Latest

ಪರಿಶಿಷ್ಟ ಪಂಗಡಕ್ಕೆ ಮತ್ತೊಂದು ಸಮುದಾಯ: ಸಿಎಂ ಘೋಷಣೆ

*ಶೀಘ್ರದಲ್ಲೇ ಗಂಗಾಮತಸ್ತ ಸಮುದಾಯ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಹಾವೇರಿ (ರಾಣೀಬೆನ್ನೂರು) : ಶೀಘ್ರದಲ್ಲಿಯೇ ಗಂಗಾಮತಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ  ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ (ರಿ) ವತಿಯಿಂದ ಸುಕ್ಷೇತ್ರ ನರಸೀಪುರದ  ಗುರುಪೀಠದಲ್ಲಿ ಆಯೋಜಿಸಿರುವ ಶ್ರೀ *ನಿಜಶರಣ* *ಅಂಬಿಗರ ಚೌಡಯ್ಯನವರ* *5ನೇ ಶರಣ ಸಂಸ್ಕೃತಿ ಉತ್ಸವ* , ಹಾಗೂ ಶ್ರೀ ನಿಜಶರಣ *ಅಂಬಿಗರಚೌಡಯ್ಯನವರ 903ನೇ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈಗಾಗಲೇ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಬಳಿ ಎಸ್.ಟಿ ಗೆ ಸೇರಿಸುವ ಕಡತವಿದ್ದು, ಕೇಂದ್ರ ಬುಡಕಟ್ಟು  ಸಚಿವ ಅರ್ಜುನ್ ಮುಂಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಅಂತಿಮ ಘಟ್ಟದಲ್ಲಿದೆ. ಸಚಿವ ಸಂಪುಟದಲ್ಲಿ ಅನುಮೋದಿಸಲಾಗುವುದು.  ಅವರು ಕೇಳಿದ್ದ  ಕೆಲವು ವಿವರಣೆಗಳನ್ನು  ಕಳುಹಿಸಿಕೊಡಲಾಗಿದೆ. ಮಾತು ಕೊಟ್ಟಿದ್ದಂತೆ ಕೆಲಸ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ  ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
*ಒಗ್ಗಟ್ಟಿನಲ್ಲಿ ಬಲ*
28 ಉಪಕುಲಗಳನ್ನು ಒಟ್ಟು ಮಾಡುವ ಕೇಂದ್ರ. ಒಗ್ಗಟ್ಟಿನಲ್ಲಿ ಬಲವಿದೆ. ಈ ಮಠದ ಬೆಳವಣಿಗೆ ಈ ಕುಲದ ಬೆಳವಣಿಗೆಯೊಂದಿಗೆ ಸೇರಿದೆ. ಈ ಮಠದಿಂದ ಸ್ಫೂರ್ತಿ ಪಡೆಯಬೇಕಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ. ಗುರುಕುಲ ನಿರ್ಮಾಣವಾಗುತ್ತಿದ್ದು, ಮಠಕ್ಕೆ 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ  ಹೇಳಿದರು. ಹಿಂದುಳಿದ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದಾಗಲೂ 2 ಕೋಟಿ ರೂ.ಗಳ ಮಂಜೂರಾತಿ ಆಗಿದೆ. ಅದನ್ನೂ ಕೂಡ ಬೇಗ ಬಿಡುಗಡೆ ಮಾಡಲಾಗುವುದು.ಇಲ್ಲಿನ ಮಠ ಹಾಗೂ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು. ಇದು ನಮ್ಮ ಶರಣರ ಪರಂಪರೆ ನಿತ್ಯ ನಿರಂತರವಾಗಿ ಮಠದಿಂದ ಆಗಬೇಕು. ಈ ಸಮಾಜ ಬೇರೆ ವೃತ್ತಿ ಗಳನ್ನು ಮಾಡುತ್ತಿದೆ. ಒಳನಾಡು ಮೀನುಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಕಾಲ ಬದಲಾಗಿದ್ದು, ನಾವೆಲ್ಲರೂ ಜ್ಞಾನಾರ್ಜನೆ ಮಾಡಿದಾಗ ಸಮಕಾಲೀನ ಸವಾಲುಗಳನ್ನು ಎದುರಿಸಬಹುದು. ಮಕ್ಕಳು. ಮುಂದುವರೆದು, ಇತರೆ ವೃತ್ತಿಗಳನ್ನು ಮಾಡಿದಾಗ ಈ ಗಂಗಾಮತಸ್ತ ಕುಲ ಮುಂದುವರೆಯುತ್ತದೆ. ಮಕ್ಕಳಿಗೆ  ವಿದ್ಯಾಭ್ಯಾಸ ಎಷ್ಟೇ ಕಷ್ಟವಿದ್ದರೂ ಓದಿಸಬೇಕು ಎಂದರು. ನಾವು ಗಂಗಾಮತಸ್ತ ಗುರುಗಳ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.  