*ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿ 2814 ಸಿಬ್ಬಂದಿಗಳ ನೇಮಕ ಶೀಘ್ರ: ರಾಜು ಕಾಗೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಯವ್ಯ ರಸ್ತೆ ಸಾರಿಗೆ ನಿಗಮದಲ್ಲಿ 2814 ಸಿಬ್ಬಂದಿಗಳ ನೇಮಕಾತಿಗೆ ಶಿಘ್ರದಲ್ಲೆ ಕ್ರಮ ಕೈಗೊಳ್ಳುತ್ತೇವೆ ಎಂದು ವಾಯವ್ಯ ರಸ್ತೆ ಸಾರಿಗೆ ನಿಮಗದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2814 ಸಿಬ್ಬಂದಿಗಳ ನೇಮಕಾತಿ ಕುರಿತು ಜಿಯೋ ಮಾಡಿದ್ದು. ಅದರಲ್ಲಿ 1 ಸಾವಿರ ಸಿಬ್ಬಂದಿ ತೆಗೆದುಕೊಳ್ಳಲು ಹಣಕಾಸು ಇಲಾಖೆ ಅನುಮತಿ ಕೊಟ್ಟಿದೆ. ಇನ್ನುಳಿದಂತೆ ಕೆಲ ತಾಂತ್ರಿಕ ಕಾನೂನು ತೊಡಕುಗಳಿವೆ. ಅವುಗಳನ್ನು ನಿವಾರಿಸಿ 1814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
300 ಬಸ್ ಖರೀದಿಸಲು ಅನುಮತಿ
ಮೊನ್ನೆ 200 ಬಸ್ ತೆಗೆದುಕೊಂಡಿದ್ದೇವೆ. ಈಗ ಮತ್ತೆ 300 ಬಸ್ ಖರೀದಿಸಲು ಅನುಮತಿ ಸಿಕ್ಕಿದೆ. ಟೆಂಡರ್ ಕರೆಯುತ್ತಿದ್ದು, ಎರಡ್ಮೂರು ದಿನದಲ್ಲಿ ಟೆಂಡರ್ ಓಪನ್ ಆಗಲಿದ್ದು, ಒಂದು ತಿಂಗಳಲ್ಲಿ 10 ಬಸ್ ಗಳು ಸಿಗಲಿವೆ. ಏಕಕಾಲಕ್ಕೆ ಒಮ್ಮೆ ಎಲ್ಲಾ ಬಸ್ ಗಳು ಹೊರಗೆ ಬರಲು ಸಾಧ್ಯವಿಲ್ಲ. ಹಂತ ಹಂತವಾಗಿ ಬಸ್ ಗಳು ಬರಲಿವೆ. ಬೇಡಿಕೆ ಅನುಸಾರ ಆಯಾ ಡಿಪೋಗಳಿಗೆ ಬಸ್ ಗಳನ್ನು ವಿತರಿಸಲಾಗುತ್ತದೆ ಎಂದರು.
ಸಾರಿಗೆ ಇಲಾಖೆಯ ಸಭೆಯಲ್ಲಿ ಸಾರಿಗೆ ಇಲಾಖೆಯ ಲೋಪದೋಷಗಳ ನಿವಾರಣೆ ಮತ್ತು ಬಸ್ ಡಿಪೋ, ವರ್ಕ್ ಶಾಪ್ ಗಳ ಸುಧಾರಣೆಗೆ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವುದು ಸೇರಿ ಹಲವು ನಿರ್ಣಯ ಕೈಗೊಂಡಿದ್ದೇವೆ ಎಂದರು.
ಮಕ್ಕಳು ಶಾಲಾ, ಕಾಲೇಜಿಗೆ ಹೋಗಲು ಯಾವ ರೀತಿ ಸಮಸ್ಯೆ ಆಗುತ್ತಿದೆ. ಎಕ್ಸಪ್ರೆಸ್ ಬಸ್ ಗಳನ್ನು ಎಲ್ಲೆಲ್ಲಿ ನಿಲ್ಲಿಸಬೇಕು..? ಒಟ್ಟಾರೆ ಜನರ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯಲ್ಲಿ ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ಚರ್ಚಿಸಿದ್ದೆವೆ. ಸಾರಿಗೆ ನೌಕರರ ಹಲವು ಬೇಡಿಕೆಗಳು ಮತ್ತು ಕುಂದು ಕೊರತೆಗಳ ಕುರಿತೂ ಚರ್ಚಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ನೌಕರರ ವೇತನ ಪರಿಷ್ಕರಣೆ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಿದೆ. ಈಗಾಗಲೇ ಸಾರಿಗೆ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆಗೆ ಬೆಂಗಳೂರಿನಲ್ಲಿ ಚರ್ಚಿಸಿದ್ದಾರೆ. ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ರಾಜು ಕಾಗೆ ಹೇಳಿದರು.