Kannada NewsKarnataka NewsLatest

ಏ.10 ರಂದು ನಿಪ್ಪಾಣಿಯಲ್ಲಿ ಭವ್ಯ ಶೋಭಾಯಾತ್ರೆ – ಸಚಿವೆ ಶಶಿಕಲಾ ಜೊಲ್ಲೆ

 ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ : ಏ.೧೦ರಂದು ರಾಮನವಮಿ ಅಂಗವಾಗಿ ಶ್ರೀರಾಮ ಸೇನಾ ಹಿಂದೂಸ್ಥಾನದಿಂದ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಿದ್ದು ಇದನ್ನು ಎಲ್ಲರೂ ಚಾಕಚಕ್ಯತೆಯಿಂದ ಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ರಾಮನವಮಿ ಅಂಗವಾಗಿ ಇದೆ ಭಾನುವಾರ ಏ.೧೦ರಂದು ನಗರದಲ್ಲಿ ಜರುಗಲಿರುವ ಶೋಭಾಯತ್ರೆ ಅಂಗವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕತೆಯಲ್ಲಿ ಏಕತೆ ತೋರಿಸುವ ನಮ್ಮ ದೇಶದ ಸಂಸ್ಕೃತಿಯನ್ನು ಇಡಿ ಜಗತ್ತು ಎತ್ತಿ ಹಿಡಿದಿದೆ. ಸ್ವಾಮಿ ವಿವೇಕಾನಂದರು, ಛತ್ರಪತಿ ಶಿವಾಜಿ ಮಹಾರಾಜರು ಸೇರಿದಂತೆ ಹಲವಾರು ಯುಪುರುಷರು ನಮ್ಮ ಪಾವನ ಭೂಮಿಯಲ್ಲಿ ಜನ್ಮಿಸಿದ ಪರಿಣಾಮ ಈ ಕಲಿಯುಗದಲ್ಲೂ ನಮ್ಮ ದೇಶದಲ್ಲಿ ಶಾಂತಿಯ ವಾತಾವರಣವಿದೆ ಎಂದರು.
ಈ ಶೋಭಾಯಾತ್ರೆಯಲ್ಲಿ ಎಲ್ಲರೂ ಕೇಸರಿ ಪೇಟ ಧರಿಸಿ, ಯುವತಿಯರು, ಮಹಿಳೆಯರು ಕೇಸರಿ ಸೀರೆ ತೊಟ್ಟುಕೊಳ್ಳಿ. ಈ ಬಾರಿ ಕೇಸರಿ ಪೇಟ ಮತ್ತು ಸೀರೆ ಕಲ್ಪಿಸಲು ಪ್ರಯತ್ನಿಸುವೆ. ಆದರೆ ಮುಂದಿನ ಬಾರಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೇಸರಿ ಪೇಟ ಮತ್ತು ಮಹಿಳೆಯರಿಗೆ ಕೇಸರಿ ಸೀರೆ ಕಲ್ಪಿಸಲಾಗುವುದು ಎಂದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್  ಚಂದ್ರಕಾಂತ ಕೋಠಿವಾಲೆ ಮಾತನಾಡಿ ಈ ಅದ್ದೂರಿ ಶೋಭಾಯಾತ್ರೆಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಬಸವಜೋತಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ ಈ ಶೋಭಾಯಾತ್ರೆಯಲ್ಲಿ ಸ್ಥಳೀಯರಿಂದ ಹಲವಾರು ರೂಪಕಗಳನ್ನು ಸಾದರಪಡಿಸಲಾಗುವುದು. ಅಲ್ಲದೆ ವಿವಿಧ ರಾಜ್ಯಗಳಿಂದ ರಾಮಲೀಲೆ, ನವಿಲು ಕುಣಿತ ಮೊದಲಾದ ರೂಪಕಗಳು ಆನೆ, ಕುದುರೆಗಳು, ಈ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಶ್ರೀರಾಮ ಸೇನೆ ಹಿಂದೂಸ್ಥಾನ್ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ನಿಲೇಶ ಹತ್ತಿ ಮಾತನಾಡಿ ಈ ಭವ್ಯ ಶೋಭಾಯಾತ್ರೆಯಲ್ಲಿ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಭಗವಾನ ಅಪ್ಪಾಸೋ ಢೋಣೆ ಮಹಾರಾಜ, ತಾಲ್ಲೂಕಿನ ರಾಸಾಯಿ ಶೇಂಡೂರನ ಓಂ ಶಕ್ತಿ ಮಠದ ಅರುಣಾನಂದ ತೀರ್ಥ ಸ್ವಾಮೀಜಿ, ಸ್ಥಳೀಯ ಮುರುಘೇಂದ್ರ ಮಠದ ಮಲ್ಲಿಕಾರ್ಜು ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸಚಿವೆ ಜೊಲ್ಲೆ, ಸಂಸದ ಜೊಲ್ಲೆ ಮತ್ತು ಶ್ರೀರಾಮ ಸೇನಾ ಹಿಂದೂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಚಾಲನೆ ನೀಡುವರು. ನಾರಾಯಣ ಉದ್ಯೋಗ ಸಮೂಹದ ಅಧ್ಯಕ್ಷ ದಿಲೀಪ ಚವಾಣ ಅಧ್ಯಕ್ಷತೆ ವಹಿಸುವರು ಎಂದರು.
ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿದರು. ಅಭಯ ಮಾನವಿ, ನಗರಸಭೆ ಸ್ಥಾಯಿ ಸಮಿತಿ ಚೇರ್ಮನ್ ರಾಜು ಗುಂದೇಶಾ, ಸದಸ್ಯ ಸಂತೋಷ ಸಾಂಗಾವಕರ, ಮಹಾದೇವ ರಾವುತ, ಪ್ರವೀನ ಶಹಾ, ಮೊದಲಾದವರು ಸಲಹೆ ಸೂಚನೆಗಳನ್ನು ನೀಡಿದರು.
ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ ಮತ್ತು ಸದಸ್ಯರು, ಜೋತಿಪ್ರಸಾದ ಜೊಲ್ಲೆ, ಸಮಾಧಿಮಠದ ಚೇರ್ಮನ್ ಸುರೇಶ ಶೆಟ್ಟಿ, ಪ್ರನೀನ ಶಹಾ, ಪ್ರತಾಪ ಪಟ್ಟಣಶೆಟ್ಟಿ, ಮೊದಲಾದವರು ಸೇರಿದಂತೆ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಣವ ಮಾನವಿ ಸ್ವಾಗತಿಸಿದರು. ಎಪಿಎಂಸಿ ಸದಸ್ಯ ಬಂಡಾ ಘೊರ್ಪಡೆ ಕಾರ್ಯಕ್ರಮ ನಿರೂಪಿಸಿದರು.

1100 ಎಕರೆ ಜಮೀನಿಗೆ ನಿರಾವರಿ ಸೌಲಭ್ಯ; ಸಚಿವೆ ಶಶಿಕಲಾ ಜೊಲ್ಲೆ ಭರವಸೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button