
ಪ್ರಗತಿವಾಹಿನಿ ಸುದ್ದಿ: ರಸ್ತೆ ಗುಂಡಿಯಿಂದಾಗಿ ಎರಡು ವರ್ಷದ ಬಾಲಕ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಸ್ತೆಗುಂಡಿ, ಅವೈಜ್ಞಾನಿಕ ಕಾಮಗಾರಿಗಳು ಬೆಂಗಳೂರಿಗರ ಜೀವಕ್ಕೆ ಕುತ್ತಾಗುತ್ತಿವೆ. ಎಲ್ಲೆಂದರಲ್ಲಿ ರಸ್ತೆ ಗುಂಡಿ, ಸಾಲದ್ದಕ್ಕೆ ಕಾಮಗಾರಿ ಹೆಸರಲ್ಲಿ ಇರುವ ರಸ್ತೆಗಳನ್ನು ಅಗೆದು ಅಧ್ವಾನ ಮಾಡಿರುವ ರೀತಿ ಜನರನ್ನು ಆಪೋಷನ ತೆಗೆದುಕೊಳ್ಳಲು ಹಾತೊರೆದು ನಿಂತಂತಿವೆ.
ಇದೀಗ ರಸ್ತೆ ಗುಂಡಿಯಿಂದಾಗಿ ಎರಡು ವರ್ಷದ ಮಗು ಬಲಿಯಾಗಿದ್ದು, ಬೆಂಗಳೂರಿನ ಹೊರಮಾವಿನ ಹಳೆಹಳ್ಳಿಯಲ್ಲಿ ನಡೆದಿದೆ. ತ್ರಿಶೂಲ್ (2) ಮೃತ ಬಾಲಕ. ದ್ವಿಚಕ್ರವಾಹನದಲ್ಲಿ ತೆರಳುತ್ತಿದ ವೇಳೆ ರಸ್ತೆಗುಂಡಿಯಿಂದಾಗಿ ಬೈಕ್ ಸಮೇತ ಕೆಳಗೆ ಬಿದ್ದ ವೇಳೆ ಮಗು ಸಾವನ್ನಪ್ಪಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಗು ಸಾವಿನ ಬೆನ್ನಲ್ಲೇ ಮಹದೇವಪುರ ಹಾಗೂ ಹಳೇಹಳ್ಳಿ ಸ್ಥಳೀಯ ನಿವಾಸಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.



