
ಪ್ರಗತಿವಾಹಿನಿ ಸುದ್ದಿ: ನವದೆಹಲಿ: ಏರ್ ಇಂಡಿಯಾ ವಿಮಾನದ ಪೈಲಟ್ ತರಬೇತಿಗೆ ಬಂದಿದ್ದ ಯುವಕನೊಬ್ಬ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯ ವಸಂತ್ ಕುಂಜ್ನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಈ ಘಟನೆ ನಡೆದಿದೆ. ಹೋಟೆಲ್ ರೂಂ ನಲ್ಲಿ ಏರ್ ಇಂಡಿಯಾ ಸಂಸ್ಥೆಯ ಪೈಲಟ್ ಒಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮುಂಬೈ ಮೂಲದ ಇವರು ಅತ್ಯಾಧುನಿಕ ‘ಬೋಯಿಂಗ್ 787’ ವಿಮಾನ ಚಾಲನಾ ತರಬೇತಿಗಾಗಿ ದೆಹಲಿಗೆ ಬಂದಿದ್ದರು. ಘಟನೆಯಲ್ಲಿ ಯಾವುದೇ ಕೊಲೆ ಅಥವಾ ಸಂಚಿನಂತಹ ಕೃತ್ಯಗಳು ನಡೆದಿಲ್ಲ ಎಂದು ಪ್ರಾಥಮಿಕ ತನಿಖೆ ನಡೆಸಿರುವ ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬೋಯಿಂಗ್ 787 ತರಬೇತಿಗೆ ಬಂದಿದ್ದರು: ಈ ಹಿಂದೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪೈಲಟ್, ಇತ್ತೀಚೆಗಷ್ಟೇ ಏರ್ ಇಂಡಿಯಾಕ್ಕೆ ವರ್ಗಾವಣೆಯಾಗಿದ್ದರು. ಬೋಯಿಂಗ್ 787 ಡ್ರೀಮ್ಲೈನರ್ ವಿಮಾನದ ಪರಿವರ್ತನೆ ತರಬೇತಿಗಾಗಿ ಸೆಪ್ಟೆಂಬರ್ 10 ರಂದು ದೆಹಲಿಗೆ ಬಂದು ವಸಂತ್ ಕುಂಜ್ ಹೋಟೆಲ್ನಲ್ಲಿ ತಂಗಿದ್ದರು.
ಪೈಲಟ್ ಕುಟುಂಬದವರ ಮೊಬೈಲ್ ಕರೆಗಳಿಗೆ ಸ್ಪಂದಿಸದಿದ್ದಾಗ ಗಾಬರಿಗೊಂಡ ಅವರ ಸಹೋದರ ಹೋಟೆಲ್ ಮ್ಯಾನೇಜರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ರೂಮ್ ಗೆ ಹೋಗಿ ನೋಡಿದಾಗ ಒಳಗಿನಿಂದ ಲಾಕ್ ಆಗಿದ್ದರಿಂದ, ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಪೈಲಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಅವರನ್ನು ವಸಂತ್ ಕುಂಜ್ ಉತ್ತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿ, ಪೈಲಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತರಬೇತಿ ಪೈಲಟ್ ಸಾಅವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸಿಬ್ಬಂದಿ ನಿಧನಕ್ಕೆ ಏರ್ ಇಂಡಿ ಸಂಸ್ಥೆ ಕಂಬನಿ ಮಿಡಿದಿದೆ.




