Belagavi NewsBelgaum NewsKarnataka News

*ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಯುವಕ: ಬೆಳಗಾವಿಯಲ್ಲಿ ಘೋರ ಘಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ನಡೆಸಿದ್ದು, ಪ್ರೇಯಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.

ಮದುವೆ ಆಗಲು ನಿರಾಕರಿಸಿದ ಪ್ರೇಯಸಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ ಬಳಿಕ ತಾನೂ ಕುತ್ತಿಗೆ ಕೊಯ್ದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿ ತಾಲೂಕಿನ ‌ಯಳ್ಳೂರ ಗ್ರಾಮದ ಪ್ರಶಾಂತ ಕುಂಡೇಕರ್ (29) ಎಂಬಾತನಿಂದ ಕೃತ್ಯ ನಡೆದಿದ್ದು, ನಾಥ್ ಪೈ ವೃತ್ತದ ನಿವಾಸಿ ಐಶ್ವರ್ಯ ಮಹೇಶ ಲೋಹಾರ್ (18) ಎಂಬಾಕೆಯ ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌  

ಪ್ರಶಾಂತ ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಐಶ್ವರ್ಯಾಳನ್ನು ಪ್ರೀತಿಸುತ್ತಿದ್ದ. ತಮ್ಮ ಪ್ರೀತಿಯ ವಿಚಾರ ಐಶ್ವರ್ಯಾ ತಾಯಿ ಮುಂದೆ ಕೂಡ ಹೇಳಿದ್ದ. ಮದುವೆ ಈಗಲೇ ಬೇಡ, ನಿನ್ನ ಕಾಲ ಮೇಲೆ ನಿಲ್ಲುವಂತೆ ಐಶ್ವರ್ಯಾ ತಾಯಿ ಬುದ್ಧಿವಾದ ಹೇಳಿದ್ದಾರೆ.

Home add -Advt

ಆದರೆ ಆತುರದ ನಿರ್ಧಾರ ಕೈಗೊಂಡು ನಾಥ್ ಪೈ ವೃತ್ತದಲ್ಲಿರುವ ಐಶ್ವರ್ಯಾ ಚಿಕ್ಕಮ್ಮಳ ಮನೆಯಲ್ಲಿ ಇಬ್ಬರು ಸೇರಿದ್ದಾರೆ. ಈ ವೇಳೆ ಮೊದಲೆ ವಿಷದ ಬಾಟಲಿ ಇಟ್ಟುಕೊಂಡು ಪ್ರಶಾಂತ ಬಂದಿದ್ದಾನೆ. ಮದುವೆಗೆ ನಿರಾಕರಿಸಿದ ಐಶ್ವರ್ಯಾಗೆ ಒತ್ತಾಯಪೂರ್ವಕ ವಿಷ ಕುಡಿಸಲು ಪ್ರಶಾಂತ ಮುಂದಾಗಿದ್ದಾನೆ.

ವಿಷ ಕುಡಿಯಲು ಐಶ್ವರ್ಯಾ ಒಪ್ಪದಿದ್ದಾಗ ಪ್ರಶಾಂತ ತನ್ನ ಜೇಬಿನಲ್ಲಿದ್ದ ಚೂರಿಯಿಂದ ಐಶ್ವರ್ಯಾ ಕುತ್ತಿಗೆ ಕೊಯ್ದಿದ್ದಾನೆ. ತೀವ್ರ ರಕ್ತ ಸ್ರಾವದಿಂದ ಐಶ್ವರ್ಯಾ ಸಾವನಪ್ಪಿದ್ದಾಳೆ. ಕಂಗಾಲಾದ ಪ್ರಶಾಂತ ಬಳಿಕ‌ ತಾನೂ ಚೂರಿಯಿಂದ ಕುತ್ತಿಗೆಕೊಯ್ದುಕೊಂಡು ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ‌ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್, ಮಾರ್ಕೆಟ್ ವಿಭಾಗದ ಎಸಿಪಿ ಸಂತೋಷ ಸತ್ಯನಾಯಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button