ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು :
ಬೆಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಅಭಾವ ಹೆಚ್ಚಾಗುತ್ತಿದ್ದು, ಕುಡಿಯುವ ನೀರು ತರಲು ಬಿಂದಿಗೆ ಹಿಡಿದು ಗ್ರಾಮದಿಂದ ಸುಮಾರು 2 ಕಿಮಿ ದೂರದವರೆಗೆ ಅಲುದಾಡುತ್ತಿದ್ದ ಜನರಿಗೆ ಅವರ ಮನೆಯ ಬಾಗಿಲಿಗೆ ನೀರು ಮುಟ್ಟಿಸುವ ಕೆಲಸವನ್ನು ಗ್ರಾಮದ ಚನ್ನಬಸಪ್ಪ ಮಲ್ಲಶೆಟ್ಟಿ ಮಾಡುತ್ತಿದ್ದಾರೆ.
ಹೌದು ತಿಗಡೊಳ್ಳಿ ಗ್ರಾಮದಲ್ಲಿ ಕೆಲವು ಬೀದಿಗಳಿಗೆ ಸ್ವ ಇಚ್ಚೆಯಿಂದ ತಮ್ಮ ಸ್ವಂತ ನೀರಿನ ಟ್ಯಾಂಕರ್ ಮುಖಾಂತರ ನೀರನ್ನು ಹೊಲ ಗದ್ದೆಗಳಿಂದ ತಂದು ಸರಬರಾಜು ಮಾಡುವ ಮೂಲಕ ಮಾನವೀಯತೆ ಮೆರೆಯುವ ಮೂಲಕ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ.
ಗ್ರಾಮದ ಪೂಜೇರ ಓಣಿಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದ ನಿವಾಸಿಗಳಿಗೆ ರೈತರಾದ ಶ್ರೀಧರ ಕಳಸಣ್ಣವರ, ಚನ್ನಯ್ಯಾ ಪಲ್ಲಕ್ಷವಿ, ರೇವಯ್ಯಾ ತುರಮಂದಿ, ಕಳೆದ 2 ವರ್ಷಗಳಿಂದ ತಮ್ಮ ಜಮೀನಿನಲ್ಲಿರುವ ಕೊಳವೆಬಾವಿ ಮೂಲಕ ಗ್ರಾಮಕ್ಕೆ ಪೈಪಲೈನ್ ತಂದು ವಾರದಲ್ಲಿ 3 ಬಾರಿ ತಿಗಡೊಳ್ಳಿ ಗ್ರಾಮದ ತಮ್ಮ ಬೀದಿಗಳಲ್ಲಿ ಜನರಿಗೆ ಕುಡಿಯಲು ಹಾಗೂ ಬಳಸಲು ನೀರು ನೀಡುತ್ತಾ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಸೈ ಎನಿಸಿಕೊಂಡಿದ್ದಾರೆ.
ಇಷ್ಟು ಸಮಸ್ಯೆ ಈ ಗ್ರಾಮದಲ್ಲಿದ್ದರೂ ತಮ್ಮ ತಮ್ಮ ಸಮಸ್ಯೆಗಳನ್ನು ಜನರು ತಾವೆ ಬಗೆಹರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣವಾಗಿದ್ದು ತಿಗಡೊಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿ. ಇಷ್ಟು ನೀರಿನ ಸಮಸ್ಯೆ ಈ ಗ್ರಾಮದಲ್ಲಿ ಕಂಡು ಬಂದರೂ ಈವರೆಗೂ ಕುಡಿಯುವ ನೀರಿನ ಸರಬರಾಜು ಕುರಿತು ಯಾವುದೇ ಯೋಜನೆಯನ್ನು ರೂಪಿಸದೆ ಸೌಜನ್ಯಕ್ಕಾಗಿಯೂ ಜನರ ಸಮಸ್ಯೆಯನ್ನು ಸಹ ಆಲಿಸದೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಚಾಲ್ತಿಯಲ್ಲಿಲ್ಲ ಶುದ್ಧ ನೀರಿನ ಘಟಕ :
ತಿಗಡೊಳ್ಳಿ ಹಾಗೂ ನಾಯಿತೇಗೂರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಂದ್ ಆಗಿವೆ. ಇದರ ಪರಿಣಾಮ ತಿಗಡೊಳ್ಳಿ ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ಪ್ರತಿನಿತ್ಯ 8 ಕಿಮೀ ದೂರದ ಕಿತ್ತೂರು ಪಟ್ಟಣಕ್ಕೆ ತೆರಳಿ ಶುದ್ಧ ಕುಡಿಯುವ ನೀರು ತರುವ ಪರಿಸ್ಥಿತಿ ಬಂದಿದೆ.
ಕ್ಷೇತ್ರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆ ಕುರಿತು ಮಾಹಿತಿ ಸಲ್ಲಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾಹಿತಿ ನೀಡಿದ ತಕ್ಷಣ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು. ಅಲ್ಲಿಯವರೆಗೂ ಗ್ರಾಮಗಳಲ್ಲಿ ನೀರನ್ನು ಬಾಡಿಗೆ ನೀಡುವ ರೈತರಿದ್ದರೆ ಅವರಿಂದ ನೀರು ಪಡೆಯುವಂತೆ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು ದಿ.1 ರಂದು ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ಕರೆಯಲಾಗಿದೆ ಎನ್ನುತ್ತಾರೆ ಶಾಸಕ ಮಹಾಂತೇಶ ದೊಡಗೌಡರ.
ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಗ್ರಾಮದಲ್ಲಿರುವ ನೀರಿನ ಸಮಸ್ಯೆ ಬಗೆ ಹರಿಸಲು ಮುಂದಾಗುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡೆಸಿದ್ದಾರೆ. ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗುವ ಸಾಧ್ಯತೆಗಳು ಗ್ರಾಮದಲ್ಲಿ ದಟ್ಟವಾಗಿದೆ.
ಬರಗಾಲ ಪರಿಸ್ಥಿತಿ ಎದುರಾದ ಕಾರಣ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಅದಕ್ಕಾಗಿ ಕೈಲಾದಷ್ಟು ಗ್ರಾಮದ ನಿವಾಸಿಗಳಿಗೆ ಟ್ಯಾಂಕರ ಮೂಲಕ ನೀರು ಸರಬರಾಜು ಮಾಡುತ್ತಿದ್ದೆನೆ.
–ಚನ್ನಬಸಪ್ಪ ಮಲ್ಲಶೆಟ್ಟಿ, ಗ್ರಾಮಸ್ಥ.ಕುಡಿಯುವ ನೀರಿನ ಸಮಸ್ಯ ಬಗ್ಗೆ ಹರಿಸಲು ಕ್ಷೇತ್ರಕ್ಕೆ ಸರ್ಕಾರದಿಂದ ಪ್ರಥಮ ಬಾರಿಗೆ ರೂ.2 ಕೊಟಿ ದೊರೆತಿದ್ದು ಆದಷ್ಟು ಬೇಗನೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗೆ ಹರಿಸಲಾಗುವುದು.
-ಮಹಾಂತೇಶ ದೊಡಗೌಡರ, ಶಾಸಕರು.