Kannada NewsKarnataka NewsLatestPolitics

*ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಿ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಅವರು ಹಿರೆಕೆರೂರು ಕ್ಷೇತ್ರದ ಚಿಕ್ಕೆರೂರು ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಕಾಂಗ್ರೆಸ್ ನವರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಯಾಕೆ ಹೇಳುತ್ತಿಲ್ಲ. ರಾಹುಲ್ ಗಾಂಧಿ ಹೆಸರು ಹೇಳಿದರೆ ಕಾಂಗ್ರೆಸ್ ರೇಟಿಂಗ್ ಕುಸಿದು ಬೀಳುತ್ತದೆ ಅದಕ್ಕೆ ಅವರ ಹೆಸರು ಹೇಳುತ್ತಿಲ್ಲ ಎಂದು ಹೇಳಿದರು.


ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಬೆಕೆಂದು ಇಂಡಿ ಮೈತ್ರಿಕೂಟದ ಸಿಎಂಗಳು ಹೇಳಿದರು. ಆದರೆ, ನಮ್ಮ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಖರ್ಗೆ ಅಲ್ಲ ರಾಹುಲ್ ಗಾಂಧಿ ಮನಸು ಮಾಡಬೇಕು ಎಂದು ಹೇಳಿದರು.


ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಕಾಂಗ್ರೆಸ್ ನಲ್ಲಿ ವಿರೋಧ ಇದೆ ಎಂದು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಹತ್ತು ತಿಂಗಳಾಗಿದೆ ಇಡೀ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಗಂಗಾ ಕಲ್ಯಾಣ ಯೋಜನೆ ಅನುಷ್ಠಾನ ಆಗುತ್ತಿಲ್ಲ. ಯಶಸ್ವಿನಿ ನಿಂತುಹೋಗಿದೆ. ವಿದ್ಯಾನಿಧಿ ನಿಂತಿದೆ. ಗೃಹ ಲಕ್ಷ್ಮೀ ಯೋಜನೆ ಕೇವಲ ಮೂವತ್ತರಷ್ಟು ಮಹಿಳೆಯರಿಗೆ ಮಾತ್ರ ಸಿಕ್ಕಿದೆ. ಯಾರು ಅರ್ಜಿ ಹಾಕಿ ಯಶಸ್ವಿನಿ ಯೋಜನೆ ಬಾರದಿರುವ ಮಹಿಳೆಯರು ಈ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮತ ಹಾಕಿ ಅವರಿಗೆ ಪಾಠ ಕಲಿಸಬೇಕು. ಎರಡು ಸಾವಿರ ರೂಪಾಯಿಗಳೂ‌ ಕೂಡ ಪ್ರತಿ ತಿಂಗಳು ಬರುತ್ತಿಲ್ಲ. ಯಾರಿಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಬರುತ್ತಿಲ್ಲವೋ ಅವರೂ ಕಾಂಗ್ರೆಸ್ ವಿರುದ್ದ ಮತ ಹಾಕಿ ಅವರಿಗೆ ಪಾಠ ಕಲಿಸಬೇಕು. ಹತ್ತು ತಿಂಗಳಲ್ಲಿ ಜನರಿಗೆ ಭ್ರಮನಿರಸನ ಆಗಿದೆ ಎಂದು ಹೇಳಿದರು.


ಬಿ ಸಿ ಪಾಟೀಲರು ಸ್ವಾಭಿಮಾನದ ಸಂಕೇತ. ಅವರು ಏನು ಕೆಲಸ ಮಾಡಿದ್ದೇನೆ ಎಂದು ಜನರೇ ಹೇಳಲಿ ಎಂದು ಬಯಸುತ್ತಾರೆ. ಕೆಲವರು ಬೇರೆಯವರು ಮಾಡಿರುವ ಕೆಲಸವನ್ನು ತಮ್ಮದೆಂದು ಹೇಳಿಕೊಳ್ಳುತ್ತಾರೆ. ಬಿ.ಸಿ ಪಾಟೀಲರಿಗೆ ವಿಧಾನಸೌಧದಲ್ಲಿ ಸ್ಥಾನ ಇರದಿರಬಹುದು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.


ಕಾಂಗ್ರೆಸ್ ನವರು ಅಲ್ಪ ಸಂಖ್ಯಾತರಿಗೂ ಅನ್ಯಾಯ ಮಾಡಿದ್ದಾರೆ. ಯಾವ ಅಲ್ಪ ಸಂಖ್ಯಾತರಿಗೆ ಯೋಜನೆ ರೂಪಿಸಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು. ಅಲ್ಪ ಸಂಖ್ಯಾತರನ್ನು ಬಾವಿಯಲ್ಲಿ ಇಟ್ಟು ಆಡಳಿತ ಮಾಡುತ್ತಾರೆ. ಈ ದೇಶದಲ್ಲಿ ಎಲ್ಲ ಸಮುದಾಯದವರೂ ಮುಖ್ಯವಾಹಿನಿಗೆ ಬಂದು ಸಮನವಾಗಿ ಬದುಕಬೇಕು. ಬೆಂಗಳೂರಿನಲ್ಲಿ ಹಜ್ ಭವನವನ್ನು ಕಾಂಗ್ರೆಸ್ ನವರು ಕಟ್ಟಲಿಲ್ಲ. ಯಡಿಯೂರಪ್ಪ ಕಟ್ಟಿಸಿಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ಅಲ್ಪ ಸಂಖ್ಯಾತರನ್ನೂ ವಂಚಿಸಿದ್ದಾರೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button