
ಪ್ರಗತಿವಾಹಿನಿ ಸುದ್ದಿ: ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಡಿಸೆಂಬರ್ 24ರಂದು ನಡೆದ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆ ಶ್ಯಾಮ್ಪುರ ಗ್ರಾಮದ ಸರಪಂಚರ ಪತ್ನಿ ಬಲ್ಲಿಂದರ್ ಕೌರ್. ಇವರನ್ನು ಕೊಂದಿದ್ದು ಸ್ವಂತ ಮಗನೇ ಎಂಬುದು ತನಿಖೆಯಿಂದ ಬಯಲಾಗಿದೆ. ವಿದೇಶದಿಂದ ರಹಸ್ಯವಾಗಿ ಆಗಮಿಸಿ, ಸ್ನೇಹಿತನ ಸಹಾಯದಿಂದ ತನ್ನ ತಾಯಿಯನ್ನೇ ಹತ್ಯೆ ಮಾಡಿರುವ ಮಗನ ಕೃತ್ಯ ಇಡೀ ಗ್ರಾಮದಲ್ಲಿ ಆಘಾತ ಮೂಡಿಸಿದೆ.
ಡಿಸೆಂಬರ್ 24ರ ರಾತ್ರಿ ಶ್ಯಾಮ್ಪುರ ಗ್ರಾಮದ ಸರಪಂಚರ ಪತ್ನಿ ಬಲ್ಲಿಂದರ್ ಕೌರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದು ಕೊಲೆಯೋ ಅಥವಾ ಅಸಹಜ ಸಾವೋ ಎಂಬ ಅನುಮಾನಗಳು ಮೂಡಿದ್ದರಿಂದ ಪೊಲೀಸರು ಪ್ರಕರಣವನ್ನು ಸಿಟಿ ಕ್ರೈಂ ಬ್ರಾಂಚ್ಗೆ ಹಸ್ತಾಂತರಿಸಿದ್ದರು. ತನಿಖೆಗಿಳಿದ ಪೊಲೀಸರಿಗೆ, ಕೊಲೆ ಆರೋಪಿ ಬಲ್ಲಿಂದರ್ ಕೌರ್ ಅವರ ಮಗನೇ ಎಂಬ ವಿಚಾರ ತಿಳಿದಿದೆ.
ತಾಂತ್ರಿಕ ಸಾಕ್ಷ್ಯಗಳು, ಮೊಬೈಲ್ ಫೋನ್ ಲೋಕೇಶನ್ ಟ್ರ್ಯಾಕಿಂಗ್ ಮತ್ತು ಕರೆ ವಿವರ ದಾಖಲೆಗಳ ಆಧಾರದ ಮೇಲೆ ಪೊಲೀಸರು ಈ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.
ತಾಯಿ ಬಲ್ಲಿಂದರ್ ಕೌರ್ ಅವರನ್ನೇ ಕೊಲೆ ಮಾಡಿದ ಗೋಮಿತ್ ರಥಿ, ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಪ್ರೇಮ ಸಂಬಂಧಕ್ಕೆ ಕುಟುಂಬದಲ್ಲಿ ತೀವ್ರ ವಿರೋಧವಿತ್ತು. ಮಗನ ಈ ಸಂಬಂಧವನ್ನು ದೂರ ಮಾಡುವುದಕ್ಕಾಗಿ, ಪೋಷಕರು ಗೋಮಿತ್ ರಥಿಯನ್ನು ಇಂಗ್ಲೆಂಡ್ಗೆ ಕಳುಹಿಸಿದ್ದರು. ಆದರೆ, ಡಿಸೆಂಬರ್ 18ರಂದು ಗೋಮಿತ್ ರಥಿ, ಕುಟುಂಬದ ಯಾರಿಗೂ ಮಾಹಿತಿ ನೀಡದೆ ಇಂಗ್ಲೆಂಡ್ನಿಂದ ರಹಸ್ಯವಾಗಿ ಭಾರತಕ್ಕೆ ಮರಳಿದ್ದ.
ಆತನ ಆಗಮನದ ಬಗ್ಗೆ ಆತನ ಸ್ನೇಹಿತ ಪಂಕಜ್ಗೆ ಮಾತ್ರ ತಿಳಿದಿತ್ತು. ಪಂಕಜ್ ಕೂಡ ಈ ವಿಷಯವನ್ನು ಗ್ರಾಮಸ್ಥರು ಮತ್ತು ಸಂಬಂಧಿಕರಿಂದ ಮರೆಮಾಚಿದ್ದ ಎಂಬ ವಿಚಾರ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.


