Kannada NewsKarnataka NewsLatest
ಬಿಜೆಪಿಯವರು ಯಾರಿಗೆಲ್ಲ ಕಿರುಕುಳ ನೀಡುತ್ತಾರೆ ಗೊತ್ತಾ?- ಡಿ.ಕೆ.ಶಿವಕುಮಾರ ಹೇಳಿಕೆ ನೋಡಿ

*ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯವರು ತಮಗೆ ಯಾರೆಲ್ಲಾ ರಾಜಕೀಯವಾಗಿ ಅಪಾಯ ಎಂದು ತಿಳಿಯುತ್ತಾರೋ ಅವರಿಗೆ ಈ ರೀತಿ ಕಿರುಕುಳ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ‘ ಬಿಜೆಪಿಯವರು ನನ್ನನ್ನು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಕ್ರಿಮಿನಲ್ ಆಗಿ ಬಿಂಬಿಸಿದ್ದಾರೆ. ರಾಜಕೀಯವಾಗಿ ಬಲಿಷ್ಠವಾಗಿ ಬೆಳೆಯುವವರ ವಿರುದ್ಧ ಈ ರೀತಿ ಆರೋಪ ಮಾಡುತ್ತಾರೆ. ಹೆಚ್ಚು ಬಲಶಾಲಿ ಆದಷ್ಟು ಹೆಚ್ಚು ಶತ್ರುಗಳು, ಬಲಶಾಲಿ ಅಲ್ಲದಿದ್ದರೆ ಶತ್ರುಗಳೇ ಇಲ್ಲ. ಬಿಜೆಪಿಯವರು ತಮಗೆ ಯಾರೆಲ್ಲಾ ರಾಜಕೀಯವಾಗಿ ಅಪಾಯ ಎಂದು ತಿಳಿಯುತ್ತಾರೋ ಅವರಿಗೆ ಈ ರೀತಿ ಕಿರುಕುಳ ನೀಡುತ್ತಾರೆ. ಪೊಲೀಸ್ ತನಿಖೆಯಲ್ಲಿ ವಿನಯ್ ಕುಲಕರ್ಣಿ ಅವರ ಮೇಲೆ ಯಾವುದೇ ಆರೋಪ ಇಲ್ಲ ಎಂದು ಪ್ರಕರಣ ಮುಕ್ತಾಯ ಹಂತದಲ್ಲಿ ಇದ್ದಾಗ, ಇವರು ರಾಜಕೀಯ ಉದ್ದೇಶದಿಂದ ಪ್ರಭಾವ ಬೀರಿ ಪ್ರಕರಣವನ್ನು ಸಿಬಿಐಗೆ ನೀಡಿ ಅವರನ್ನು ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ‘ ಎಂದು ತಿಳಿಸಿದರು.

ವಿನಯ್ ಅವರಿಗೆ ಪಕ್ಷದಲ್ಲಿ ಉನ್ನತ ಜವಾಬ್ದಾರಿ ನೀಡಲಾಗುವುದೇ ಎಂಬ ಪ್ರಶ್ನೆಗೆ, ‘ ಅವರಿಗೆ ಈಗಾಗಲೇ ಪಕ್ಷದ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ’ ಎಂದರು.
ಇಂಧನ ಇಲಾಖೆ ಯೋಜನೆಗಳ ತನಿಖೆ ಬಗ್ಗೆ ಸಿಎಂ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿಗಳು ನಾನು ಇಂಧನ ಸಚಿವನಾಗಿದ್ದ ಕಾಲದ ಯೋಜನೆಗಳನ್ನು ತನಿಖೆ ಮಾಡಿಸಬೇಕು ಎಂದು ಹೇಳಿದ್ದಾರೆ. ಅವರು ತನಿಖೆ ಮಾಡಿಸಲಿ. ನಾನು ಸ್ವಾಗತಿಸುತ್ತೇನೆ. ನಾನು ಕೂಡ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ.

ಸರ್ಕಾರಿ ಕಾರ್ಯಕ್ರಮಕ್ಕೆ ಶಿಕ್ಷಕರ ಹಾಜರಿ ಕಡ್ಡಾಯದ ಬಗ್ಗೆ ಕೇಳಿದಾಗ, ‘ ಸರ್ಕಾರ ಪ್ರತಿಯೊಬ್ಬರನ್ನೂ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಶಿಕ್ಷಕರು ಯಾಕೆ ಬರಬೇಕು? ಕಾರ್ಯಕರ್ತರು ಹಾಗೂ ಜನರನ್ನು ಕರೆದುಕೊಂಡು ಬಂದು ಕಾರ್ಯಕ್ರಮ ಮಾಡಲಿ. ಶಿಕ್ಷಕರನ್ನು ಇವರ ರಾಜಕಾರಣಕ್ಕೆ ಬಳಸಿಕೊಳ್ಳಲು ಈ ರೀತಿ ಆದೇಶ ಹೊರಡಿಸಿದ್ದಾರೆ. ಶಿಕ್ಷಕರ ದಿನದಂದು ಅವರಿಗೆ ಅಭಿನಂದನೆ ಸಲ್ಲಿಸಲಿ ‘ ಎಂದರು.
ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಾರಾ ಎಂಬ ಪ್ರಶ್ನೆಗೆ, ‘ ಈ ಬಗ್ಗೆ ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ. ಬೇರೆ ಕೆಲವು ನಾಯಕರು ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಸೇರಲು ಅರ್ಜಿ ಹಾಕಿದ್ದಾರೆ. ಕೆಲವರು ಸದಸ್ಯತ್ವ ತೆಗೆದುಕೊಂಡಿದ್ದು, ಅವರು ಪಕ್ಷ ಸೇರುವಾಗ ಜಿಲ್ಲಾವಾರು ಪಟ್ಟಿ ನೀಡುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇಟ್ಟವರು ಪಕ್ಷ ಸೇರಲು ಅರ್ಜಿ ಹಾಕಬಹುದು ‘ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಾದವರಿದ್ದರು.
https://pragati.taskdun.com/politics/opposition-leader-siddaramayya-talks-about-his-constituency/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