Kannada NewsKarnataka NewsLatest

ಯಡಿಯೂರಪ್ಪ ಪ್ರಕಾರ ಬಿಜೆಪಿಗೆ ಆನೆ ಬಲ ಬಂದಿದ್ದು ಯಾರಿಂದ?

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕಳೆದ ಮೂರ‍್ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಕಾರ್ಯದಲ್ಲಿ ತೊಡಗಿರುವದರಿಂದ ಬಿಜೆಪಿಗೆ ಆನೆ ಬಲ ಬಂದಿದ್ದು, ಅರಭಾಂವಿ ಕ್ಷೇತ್ರದಲ್ಲಿ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿಯಿಂದ ಬಿಜೆಪಿಗೆ ಶೇಕಡಾ ೮೦ ರಷ್ಟು ಮತಗಳು ಲಭಿಸಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಸಂಜೆ ಪಟ್ಟಣದ ಬಸವ ಮಂಟಪದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥವಾಗಿ ನಡೆದ ಸಾರ್ವಜನಿಕ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ದಿ. ಸುರೇಶ ಅಂಗಡಿ ಅವರಿಗೆ ನೀಡಿದ ಮುನ್ನಡೆಗಿಂತ ಈ ಬಾರಿ ಏಪ್ರೀಲ್ ೧೭ ರಂದು ನಡೆಯುವ ಮತದಾನದಲ್ಲಿ ಮಂಗಳಾ ಅವರಿಗೆ ಅತ್ಯಧಿಕ ಮತಗಳ ಮುನ್ನಡೆ ನೀಡಿ ಜನಸೇವೆಗೆ ಅವಕಾಶ ಕಲ್ಪಿಸಿ ಕೊಡುವಂತೆ ಅವರು ಮನವಿ ಮಾಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಶಕ್ತಿ ಎಷ್ಟಿದೇ ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ಸೋಮವಾರದಿಂದ ಮಂಗಳಾ ಪರ ಪ್ರಚಾರಕ್ಕೆ ಧುಮಕಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವರು ಈ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಅತ್ಯಧಿಕ ಮತಗಳು ಬಿಜೆಪಿಗೆ ಲಭಿಸುವಂತೆ ಕಾರ್ಯನಿರತರಾಗಿದ್ದಾರೆ. ದೇಶದ ಸಮಗ್ರ ಪ್ರಗತಿಗಾಗಿ ದಿ. ಸುರೇಶ ಅಂಗಡಿಯವರ ಸ್ಮರಣ ಯ ಕಾಮಗಾರಿಗಳನ್ನು ನೆನಪಿಸಿಕೊಂಡು ಮಂಗಳಾ ಅಂಗಡಿಯವರಿಗೆ ಮತ ನೀಡುವಂತೆ ಕೋರಿದರು.
ಕಾಂಗ್ರೇಸ್ ಪಕ್ಷ ಮುಳುಗುತ್ತಿರುವ ಹಡಗು. ಅದಕ್ಕೆ ಯಾವ ಸ್ಪಷ್ಟವಾದ ನಿಲವುಗಳಿಲ್ಲ. ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಆ ಪಕ್ಷಕ್ಕೆ ಯಾವುದೇ ನೈತಿಕ ಹಕ್ಕಿಲ್ಲವೆಂದು ಟೀಕಿಸಿದರು. ಯಾವ ಚುನಾವಣೆಗಳಲ್ಲೂ ಗೆದ್ದ ಉದಾಹರಣೆಗಳಿಲ್ಲ. ಕಳೆದ ೧೭ ವಿಧಾನ ಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ೧೪ ಸ್ಥಾನಗಳಲ್ಲಿ ಜಯ ಸಾಧಿಸಿದೆ. ನಾಲ್ಕು ಶಿಕ್ಷಕರ ಮತಕ್ಷೇತ್ರಗಳಲ್ಲೂ ನಾವು ಗೆದ್ದಿದ್ದೇವೆ. ಈಗ ನಡೆಯುತ್ತಿರುವ ಮಸ್ಕಿ ಮತ್ತು ಬಸವ ಕಲ್ಯಾಣ ಉಪಉಪಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸುಮಾರು ೨೫ ಸಾವಿರ ಮತಗಳಿಂದ ಆಯ್ಕೆಯಾಗಲಿದ್ದಾರೆ. ಅಲ್ಲದೇ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಳಾ ಅಂಗಡಿ ಅವರು ೩ ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಲಿದ್ದಾರೆಂದು ತಿಳಿಸಿದರು.
