Kannada NewsKarnataka NewsLatest

ಬೆಳಗಾವಿಯಲ್ಲಿ ಶಾಸಕ ಸತೀಶ್‌ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ

ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹನ ಮಾಡಿದ ಸತೀಶ್‌ ಜಾರಕಿಹೊಳಿ ಬೆಂಬಲಿಗರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ  ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ ಎಂದು ಬಿಜೆಪಿ ವಿರುದ್ಧ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಬೆಂಬಲಿಗರು, ವಿವಿಧ ದಲಿತ ಸಂಘಟನೆಗಳು ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದವು.
ಪ್ರತಿಭಟನಾ ರ್ಯಾಲಿಯಲ್ಲಿ ಕೇಸರಿ, ನೀಲಿ, ಕನ್ನಡ ಬಾವುಟ ಬಣ್ಣದ ಶಾಲು ಧರಿಸಿದ್ದ ಸಹಸ್ರಾರು ಸಂಖ್ಯೆಯಲ್ಲಿ ಶಾಸಕ ಸತೀಶ್‌ ಜಾರಕಿಹೊಳಿ ಅಭಿಮಾನಿಗಳು ಭಾಗಿಯಾಗಿದ್ದರು. ಈ ಬೃಹತ್ ಪ್ರತಿಭಟನಾ ರ್ಯಾಲಿ ವೀರರಾಣಿ ಚನ್ನಮ್ಮಾ ವೃತ್ತದ ಮಾರ್ಗವಾಗಿ ಡಿಸಿ ಕಚೇರಿವರೆಗೂ ಸಂಚರಿಸಿ, ನಂತರ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಗೋಕಾಕ್‍ನಲ್ಲಿ ಸತೀಶ್‌ ಜಾರಕಿಹೊಳಿ ವಿರುದ್ಧ ವಾಗ್ದಾಳಿ ಮಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸತೀಶ್‌ ಅಭಿಮಾನಿಗಳು ಯತ್ನಾಳ ವಿರುದ್ಧ ಕಿಡಿಕಾರಿದರು.
ಬಿಜೆಪಿ ನಾಯಕರ ಪ್ರತಿಕೃತಿ ದಹನ: ಕಾಂಗ್ರೆಸ್ ಶಾಸಕ ಸತೀಶ್‌ ಜಾರಕಿಹೊಳಿ ಹಿಂದೂ ಹೇಳಿಕೆ ವಿರುದ್ಧ ಸಿಡಿದೆದ್ದಿದ್ದ ಬಿಜೆಪಿ ನಾಯಕರ ವಿರುದ್ಧ ಸತೀಶ್‌ ಜಾರಕಿಹೊಳಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸಿದ್ದು, ಬೆಳಗಾವಿಯ ಸಿಪಿಎಡ್ ಮೈದಾನದಿಂದ ಸತೀಶ್‌ ಅಭಿಮಾನಿಗಳು, ವಿವಿಧ ದಲಿತ ಸಂಘಟನೆಗಳು ಬೃಹತ್ ರ್ಯಾಲಿ ಆರಂಭಿಸಿದರು.
ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಶಾಸಕ ಸತೀಶ ಜಾರಕಿಹೊಳಿ ಪರ ಭಿತ್ತಿ ಫಲಕಗಳನ್ನು ಹಿಡಿದುಕೊಂಡು ಮನುವಾದಿಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಸಂಜಯ್ ಪಾಟೀಲ್, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಸೇರಿ ಇನ್ನಿತರ ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಏಟು ಕೊಟ್ಟು ಪ್ರತಿಕೃತಿ ದಹನ ಮಾಡಿದರು. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಇಂದು ಶಕ್ತಿ ಪ್ರದರ್ಶನ ಮಾಡುವ ಮೂಲಕ ಸತೀಶ ಜಾರಕಿಹೊಳಿ ಅಭಿಮಾನಿಗಳು, ಬೆಂಬಲಿಗರು ಬಿಜೆಪಿಗೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದರು.
