
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕೃಷಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಭಾನುವಾರ ಸಂಜೆ ತಾಲ್ಲೂಕಿನ ಕಣಕುಂಬಿ ಅರಣ್ಯ ವಲಯದ ಹುಳಂದ ಗ್ರಾಮದ ಹೊರವಲಯದಲ್ಲಿ ವರದಿಯಾಗಿದೆ.
ಹುಳಂದ ಗ್ರಾಮದ ರೈತ ವಾಸುದೇವ ನಾರಾಯಣ ಗಾವಡೆ ಕರಡಿ ದಾಳಿಯಿಂದ ಗಾಯಗೊಂಡ ರೈತ.
ಅರಣ್ಯದ ಹಾದಿಯ ಮೂಲಕ ತಮ್ಮ ಮನೆಯತ್ತ ಒಂಟಿಯಾಗಿ ಹೊರಟಿದ್ದ ವಾಸುದೇವ ಅವರ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ ಕರಡಿ ತನ್ನ ಹರಿತವಾದ ಉಗುರುಗಳಿಂದ ಅವರ ಹೊಟ್ಟೆ ಹಾಗೂ ಮುಖಕ್ಕೆ ಪರಚಿ ಗಾಯಗೊಳಿಸಿದೆ. ಕರಡಿ ಉಗುರುಗಳು ಅವರ ಕಣ್ಣುಗಳಿಗೆ ತಗುಲಿದ್ದರಿಂದ ಕಣ್ಣುಗುಡ್ಡೆಗಳಿಗೆ ಹಾನಿ ಉಂಟಾಗಿದೆ. ಮೈಮೇಲೆ ಉಗುರುಗಳು ತಾಗಿ ವಿಪರೀತ ರಕ್ತಸ್ರಾವವಾಗಿದೆ. ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ನಿತ್ರಾಣರಾಗಿದ್ದ ಅವರನ್ನು ಸ್ಥಳೀಯರ ನೆರವಿನೊಂದಿಗೆ ಅಂಬ್ಯುಲನ್ಸ್ ಮೂಲಕ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುರೇಶ ಜಾಧವ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಜಿಲ್ಲಾಸ್ಪತ್ರೆಗೆ ಧಾವಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವಾಸುದೇವ ಅವರ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