*ಅಶೋಕ್ ಅಣ್ಣಾ ನಿಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳಿ: ಸವದಿ ಟಾಂಗ್*
ಪ್ರಗತಿವಾಹಿನಿ ಸುದ್ದಿ: ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ನಾನೊಂದು ಸಲಹೆ ನೀಡುತ್ತೇನೆ. ನಿಮ್ಮ ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದನ್ನು ನೀವು ನೋಡಿಕೊಳ್ಳಿ ನಿಮ್ಮ ಟೆಂಟ್ ಕಿತ್ತುಕೊಂಡು ಹೋಗುತ್ತಿದೆ. ಬೇರೆಯವರ ಟೆಂಟ್ ಬಗ್ಗೆ ಯಾಕೆ ಆಲೋಚನೆ ಮಾಡುತ್ತೀರಾ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸವದಿ, ಪಾಪ ಅಶೋಕ್ ಅವರು ವಿರೋಧಪಕ್ಷದ ನಾಯಕರು. ಅವರು ಪ್ರತಿನಿತ್ಯ ಏನನ್ನಾದರೂ ಹೇಳಲೇಬೇಕಾಗುತ್ತದೆ. ಏನಾದರೂ ಹೇಳದೇ ಇದ್ದರೆ ಮೇಲಿನವರು ಸುಮ್ಮನೆ ಬಿಡಲ್ಲ. ಯಾಕೆ ಸುಮ್ಮನಿದ್ದೀಯಾ, ಮಲ್ಗೊಂಡಿದ್ದೀಯಾ ಅಂತ ಕೇಳುತ್ತಾರೆ. ಹೀಗಾಗಿ ಸ್ವಲ್ಪ ಸುದ್ದಿಯಲ್ಲಿ ಇರಬೇಕು ಎಂಬ ಕಾರಣಕ್ಕೆ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದರು.
ತಾನು ಮೊದಲು ಬಿಜೆಪಿಯಲ್ಲಿದ್ದ ಕಾರಣ ಈಗಲೂ ಅಲ್ಲಿ ನನಗೆ ಸ್ನೇಹಿತರಿದ್ದಾರೆ. ಅವರು ಹೇಳುವ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನದ ಜೊತೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಅಲ್ಲಾಡುತ್ತಿದೆ. ಬಿಜೆಪಿ ನಾಯಕರು ಎರಡೂ ಸ್ಥಾನಗಳಿಗೆ ಟವೆಲ್ ಹಾಕಿದ್ದಾರೆ ಎಂದರು.
ಅಶೋಕ್ ಅಣ್ಣಾ ನೀನೊಬ್ಬ ವಿರೋಧ ಪಕ್ಷದ ನಾಯಕನಾಗಿ ನಿಮ್ಮ ಪಕ್ಷವನ್ನು ಸರಿ ಮಾಡಿಕೊಳ್ಳುವ ಕಡೆ ಹೆಚ್ಚು ಗಮನ ಕೊಡಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದರ ಬಗ್ಗೆ ಮೊದಲು ನೀವು ಗಮನಹರಿಸಿ. ಮತ್ತೊಬ್ಬರ ತಟ್ಟೆಯಲ್ಲಿರುವ ನೊಣದ ಬಗ್ಗೆ ಯಾಕೆ ಚಿಂತೆ ಮಾಡುತ್ತೀರಿ? ಎಂದು ಕಾಲೆಳೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