
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಪ್ಲಾಸ್ಟಿಕ್ ಉದ್ಯಮ ವಲಯದ ವೇಗದ ಬೆಳವಣಿಗೆಗೆ ಪೂರಕವಾಗಿ, ಮಂಗಳೂರು ಹಾಗೂ ವಿಜಯಪುರದಲ್ಲಿ ತಲಾ 200 ಎಕರೆಯ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಪ್ಲಾಸ್ಟಿಕ್ ಪಾರ್ಕ್ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅರ್ಜಿ ಸಲ್ಲಿಸುವ ಅರ್ಹ ಉದ್ಯಮಿಗಳಿಗೆ ಅಗತ್ಯ ಜಮೀನನ್ನು ಒದಗಿಸಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪ್ಲಾಸ್ಟಿಕ್ ವಲಯಕ್ಕೆ ಅಗತ್ಯವಾದ ನಿಪುಣ ಮಾನವ ಸಂಪನ್ಮೂಲ ನಿರ್ಮಾಣ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರೀಯ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಐಪಿಇಟಿ) ಇಲ್ಲಿ ತನ್ನ ಕ್ಯಾಂಪಸ್ ಆರಂಭಿಸಲಿದೆ ಎಂದರು.
ದೇಶದ ಪ್ಲಾಸ್ಟಿಕ್ ಉದ್ಯಮವು ಈಗಾಗಲೇ 40 ಲಕ್ಷ ಜನರಿಗೆ ಉದ್ಯೋಗ ನೀಡಿದೆ. ಮುಂದಿನ ಒಂದು ವರ್ಷದಲ್ಲಿ ಇನ್ನೂ 15 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೂಡಿಕೆದಾರರಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದ್ದು ಕೈಗಾರಿಕಾ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ 12ನೇ ವರ್ಷದ ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸಮಾವೇಶವು ಮುಂದಿನ ವರ್ಷ ಫೆಬ್ರವರಿ 5ರಿಂದ 10ರವರೆಗೆ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ ಎಂದು ತಿಳಿಸಿದರು.