ಈ ವೇಳೆ ರವೀಂದ್ರ ನಾಯಿಕ್ ಮಾತನಾಡಿ, ಸತೀಶ ಜಾರಕಿಹೊಳಿ ದಲಿತರು, ಶೋಷಿತ ವರ್ಗದಿಂದ ಬಂದವರು. ಶೋಷಿತರು, ಬಡವರ ಪರವಾಗಿ ಧ್ವನಿ ಎತ್ತುತ್ತಿರುವ ಇವರ ಧ್ವನಿಯನ್ನು ಅಡಗಿಸುವ ಉದ್ದೇಶದಿಂದ ಆ ಹೇಳಿಕೆಯನ್ನು ತಿರುಚಿ, ಇಡೀ ರಾಜ್ಯ, ದೇಶಾಧ್ಯಂತ ಅಪಪ್ರಚಾರ ಮಾಡಿ ಅವರ ತೇಜೋವಧೆ ಮಾಡುವ ಮನುವಾದಿಗಳ ಪ್ರಯತ್ನವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಧಿಕ್ಕರಿಸುತ್ತೇವೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಹುಟ್ಟಿದಾಗಿನಿಂದ ಸಾಯೋವರೆಗೂ ಅವರು ಧರ್ಮವನ್ನು ಬಿಟ್ಟು ಹೋಗೋವರೆಗೂ ನಿರಂತರವಾಗಿ ನೋವು, ಅಪಮಾನ ಮಾಡಿದ ಸಿದ್ಧಾಂತವಿದು. ಅವರ ಸಿದ್ಧಾಂತದ ವಿರುದ್ಧ ಯಾರೇ ಮಾತನಾಡಿದರೂ ಷಡ್ಯಂತ್ರ ಮಾಡಿ ಅವರ ಧ್ವನಿಯನ್ನು ಹತ್ತಿಕ್ಕುವ ವ್ಯವಸ್ಥಿತ ಪ್ರಯತ್ನ ದೇಶದಲ್ಲಿ ನಡೆದಿದೆ. ಹಿಂದುಳಿದ ಜನ ನಾವು ಜಾಗೃತರಾಗಿದ್ದೇವೆ. ನಿಮ್ಮ ವಿರುದ್ಧದ ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸೋದಿಲ್ಲ ಎಂದು ಎಚ್ಚರಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ತಳವಾರ ಮಾತನಾಡಿ, ಅಭಯ್ ಪಾಟೀಲ್ ಅವರ ಎಲ್‍ಸಿಯಲ್ಲಿ ಹಿಂದೂ ಎಂಬ ಶಬ್ದ ಇದ್ದರೆ ನಾವೇ 10 ಲಕ್ಷ ರೂ. ಕೊಡುತ್ತೇವೆ. ಸತೀಶ ಜಾರಕಿಹೊಳಿ ಅವರ ಜನ್ಮದಾಖಲೆಯಲ್ಲಿ ಹಿಂದೂ ವಾಲ್ಮೀಕಿ ಅಂತಾ ಇದೆ. ಸತೀಶ ಜಾರಕಿಹೊಳಿ ಪಕ್ಕಾ ಹಿಂದೂ. ಅಭಯ್ ಪಾಟೀಲ್ ಬೋಗಸ್ ಹಿಂದೂ. ಇಂದು ನಕಲಿ ಹಿಂದೂಗಳು ಬಂದು ಅಸಲಿ ಹಿಂದೂಗಳನ್ನು ನೀವು ಹಿಂದೂಗಳಾ..? ಎಂದು ಕೇಳುತ್ತಿದ್ದಾರೆ. ಹಿಂದೂಗಳ ಅಪ್ಪಗಳು ನಾವ, ಹಿಂದೂ ಮಾಲೀಕರು-ಯಜಮಾನರು ನಾವ, ಹಿಂದೂ ಸೃಷ್ಟಿಕರ್ತರು ನಾವ. ನೀವೆಲ್ಲಾ ಬಾಡಿಗೆ ಜನ ನೀವು, ನಮ್ಮನ್ನು ಕೇಳುವ ಹಕ್ಕು ನಿಮಗಿಲ್ಲ ಎಂದು ಎಚ್ಚರಿಸಿದರು.
