*ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ ಭಾಗಿ*

ಪ್ರಗತಿವಾಹಿನಿ ಸುದ್ದಿ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಅವರು 80ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಖಲೀದಾ ಜಿಯಾ ಅವರ ವೈದ್ಯರು ನೀಡಿರುವ ಮಾಹಿತಿ ಪ್ರಕಾರ, ಖಲೀದಾ ಜಿಯಾ ಅವರು ಯಕೃತ್ತಿನ ಸಿರೋಸಿಸ್, ಸಂಧಿವಾತ, ಮಧುಮೇಹ, ಎದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಬಾಂಗ್ಲಾದೇಶದ ರಾಜಕೀಯದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಅವರು, ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ದೀರ್ಘಕಾಲದ ರಾಜಕೀಯ ಪೈಪೋಟಿಗೆ ಹೆಸರುವಾಸಿಯಾಗಿದ್ದರು.
ಖಲೀದಾ ಜಿಯಾ ಅಂತ್ಯಕ್ರಿಯೆ ಡಿಸೆಂಬರ್ 31ರಂದು ಬಾಂಗ್ಲಾದೇಶದ ಢಾಕಾದಲ್ಲಿ ನಡೆಯಲಿದೆ. ಹೀಗಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾರತದ ಪರವಾಗಿ ಭಾಗಿಯಾಗಲಿದ್ದಾರೆ.
ಬೇಗಂ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಚಿವ ಎಸ್. ಜೈಶಂಕರ್ ಡಿ 31 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ. ಖಲೀದಾ ಜಿಯಾ ರಾಷ್ಟ್ರೀಯತಾವಾದಿ ಪಕ್ಷದ ನಾಯಕಿಯಾಗಿದ್ದರು ಮತ್ತು ಮೂರು ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಹೀಗಾಗಿ ಖಲೀದಾ ಜಿಯಾ ಅವರ ನಿಧನದ ಹಿನ್ನಲೆಯಲ್ಲಿ ಬಾಂಗ್ಲಾದೇಶದಲ್ಲಿ 3 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
ಇನ್ನು ಖಲೀದಾ ಜಿಯಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರ ಸಂತಾಪ ಸೂಚಿಸಿದ್ದು, ಭಾರತ-ಬಾಂಗ್ಲಾ ಸಂಬಂಧಗಳಿಗೆ ಖಲೀದಾ ನೀಡಿದ ಕೊಡುಗೆಗಳು ಸ್ಮರಣೀಯ, ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.




