*ಎಂಎಲ್ ಸಿ ಪತ್ನಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ಖಂಡಿಸಿದ ಅಶೋಕ ಚಂದರಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ, ಎಂಎಲ್ ಸಿ ನಾಗರಾಜ ಯಾದವ ಪತ್ನಿ ರಾಜಶ್ರೀ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ.
ಇಂದು ಬೆಳಗಾವಿ ಕನ್ನಡಸಾಹಿತ್ಯ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರಾಜಶ್ರೀ ಅವರು ಕನ್ನಡದ ಕೆಲಸ ಮಾಡಿಯೇ ಇಲ್ಲ. ಕರ್ನಾಟಕ ಸರಕಾರಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ.
ವಿಧಾನ ಪರಿಷತ್ತ ಸದಸ್ಯ ನಾಗರಾಜ ಯಾದವ ಅವರ ಪತ್ನಿ ಎಂಬ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗಿದೆಯೆಂಬ ಭಾವನೆ ಉಂಟಾಗಿದ್ದು ಸರಕಾರಕ್ಕೆ ಕಳಂಕ ತಂದಂತಾಗಿದೆ . ಮರಾಠಾ ಮಂಡಳ ಶಿಕ್ಷಣ ಸಂಸ್ಥೆಯು ಕನ್ನಡ ನಾಡು, ನುಡಿ, ಗಡಿಯ ಸಂಬಂಧ ಯಾವಗಲೂ ನಕಾರಾತ್ಮಕ ನಿಲುವು ತಳೆಯುತ್ತ ಬಂದಿದೆ. ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಧಿಕ್ಕರಿಸುತ್ತಲೇ ಬಂದಿದೆ. ಸಂಸ್ಥೆಯ ಒಂದೂ ನಾಮ ಫಲಕಗಳಲ್ಲಿ ಕನ್ನಡವು ಕಾಣುವುದಿಲ್ಲ ಎಂದು ಆರೋಪಿಸಿದರು.
ಅಲ್ಲದೇ ರಾಜ್ಯೋತ್ಸವ ಪ್ರಶಸ್ತಿಯನ್ನು 60 ವರ್ಷ ವಯಸ್ಸಿಗಿಂತ ಮೇಲಿನವರಿಗೆ ಕೊಡಬೇಕೆಂಬ ನಿಯಮವನ್ನು ಸಹ ರಾಜಶ್ರೀಯವರ ವಿಷಯದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ಆದ್ದರಿಂದ ರಾಜಶ್ರೀ ಅವರಿಗೆ ನೀಡಲು ಉದ್ದೇಶಿಸಿರುವ ಪ್ರಶಸ್ತಿಯನ್ನು ಸರಕಾರದ ಮಾನ, ಮರ್ಯಾದೆ, ಗೌರವದ ದೃಷ್ಟಿಯಿಂದ ತತಕ್ಷಣ ತಡೆಹಿಡಿಯಬೇಕೆಂದು ಆಗ್ರಹಿಸಿದರು.
 
					 
				 
					 
					 
					 
					
 
					 
					 
					


