿಂಗಾಯತ ಸಮುದಾಯದ ವಿವಿಧ ಸಂಘಟನೆಗಳು ಭಾಗಿಯಾಗದ್ದವು. ಜಾಗತಿಕ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾ, ಪಂಚಮಸಾಲಿ ಸಮಾಜ ಸೇರಿ ವಿವಿಧ ಲಿಂಗಾಯತ ಸಂಘಟನೆ ಸದಸ್ಯರು ಭಾಗಿಯಾಗಿದ್ದರು.

ಚನ್ನಮ್ಮ ವೃತ್ತದಿಂದ ಶನಿವಾರ ಕೂಟದ ಮಾರ್ಗವಾಗಿ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಕಾಲೇಜು ಆವರಣದವರೆಗೆ ಬೃಹತ್ ಮೆರವಣಿಗೆ ನಡೆಯಿತು.
ಎಲ್ಲ ಲಿಂಗಾಯತ ಸಂಘಟನೆಗಳೂ ಒಂದಾಗಿ ಬಸವ ಜಯಂತಿ ಆಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಎಲ್ಲ ಲಿಂಗಾಯತ ಸಂಘಟನೆಗಳೂ ಜಾಗೃತರಾಗಿದ್ದು, ಎಲ್ಲ ನೂರಾ ಮೂರು ಒಳಪಂಗಡಗಳೂ ಸೇರಿ ಈ ಬಾರಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ವಿಶ್ವಗುರು ಬಸವೇಶ್ವರರ ಜಯಂತಿ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲರೂ ಜಾಗೃತಿ ಆಗೋಣ ಎಂದು ಈ ಬಾರಿ ರಾಜ್ಯದಲ್ಲಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಈ ಸಂಬಂಧ ವೀರಶೈವ ಲಿಂಗಾಯತ ಸಂಘಟನೆಗಳು 2 -3 ಬಾರಿ ಸಭೆ ಮಾಡಿದ್ದವು. ಬೀದರ್ನಿಂದ ಚಾಮರಾಜನಗರವರೆಗೂ, ಕಲಬುರಗಿಯಿಂದ ಬೆಳಗಾವಿಯವರೆಗೂ ಈ ಬಾರಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ವೀರಶೈವ ಲಿಂಗಾಯತ ಸಮಾಜದ ಎಲ್ಲಾ 103 ಒಳಪಂಗಡಗಳು ಸೇರಿ ಜನಜಾಗೃತಿ ಮಾಡಲು ಈ ಬಾರಿ ಒಟ್ಟಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.


ನಮ್ಮ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಈಗಾಗಲೆ ಘೋಷಣೆ ಮಾಡಿದೆ. ಈ ಬಾರಿ ಎಲ್ಲರೂ ಸೇರಿ ಅದ್ಧೂರಿಯಾಗಿ ಬಸವ ಜಯಂತಿ ಮೆರವಣಿಗೆ ಮಾಡಲು ಕರೆ ಕೊಡಲಾಗಿತ್ತು. ಎಲ್ಲರೂ ಸಹ ಪಕ್ಷಾತೀತವಾಗಿ, ನಮ್ಮ ಕ್ಷೇತ್ರದ, ನಮ್ಮ ನಮ್ಮ ಸಮಾಜದ ಜನರ ಜಾಗೃತಿ ಮಾಡುವ ಕೆಲಸ ಮಾಡಿದ್ದೇವೆ. ನಮ್ಮ ಸಮಾಜದ ಬಾಂಧವರು ಅಷ್ಟೇ ಅಲ್ಲ, ಬೇರೆ ಸಮಾಜ ಬಾಂಧವರು ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಬಸವಣ್ಣ ಅಂದ್ರೆ ಸಮಾನತೆ, ಜಾತ್ಯತೀತ ನಾಯಕ, ಸಮಾನತೆಯ ಹರಿಕಾರ. ಎಲ್ಲರೂ ಸಹ ಇಂದು ಮೆರವಣಿಗೆಯಲ್ಲಿ ಭಾಗಿಯಾಗಿದ್ದನ್ನು ನೋಡಿದ್ರೆ ತುಂಬಾ ಸಂತೋಷ ಆಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅದ್ದೂರಿಯಾಗಿ ನಡೆದ ಜಗಜ್ಯೋತಿ ಬಸವೇಶ್ವರ ಉತ್ಸವದ ಬೃಹತ್ ಮೆರವಣಿಗೆ
ಬಸವಣ್ಣನವರ ವಚನ ಸಂದೇಶ ಸಾರುವ ಉದ್ದೇಶದಿಂದ ಬಸವ ಜಯಂತಿ ನಿಮಿತ್ತ ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ನಗರದ ವಿವಿಧ ಗಲ್ಲಿಯಲ್ಲಿ ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆ ನಡೆಸಲಾಯಿತು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬಸವಣ್ಣನವರ ಉತ್ಸವದ ನಿಮಿತ್ತ ಕಳೆದ ಒಂದು ವಾರದಿಂದ ವಿವಿಧ ಸಂಘಟನೆಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಇಂದು ಬೃಹತ್ ಮೆರವಣಿಗೆಯನ್ನು ಎಲ್ಲ ಸಂಘಟನೆಗಳು ಕೂಡಿ ನಡೆಸಿದರು. ಕೊನೆಗೆ ಬೃಹತ್ ಮೆರವಣಿಗೆಯು ಆರ್ ಎಲ್ಎಸ್ ಕಾಲೇಜಿನ ಬಳಿ ಕೊನೆಗೊಂಡಿತ್ತು.
ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆಗೆ ವಿವಿಧ ಮಠಾದೀಶರು ಚಾಲನೆ ನೀಡಿದರು. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಬಸವಾದಿ ಶರಣರ ವಚನ ಸಂದೇಶ ಸಾರುವುದು ಮೆರವಣಿಗೆಯ ಉದ್ದೇಶವಾಗಿತ್ತು.
ಸಂಸ್ಕೃತಿ ಕಲಾ ವಾದ್ಯ, ಮಕ್ಕಳ ಮೂಲಕ ಬಸವಣ್ಣನವರ ವಚನಗಳ ಸಂದೇಶದ ಘೋಷ ವಾಕ್ಯಗಳು, ವಾದ್ಯಮೇಳ , ವಚನ ಸಂಗೀತ ಮೆರವಣಿಗೆಯ ಆಕರ್ಷಿಸಿತು. ಚನ್ನಮ್ಮ ವೃತ್ತದಿಂದ ಬಸವಣ್ಣನವರ ಮೂರ್ತಿ ರೂಪಕ ವಾಹನ ಹೊರಡಿತು. 30 ಕ್ಕೂ ಹೆಚ್ಚು ಮಠಾದೀಶರು, 15 ಕ್ಕೂ ಹೆಚ್ಚು ಸಂಘ- ಸಂಸ್ಥೆಗಳು ಭಾಗವಹಿಸಿದರು.
ಲಿಂಗಾಯತ ಸಂಘಟನೆಗಳು, ಒಳಪಂಗಡಗಳು ಬೇರೆಯಾಗಿವೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಿದೆ. ಹೀಗಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಬಸವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.