Belagavi NewsBelgaum NewsKarnataka News

*ನಿಪ್ಪಾಣಿಯಲ್ಲಿ ಭಾರತೀಯ ಸೇನೆಯ ಶೌರ್ಯದ ಅಂಗವಾಗಿ ಅದ್ಧೂರಿಯಾಗಿ ನಡೆದ ತಿರಂಗಾ ಯಾತ್ರೆ*

ಪ್ರಗತಿವಾಹಿನಿ ಸುದ್ದಿ: ಭಾರತ ಸೇನೆಯು ಪಾಕಿಸ್ತಾನದ ವಿರುದ್ಧ ಕೈಕೊಂಡ ‘ಆಪರೇಶನ್ ಸಿಂಧೂರ’ ಯಶಸ್ವಿಯಾದ ಹಿನ್ನೆಲೆಯಲ್ಲಿ ‘ಭಾರತ ಮಾತಾ ಕಿ ಜೈ’ ಜಯಘೋಷದೊಂದಿಗೆ ಸೋಮವಾರ ನಗರದಲ್ಲಿ ಅದ್ದೂರಿಯಾಗಿ ತಿರಂಗಾ ಯಾತ್ರೆಯನ್ನು ನಡೆಸಲಾಯಿತು. 

ಆರಂಭದಲ್ಲಿ ಬೆಳಿಗ್ಗೆ ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಬಸವಪ್ರಸಾದ ಜೊಲ್ಲೆ, ನಗರಸಭೆ ಅಧ್ಯಕ್ಷೆ ಸೋನಾಲಿ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ ಮತ್ತು ಗಣ್ಯರು ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಪ್ರಾರಂಭವಾಯಿತು. 

ಆಪರೇಷನ್ ಸಿಂಧೂರ್ ಬೆಂಬಲಿಸಿ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಮತ್ತು ಹಾಲಿ ಸೈನಿಕರು, ವಿದ್ಯಾರ್ಥಿಗಳು, ಸರ್ಕಾರಿ, ಅರೆ ಸರ್ಕಾರಿ ಸಿಬ್ಬಂದಿ, ನಾಗರಿಕರು ಭಾಗವಹಿಸಿದ್ದರು. ರ್ಯಾಲಿಯನ್ನು ಮಾರ್ಗದುದ್ದಕ್ಕೂ ಶಿಸ್ತುಬದ್ಧವಾಗಿ ನಡೆಸಲಾಯಿತು.

ಭಾರತ್ ಮಾತಾ ಕಿ ಜೈ, ಜೈ ಜವಾನ್ ಜೈ ಕಿಸಾನ್, ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ ಸೇರಿದಂತೆ ವಿವಿಧ ಘೋಷಣೆಗಳನ್ನು ರ್ಯಾಲಿಯಲ್ಲಿ ಕೂಗಿದರು. ರ್ಯಾಲಿಯಲ್ಲಿ ಸುಮಾರು 900 ಮೀಟರ್ ಉದ್ದದ ತ್ರಿವರ್ಣ ಧ್ವಜವು ಗಮನ ಸೆಳೆಯಿತು. 

Home add -Advt

ಈ ಸಂದರ್ಭದಲ್ಲಿ ನಿವೃತ್ತ ಮೇಜರ್ ಸುಬೇದಾರ್ ರವೀಂದ್ರ ಪೆÇವಾರ, ಗಜಾನನ ಚವಾಣ ಮಾತನಾಡಿ, ಆಪರೇಷನ್ ಸಿಂಧೂರ್ ಮತ್ತು ಹುತಾತ್ಮ ಸೈನಿಕರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಬೇಕೆಂದು ಒತ್ತಾಯಿಸಿದರು. ಜೊಲ್ಲೆ ಗ್ರುಪ್‍ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ ‘ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆಯವರ ಮಾರ್ಗದರ್ಶನದಲ್ಲಿ, ನಗರದಲ್ಲಿ ‘ಆಪರೇಷನ್ ಸಿಂಧೂರ್’ ಸ್ಮರಣಾರ್ಥ ಖಂಡಿತವಾಗಿಯೂ ಸ್ಮಾರಕವನ್ನು ನಿರ್ಮಿಸಲಾಗುವುದು. ಈಗಾಗಲೇ ನಗರಸಭೆಯು ಸೈನಿಕರ ಸ್ಮಾರಕಕ್ಕಾಗಿ ಭೂಮಿಯನ್ನು ಅನುಮೋದಿಸಿದೆ’ ಎಂದರು.

ಯಾತ್ರೆಯು ಮುನ್ಸಿಪಲ್ ಹೈಸ್ಕೂಲ್‍ದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ಛತ್ರಪತಿ ಶಿವಾಜಿ ಮಹಾರಾಜ ವೃತ್ತಕ್ಕೆ ತಲುಪಿ ಕೊನೆಗೊಂಡಿತು. ಈ ಸಂದರ್ಭದಲ್ಲಿ, ತಹಶೀಲ್ದಾರ್ ಮುಜಫ್ಫರ್ ಬಳಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ನಾಯಿಕ, ಸಿಡಿಪಿಒ ಸುಪ್ರಿಯಾ ಜಡಗೆ, ಸಿಪಿಐ ಬಿ.ಎಸ್. ತಳವಾರ, ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನಕುಮಾರ ಪಾಟೀಲ, ನಿರ್ದೇಶಕರು, ನಗರಸಭೆ ಸದಸ್ಯರು, ಪದಾಧಿಕಾರಿಗಳು, ನಾಗರಿಕರು ಉಪಸ್ಥಿತರಿದ್ದರು.

Related Articles

Back to top button