Kannada NewsKarnataka NewsLatest

*ಅಂಗನವಾಡಿ ಕಾಯಕರ್ತೆಯರ ಸಮಸ್ಯೆಗೆ ಪರಿಹಾರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ; ನಂಜನಗೂಡು: ಚುನಾವಣೆ ಪೂರ್ವ ಕಾಂಗ್ರೆಸ್ ಘೋಷಿಸಿದ್ದ ಯೋಜನೆಗಳು ನಿರಂತರವಾಗಿರಲಿವೆ. ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪ ಅವಧಿಯಲ್ಲೆ ಜನಮನ್ನಣೆ ಗಳಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಆಗಸ್ಟ್ 30 ರಂದು ಮೈಸೂರಿನಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದ ಹಿನ್ನೆಲೆಯಲ್ಲಿ ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರತಿಯೊಬ್ಬ ಮಹಿಳೆಯರು ನಾನು ಯಜಮಾನಿ ಎನ್ನುವ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿಕೊಟ್ಟಿದ್ದಾರೆ ಎಂದರು. ಮೈಸೂರಿನಲ್ಲಿ ನಡೆಯಲಿರುವ ಗೃಹ ಲಕ್ಷ್ಮಿ ಯೋಜನೆಯ ಚಾಲನಾ ಸಮಾರಂಭದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಅಂಗನವಾಡಿ ಕಾಯಕರ್ತೆಯರ ಸಮಸ್ಯೆಗೆ ಪರಿಹಾರ:
ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಅಂಗನವಾಡಿ, ಆಶಾ ಕಾರ್ಯಕರ್ತೆಯರು ತಮ್ಮ ಕೆಲಸ ನಿರ್ವಹಿಸಿದರು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿದರು.

ಧ್ರುವನಾರಾಯಣ್ ಸ್ಮರಿಸಿದ ಸಚಿವರು: ಭಾಷಣದ ಆರಂಭದಲ್ಲಿ ದಿವಂಗತ ಧ್ರುವನಾರಾಯಣ್ ಅವರನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಮರಿಸಿದರು. ಧ್ರುವನಾರಾಯಣ್ ಅವರು ಸಂಘಟಕ ರಾಗಿದ್ದರು, ಅವರ‌‌ ಮಗ ದರ್ಶನ್ ತಂದೆ ಸ್ಥಾನವನ್ನು ತುಂಬುತ್ತಿದ್ದು, ಕ್ಷೇತ್ರದ ಜನರಲ್ಲಿ ತಮ್ಮ ತಂದೆ ತಾಯಿಯನ್ನು ಕಾಣುತ್ತಿದ್ದಾರೆ ಎಂದರು. ದರ್ಶನ್ ನನ್ನ ಮಗನಿಗಿಂತಲೂ ಮೂರು ತಿಂಗಳು ಚಿಕ್ಕವನಾಗಿದ್ದು, ದರ್ಶನ್ ನನಗೆ ಮಗನ ಸಮಾನ ಎಂದರು.


ಈ ವೇಳೆ ನಂಜನಗೂಡು ಶಾಸಕ ದರ್ಶನ್,‌ ತಹಸಿಲ್ದಾರ್ ಶಿವಕುಮಾರ್ ಕಾಸನೂರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button