*ರಾಜೀ ಸಂಧಾನಕ್ಕೆ ಕರೆದು ಯುವಕರಿಂದ ಹಿರಿಯರ ಮೇಲೆ ಹಲ್ಲೆ..?*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಗಳ ಬಗೆಹರಿಸಲು ಹೋದ ಹಿರಿಯರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿ ಶ್ರೀರಾಮ್ ದಾಬಾ ಬಳಿ ನಡೆದಿದೆ.
ಬೆಳಗಾವಿ ತಾಲೂಕಿನ ಕಟ್ಟಣಭಾವಿಗೆ ಮೊನ್ನೆಯಷ್ಟೆ ನಾಟಕ ನೋಡಲು ನಿಂಗೇನಟ್ಟಿಯ ಯುವಕರು ಹೋಗಿದ್ದರು ಅಲ್ಲಿಗೆ ಉಕ್ಕುಡ ಹಾಗೂ ಬೆನಕನಹೊಳಿ ಗ್ರಾಮದ ಯುವಕರೂ ಸಹ ನಾಟಕ ನೋಡಲು ಬಂದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡೂ ಗುಂಪುಗಳ ಮಧ್ಯೆ ಜಗಳವಾಗಿದೆ. ಅದೇ ಜಗಳದ ವಿಚಾರವಾಗಿ ಇಂದು ಬೆಳಗಾವಿಯ ಸುತಗಟ್ಟಿಯಲ್ಲಿ ಎರಡೂ ಗ್ರಾಮದ ಹಿರಿಯರು ಸೇರಿ ಜಗಳ ಬಗೆಹರಿಸಲು ಸೇರಿದ್ದಾರೆ. ಈ ವೇಳೆ ಕೆಲ ಯುವಕರು ದೊಣ್ಣೆ ಹಾಗೂ ರಾಡ್ ಗಳನ್ನು ತೆಗೆದುಕೊಂಡು ಬಂದು ಏಕಾಎಕಿ ಹಿರಿಯರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಗಳ ಆಡಬೇಡಿ ಎಲ್ಲರೂ ಒಂದಾಗಿರಿ ಎಂದು ಹೇಳಲು ಹೋದ ಹಿರಿಯರ ಮೇಲೆ ಹಲ್ಲೆ ಮಾಡಿ ಯುವಕರ ಗ್ಯಾಂಗ್ ಪರಾರಿಯಾಗಿದ್ದು ಗ್ಯಾಂಗ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಯುವಕರು ಇದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಯುವಕರಿಂದ ಹಲ್ಲೆಗೊಳಗಾದ ಸಿದ್ದರಾಯಿ ನಾಯಿಕ ಹಾಗೂ ಆಕಾಶ ತಳವಾರ ಎಂಬ ಇಬ್ಬರನ್ನೂ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.