ಭೀಮ ಆರ್ಮಿ ಬೆಳಗಾವಿ ಸಂಚಾಲಕ ಸಂತೋಷ ದೊಡಮನಿ ಮಾತನಾಡಿ, ನಿಪ್ಪಾಣಿಯಲ್ಲಿ ಹಂಗೂ ಮಾತಾಡಿಲ್ಲ, ಹಿಂಗೂ ಮಾತಾಡಿಲ್ಲ. ನಮ್ಮ ಸಾಹುಕಾರ್ ಗಟ್ಟಿಯಾಗಿ ಖರೇನ ಮಾತಾಡಿದ್ದಾರೆ. ಅದು ಸತ್ಯವಿದೆ. ನೋಡ್ತಿನಿ, ಬರ್ತಿನಿ, ಮಾಡ್ತಿನಿ, ಅಲ್ಲೆ ಬರ್ತಿನಿ, ಇಲ್ಲೆ ಬರ್ತಿನಿ ಅಂತೀಯಾ..? ಬೆಳಗಾವಿಗೆ ಬಂದು ನೋಡು ಸಾಹುಕಾರ ತಾಕತ್ತು ಎಂದು ಯತ್ನಾಳ ವಿರುದ್ಧ ಹರಿಹಾಯ್ದರು. ಇನ್ನು ಯಾರೇ ಬಂದು ಅಡ್ಡ ನಿಂತರೂ ಸಾಹುಕಾರನಲ್ಲ, ಸಾಹುಕಾರ್ ಒಂದು ಕೂದಲು ಕೀಳಲು ನಿಮಗೆ ಆಗೋದಿಲ್ಲ. ನಾವು ಯಾರಿಗೂ ಅಂಜೋದಿಲ್ಲ. ನಮ್ಮದು ಅಂಜುವ ಕುಲವಲ್ಲ, ನಮ್ಮದು ಡಾ. ಬಿ.ಆರ್‌,ಅಂಬೇಡ್ಕರ್ ಕುಲ ಎಂದು ಎಚ್ಚರಿಕೆ ರವಾನಿಸಿದರು.
ಇದೇ ವೇಳೆ ರೈತ ಮುಖಂಡ ಸಿದಗೌಡ ಮೊದಗಿ ಮಾತನಾಡಿ, ಅಂಗನವಾಡಿ ಮಕ್ಕಳ ತತ್ತಿ ತಿನ್ನುವಾಗ, ನಾಡಿನಾಧ್ಯಂತ ಭೂಮಿ ಖರೀದಿ ಮಾಡಿ ಮಾರುತ್ತಿರುವಾಗ, ನಾಡಿನ ರೈತರು ಬಂದಾಗ ಎಲ್ಲಿ ಹೋಗಿತ್ತು ನಿಮ್ಮ ಚರ್ಚೆ. ಇದನ್ನು ಕೂಡ ಮುಕ್ತವಾಗಿ ಚರ್ಚೆ ಮಾಡಲು ಬನ್ನಿ. ನಿಮ್ಮ ಪಕ್ಷದಲ್ಲಿ ಮಾತ್ರ ಹಿಂದೂಗಳಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ಹಿಂದೂಗಳಿದ್ದಾರೆ. ಅವರಲ್ಲಿ ಇದು ಚರ್ಚೆ ಆಗುತ್ತಿಲ್ಲ. ಆದರೆ ನಿಮ್ಮಲ್ಲಿ ಮಾತ್ರ ಯಾಕೆ ಚರ್ಚೆಯಾಗುತ್ತಿದೆ. ನೀವು ಬಂದು ಚರ್ಚೆ ಮಾಡಬೇಕಿತ್ತು. ನಿಮ್ಮದೇ ಡಬಲ್ ಇಂಜೀನ್ ಸರ್ಕಾರ ಆಡಳಿತದಲ್ಲಿದೆ, ಒಂದು ತನಿಖಾ ಸಮಿತಿ ರಚನೆ ಮಾಡಿ, ಎಲ್ಲ ವಿಶ್ವವಿದ್ಯಾಲಯಗಳಿಂದ ತಜ್ಞರು ಬಂದು ಚರ್ಚೆ ಮಾಡಲಿ. ಸಾಮಾಜಿಕ ಹೋರಾಟಕ್ಕೆ ಬೆಲೆ ಬರಬೇಕು. ಈ ಚಳವಳಿ ಇಲ್ಲಿಂದ ಆರಂಭವಾಗಲಿ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ತೋಳಿ ಭರಮಣ್ಣ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ  ರಾಜ್ಯಾಧ್ಯಕ್ಷ ವಿಜಯ ತಳವಾರ, ಜಿಲ್ಲಾ ಸಂಚಾಲಕ ಜೀವನ್‌ ಮಾಂಜ್ರೇಕರ್‌,  ಕರವೇ  ಜಿಲ್ಲಾ ಅಧ್ಯಕ್ಷ ಮಹಾದೇವ ತಳವಾರ, ಉಪಾಧ್ಯಕ್ಷ  ಸುರೇಶ, ಚನ್ನಬಸವ ಫೌಂಡೇಶನ್‌ ಅಧ್ಯಕ್ಷ ಎಸ್.‌ಬಿ. ಗೂಡಸ್‌,  ಕರ್ನಾಟಕ ದಲಿತ  ಸಂಘರ್ಷ ಸಮಿತಿ ಸಂಚಾಲಕ ಮಹಾಂತೇಶ ತಳವಾರ,  ಕೆಪಿಸಿಸಿ ಸದಸ್ಯೆ ಸರಳಾ ಸಾತ್ಪುತ್ರೆ,  ಸೈಯದ್‌ ಮನಸೂರ್‌ ಸೇರಿದಂತೆ ವಿವಿಧ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟ ಸಮಿತಿ, ಬುದ್ದ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿದ್ದರು.