ಬೆಳಗಾವಿ ಸಂಸತ್ತ ಸದಸ್ಯರಾಗಿದ್ದ ದಿ. ಸುರೇಶ ಅಂಗಡಿಯವರು ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ನಿಯುಕ್ತರಾದರು. ಸಚಿವರಾದ ನಂತರ ರೈಲ್ವೆ ಇಲಾಖೆಯ ಉನ್ನತಿಗಾಗಿ ಸಾಕಷ್ಟು ಯೋಜನೆಗಳನ್ನು ಸಾಕಾರಗೊಳಿಸಿದರು. ಸರಳ ಸಜ್ಜನಿಕೆಯ ಹಾಗೂ ಅಭಿವೃದ್ಧಿಯ ಹಿನ್ನೆಲೆಯ ವ್ಯಕ್ತಿಯಾಗಿದ್ದ ದಿ. ಸುರೇಶ ಅಂಗಡಿ ಅವರು ಕೊರೋನಾಗೆ ಬಲಿಯಾದರು. ಪ್ರಧಾನಿ ಮೋದಿ ಸಹಿತ ಇಡೀ ದೇಶವೇ ಕಣ ರು ಹಾಕಿತು ಎಂದು ಸ್ಮರಿಸಿಕೊಂಡರು.
ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಇನ್ನೊಬ್ಬರ ಕಣ್ಣೀರು ಒರೆಸುವುದಕ್ಕೆ ರಾಜಕೀಯಕ್ಕೆ ಬನ್ನಿ. ಯಾವುದೇ ಆಸ್ತಿ-ಪಾಸ್ತಿ ಮಾಡಲಿಕ್ಕೆ ಅಲ್ಲವೆಂದು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಸಂದೇಶ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿ ಪರ ಶ್ರಮಿಸುತ್ತೇನೆ. ಪಕ್ಷಕ್ಕೆ ಎಂದಿಗೂ ಮೋಸ ಮಾಡುವದಿಲ್ಲವೆಂದು ಹೇಳಿದರು.
ಭಾರತ ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಸುರಕ್ಷಿತವಾಗಿದೆ. ಇಡೀ ವಿಶ್ವವೇ ನಮ್ಮ ದೇಶವನ್ನು ಶ್ಲಾಘಿಸುತ್ತಿದ್ದಾರೆ. ಅದರಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸ್ವತಃ ನಮ್ಮ ಕ್ಷೇತ್ರಕ್ಕೆ ಬಂದು ಮತ ಯಾಚಿಸುತ್ತಿದ್ದಾರೆ. ಅವರಿಗೆ ಗೌರವ ನೀಡಿ ಹಿಂದಿನ ಮುನ್ನಡೆ ಮತಗಳಿಗಿಂತ ಒಟ್ಟಾರೆ ೬೫ ಸಾವಿರ ಮತಗಳ ಮುನ್ನಡೆಯನ್ನು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿಯವರಿಗೆ ದೊರಕಿಸಿಕೊಡುವ ಭರವಸೆ ನೀಡಿದರು. ಮಂಗಳಾ ಅವರು ಚುನಾವಣೆಯಲ್ಲಿ ಗೆಲ್ಲುವದು ನಿಶ್ಚಿತವೆಂದು ಹೇಳಿದರು. ಸಹೋದರಿ ಮಂಗಳಾ ಅಂಗಡಿಯವರ ಅಣ್ಣನಾಗಿ ಕ್ಷೇತ್ರದಲ್ಲಿ ಅವರ ಗೆಲುವಿಗೆ ಶ್ರಮಿಸುತ್ತಿದ್ದೇನೆ. ವ್ಯಕ್ತಿಯ ವಿರುದ್ದ ನಮ್ಮ ಹೋರಾಟವಲ್ಲ. ಕಳೆದ ೫೬ ವರ್ಷಗಳಿಂದ ದೇಶವನ್ನು ಹಾಳು ಮಾಡಿದ ಕಾಂಗ್ರೇಸ್ ಪಕ್ಷದ ವಿರುದ್ದ ತಮ್ಮ ಹೋರಾಟವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸಂಸದರಾದ ಈರಣ್ಣ ಕಡಾಡಿ ಹಾಗೂ ಎ ನಾರಾಯಣಸ್ವಾಮಿ ಅವರು ಮಂಗಳಾ ಅಂಗಡಿ ಪರ ಮತಯಾಚಿಸಿದರು.
ವೇದಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ, ಸಚಿವರಾದ ಜಗದೀಶ ಶೆಟ್ಟರ, ಉಮೇಶ ಕತ್ತಿ, ಮುರಗೇಶ ನಿರಾಣಿ , ಮಾಜಿ ಸಂಸದ ಅಮರಸಿಂಹ ಪಾಟೀಲ, ಮಾಜಿ ಶಾಸಕಿ ಸೀಮಾ ಮಸೂತಿ, ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹದೇವ ಶೆಕ್ಕಿ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಜಿಪಂ ಸದಸ್ಯರಾದ ವಾಸಂತಿ ತೇರದಾಳ, ಗೋವಿಂದ ಕೊಪ್ಪದ, ಪುರಸಭೆ ಸದಸ್ಯರುಗಳು, ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ಮಂಗಳಾ ಅಂಗಡಿ ಅವರನ್ನು ಬೆಂಬಲಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

​ ಬೆಳಗಾವಿ ಲೋಕಸಭಾ ಕ್ಷೇತ್ರ ಮರಳಿ ಕಾಂಗ್ರೆಸ್ ತೆಕ್ಕೆಗೆ  – ಲಕ್ಷ್ಮಿ ಹೆಬ್ಬಾಳಕರ್ ವಿಶ್ವಾಸ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button