Kannada NewsKarnataka News

*ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಲಿಂ. ಗುರುಶಾಂತಲಿಂಗ ಶಿವಾಚಾರ್ಯರ ಪುಣ್ಯಾರಾಧನೆ*

ಪ್ರಗತಿವಾಹಿನಿ ಸುದ್ದಿ : ಶ್ರೀಗುರುವಿನ ಕೃಪಾಕಾರುಣ್ಯದೊಂದಿಗೆ ಪಡೆದ ಇಷ್ಟಲಿಂಗವನ್ನು ದೇಹದ ಮೇಲೆ ಶಾಶ್ವತವಾಗಿ ಧಾರಣೆಮಾಡಿಕೊಂಡು ನಿತ್ಯದಲ್ಲಿ ಇಷ್ಟಲಿಂಗಾರ್ಚನೆ ನಡೆಸುವ ವೀರಶೈವರಿಗೆ ಶಿವಯೋಗ ಸಾಧನೆಯೇ ಶ್ರೇಷ್ಠವಾದದ್ದು ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ರವಿವಾರ ತಮ್ಮ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ತಮ್ಮ ಗುರುಗಳಾದ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಶ್ರೀಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ನಿರಂತರ ಶಿವಯೋಗ ಸಾಧನೆ ಮತ್ತು ಧರ್ಮ ಜಾಗೃತಿಗೆ ಮೊದಲ ಆದ್ಯತೆ ನೀಡಿದ್ದ ತಮ್ಮ ಗುರುಗಳ ಆಧ್ಯಾತ್ಮದ ಬದುಕನ್ನು ಶಾಂತಲಿಂಗ ಶಿವಾಚಾರ್ಯರು ಭಕ್ತಿಯಿಂದ ಸ್ಮರಿಸಿದರು.  

ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಯೋಗ ಸಾಧನೆಯು ಚಿತ್ತಶುದ್ಧಿಗೆ ಕಾರಣವಾಗುತ್ತದೆ. ಶಿವಯೋಗ ಸಾಧನೆಗೆ ಮನಸ್ಸನ್ನು ಏಕಾಗ್ರತೆಯಲ್ಲಿ ಅಣಿಗೊಳಿಸಲು ಇಷ್ಟಲಿಂಗದ ಮುಖೇನ ಅನನ್ಯ ಭಕ್ತಿಯಿಂದ ನಡೆಸುವ ಶಿವಪಂಚಾಕ್ಷರಿ ಮಹಾಮಂತ್ರದ ಅನುಸಂಧಾನವೇ ಮೂಲ ಕಾರಣವಾಗುತ್ತದೆ ಎಂದರು.

ವಿಶೇಷ ಪೂಜೆ

ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂತನಾಂಬರ ಧಾರಣೆ, ನೂರೊಂದು ಬಿಲ್ವಾರ್ಚನೆ, ಪುಷ್ಪಾಲಂಕಾರಗಳೊಂದಿಗೆ ಮಹಾಮಂಗಳಾರತಿಯ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಪುಣ್ಯಾರಾಧನೆಯ ಅಂಗವಾಗಿ ನಡೆದ ದಾಸೋಹದಲ್ಲಿ ಭಕ್ತರು ಗುರುಗಳ ಪ್ರಸಾದ ಸ್ವೀಕರಿಸಿದರು.

ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಶ್ರೀಗಳ ಕರ್ತೃ ಗದ್ದುಗೆಗೆ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button