 ಜಿಲ್ಲಾಧಿಕಾರಿಗೆ ಮನವಿ

 ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕರೂ ಆಗಿರುವ ಸತೀಶ್‌ ಜಾರಕಿಹೊಳಿ ಅವರ ವಿರುದ್ಧ ಪಿತೂರಿ ಮತ್ತು ತೆಜೋವಧೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟ ಸಮಿತಿ, ಬುದ್ದ, ಬಸವ, ಅಂಬೇಡ್ಕರ್‌ ಅನುಯಾಯಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು ಹಾಗೂ ಸತೀಶ್‌ ಜಾರಕಿಹೊಳಿ ಅಭಿಮಾನಿ ಬಳಗದ ಸದಸ್ಯರು ನಗರದ ಸಿ.ಪಿ.ಎಡ್‌. ಮೈದಾನದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಸುಮಾರು 20,000 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಿಪಿಎಡ್ ಮೈದಾನದಿಂದ ಪಾದಯಾತ್ರೆ ಮೂಲಕ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ ನಡೆಸಿ, ಶಾಸಕ ಸತೀಶ್ ಜಾರಕಿಹೊಳಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಅವರ ಪರ ಘೋಷಣೆ ಕೂಗಿ ಐ ಸ್ಟ್ಯಾಂಡ್ ವಿಥ್ ಸತೀಶ್ ಜಾರಕಿಹೊಳಿ ಎಂಬ ಬರಹದ ಬಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಭಾರತಿಯ ಕೃಷಿಕ ಸಮಾಜ ಜೈ ಜವಾನ- ಜೈ ಕಿಸಾನ ಸಂಘಟನೆ, ಬೆಳಗಾವಿಯ ಮಹಾಂತೇಶ ನಗರದ ಶ್ರೀ ಚನ್ನಬಸವ ಫೌಂಡೇಶನ್‌, ಕಡೋಲಿಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಅಶ್ವಾರೂಡ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್‌ ವಾದ) ಬೆಳಗಾವಿ, ಅಖಿಲ ಕರ್ನಾಟಕ ವಾಲ್ಲೀಕಿ ನಾಯಕ ಮಹಾಸಭಾ, ಕರ್ನಾಟಕ ವಾಲ್ಮೀಕಿ ಯುವ ವೇದಿಕೆ, ಬೆಳಗಾವಿಯ ವಾಲ್ಮೀಕಿ ಸಮಾಜ, ಡಾ. ಬಿ.ಆರ್‌. ಅಂಬೇಡ್ಕರ್‌ ಶಕ್ತಿ ಸಂಘ, ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಅಶ್ವರೂಡ ಮೂರ್ತಿ ಪ್ರತಿಷ್ಠನಾ ಸಮಿತಿ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಶಾಸಕ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button