ಸಮುದಾಯ ಭವನಕ್ಕೆ ಬರುವ ಬಜೆಟ್ ನಲ್ಲಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.
*ವಚನಗಳ ರಕ್ಷಣೆಯಲ್ಲಿ ಅಂಬಿಗರ ಚೌಡಯ್ಯ ಮಹತ್ವದ ಪಾತ್ರ :*
ಅಂಬಿಗರ ಚೌಡಯ್ಯ ಕಟುಸತ್ಯವನ್ನು ನುಡಿಯುವ ಶರಣರು. ಪ್ರಿಯವಾದ ಸತ್ಯ ಮತ್ತು ಸುಳ್ಳುಗಳಿರುವ ವ್ಯಾಖ್ಯಾನಗಳಿವೆ. ಸತ್ಯವೆಂದರೆ ಕಠೋರ. ಅಂಬಿಗರ ಚೌಡಯ್ಯ ಸತ್ಯವನ್ನು ಕಠಿಣ ಶಬ್ಧಗಳಲ್ಲಿ ಹೇಳುವಂತಹವರು .ಬಸವಣ್ಣನವರು ಇವರನ್ನು ನಿಜಶರಣೆರೆಂದು ಕರೆದರು. ಕಲ್ಯಾಣದಲ್ಲಿ ವೈಚಾರಿಕ ಕ್ರಾಂತಿಯಾಗುತ್ತದೆ ಎಂದು ನುಡಿದಿದ್ದರು. ಆಗ ವಚನಗಳ ರಕ್ಷಣೆ ಮುಖ್ಯವಾಗುತ್ತದೆ ಎಂದು ಹೇಳಿದ್ದು ನಿಜವಾಗಿದ್ದದಕ್ಕೆ ಅಂಬಿಗರ ಚೌಡಯ್ಯರನ್ನು ನಿಜಶರಣರೆಂದು ಕರೆದರು. ವಚನಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿರಲು ಏಕೈಕ ಕಾರಣ ಅಂಬಿಗರ ಚೌಡಯ್ಯ. ಒಂದು ಕುಲ ಅಥವಾ ಸಮಾಜದವರು ತಮ್ಮ ಸಂಸ್ಕಾರ, ಸಂಸ್ಕೃತಿ, ಇತಿಹಾಸ ಪರಂಪರೆಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು. ಇಂತಹ ಶಿವಶರಣರ ಕುಲಕ್ಕೆ ತಾವುಗಳು ಸೇರಿದ್ದೀರಿ.ಅಂಬಿಗರು ಒಂದೇ ಹುಟ್ಟಿನಲ್ಲಿ ದಡ ಪಾರು ಮಾಡಿಸುವ ಶಕ್ತಿಯುಳ್ಳವರು. ಕೇವಲ ದೋಣಿಗಳನ್ನು ನಡೆಸುವುದು ಕಸುಬಲ್ಲ.  ಇಡೀ ಮಾನವಕುಲವನ್ನು ದಡ ಸೇರಿಸುವವರೇ ಅಂಬಿಗ ಚೌಡಯ್ಯ. ತಾಯಿಯ ಆಶೀರ್ವಾದದಲ್ಲಿ ಸಾತ್ವಿಕ ಚಿಂತನೆಯಿದೆ. ಇದೇ ನಮ್ಮನ್ನು ಒಳ್ಳೆಯ ಹಾದಿಯಲ್ಲಿ ನಡೆಸುತ್ತಿದೆ.
ಈ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬರಬೇಕು. 21 ನೇ ಶತಮಾನದಲ್ಲಿ ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿದೆ. ತುಳಿತಕ್ಕೊಳಗಾದ ಸಮಾಜದವರು ಶಿಕ್ಷಣ ಪಡೆದು, ವಿವಿಧ ವೃತ್ತಿಯಲ್ಲಿ  ದುಡಿದು ಸ್ವಾಭಿಮಾನದ ಬದುಕನ್ನು ಬದುಕುವಂತಾಗಬೇಕು ಎಂದರು.

ಇಂಗ್ಲೀಷ್ ಸುದ್ದಿ –  https://pragativahini.in/gangamatastha-community-to-be-included-in-st-category-soon-cm-bommai

Gangamatastha community to be included in ST category soon- CM Bommai

https://pragati.taskdun.com/panchamasali2a-reasrvationyatnalbjp-highcommand/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button