Kannada NewsKarnataka NewsLatest

ಬೆಳಗಾವಿಗೆ ಹೆಚ್ಚಿನ ಸಚಿವ ಸ್ಥಾನದ ನಿರೀಕ್ಷೆ -ಬಿ.ವೈ.ರಾಘವೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಲ್ಲಿರುವ ಪ್ರಮುಖ ನಾಲ್ಕೈದು ಸರಕಾರಿ ಕಚೇರಿಗಳ ಸ್ಥಳಾಂತರವನ್ನು ಸಿಎಂ ಯಡಿಯೂರಪ್ಪನವರು ಶೀಘ್ರದಲ್ಲೇ ಸ್ಥಳಾಂತರ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದು  ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.
ಶನಿವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಶ್ರೀಮಠದ ಗೌರವ ಸ್ವೀಕರಿಸಿ ಮಾತನಾಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಉತ್ತರ ಕರ್ನಾಟಕದ ಮಠಾಧೀಶರದಾದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಡಾ.ಸಿದ್ದರಾಮ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಬೆಳಗಾವಿ ಸುವರ್ಣ ಸೌಧದ ಎದುರು ಶಾಂಕೇತಿಕವಾಗಿ ಧರಣಿ ನಡೆಸಿ ವಿವಿಧ ಸರಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಬೇಕೆಂದು ಬೇಡಿಕೆ ಇಟ್ಟಿದ್ದರು.
 ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪನವರಿಗೂ ಮನವಿ ಸಲ್ಲಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಯಡಿಯೂರಪ್ಪನವರು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸರಕಾರಿ ಕಚೇರಿ ಸ್ಥಳಾಂತರ ಮಾಡುವ ಚಿಂತನೆ ನಡೆಸಿದ್ದರು. ಶೀಘ್ರದಲ್ಲೇ ನಾಲ್ಕೈದು ಕಚೇರಿ ಸ್ಥಳಾಂತರ ಮಾಡಲಿದ್ದಾರೆ ಎನ್ನುವ ವಿಶ್ವಾಸ ಇದೆ ಎಂದರು.
ಉತ್ತರ ಕರ್ನಾಟಕದ ಜನರ ಆಶೋತ್ತರ, ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಯಾವ ಸರಕಾರವು ಮಾಡಿರದನ್ನು ಸುಮಾರು 490 ಕೋಟಿ ರು. ವೆಚ್ಚದಲ್ಲಿ ಸುವರ್ಣವಿಧಾನ ಸೌಧವನ್ನು ನಿರ್ಮಾಣ ಮಾಡಿದರು. ಅದರಂತೆ ಈ ಭಾಗದ ಅಭಿವೃದ್ದಿಗೆ ಸಿಎಂ ಬದ್ದರಾಗಿದ್ದಾರೆ ಎಂದರು.
ಬೆಂಗಳೂರು ಮಹಾನಗರ ಬಿಟ್ಟರೆ ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಅತಿ ದೊಡ್ಡ ಜಿಲ್ಲೆ. ಬೆಳಗಾವಿ ಜಿಲ್ಲೆಯಿಂದ ದೊಡ್ಡ ಮಟ್ಟದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಈ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ಸಿಗಬೇಕೆಂಬ ನಿರೀಕ್ಷೆ ಎಲ್ಲರಲ್ಲಿಯೂ ಇದೆ. ಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ನಾಯಕರು, ಸಿಎಂ ಎಲ್ಲರೂ ಚರ್ಚೆ ಮಾಡಿ ಹೆಚ್ಚಿನ ಪ್ರಾಶಸ್ತ್ಯ ಬೆಳಗಾವಿ ಜಿಲ್ಲೆಗೆ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ರಾಜ್ಯದಲ್ಲಿ ವಿರೋಧ ಪಕ್ಷ ಇಲ್ಲವೆ ಇಲ್ಲ. ಕಾಂಗ್ರೆಸ್ ಕೆಪಿಸಿಸಿ, ವಿರೋಧ ಪಕ್ಷದ ನಾಯಕನ ಆಯ್ಕೆಯ ವಿಚಾರದಲ್ಲಿ ಸಾಕಷ್ಟು ಗೊಂದಲ ಇದೆ. ತಮ್ಮ ಮನೆಯನ್ನು ಸರಿ ಪಡಿಸಿಕೊಳ್ಳದವರು ಸಿಎಂ ಯಡಿಯೂರಪ್ಪನವರ ಸರಕಾರಕ್ಕೆ ಕಂಟಕ ಇದೆ ಎಂದು ಹೇಳಿಕೆ ನೀಡುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರ ಸರಕಾರಕ್ಕೆ ಯಾವುದೇ ಕಂಟಕ ಇಲ್ಲ. ರಾಜ್ಯ ಸರಕಾರ ಸುಭದ್ರವಾಗಿದೆ. ಬರುವ ಮೂರು ವರ್ಷದಲ್ಲಿ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ನೀಡವ ನಿಟ್ಟಿನಲ್ಲಿ ಕೆಲಸ ಮಾಡಿ ಯಶಸ್ವಿಯಾಗಲಿದೆ ಎಂದರು.
ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಿ.ವೈ.ವಿಜಯೇಂದ್ರ ಹುಕ್ಕೇರಿ ಹಿರೇಮಠಕ್ಕೆ ಮೊದಲ ಬಾರಿ ಆಗಮಿಸಿದ್ದರೂ ಈ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ.  ರಾಜಕೀಯ ಜೀವನದಲ್ಲಿ ಅವರು ಇನ್ನಷ್ಟು ಹೆಚ್ಚಿನ ಹುದ್ದೆ ಅಲಂಕರಿಸಲಿ ಎಂದು ಆಶೀರ್ವಾದ ಮಾಡಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ, ಶಾಸಕ ಅನಿಲ್ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಬಿಜೆಪಿ ಮುಖಂಡರಾದ ಕಿರಣ ಜಾಧವ, ರಾಜಕುಮಾರ ಟೋಪಣ್ಣವರ, ಎಂ.ಬಿ.ಜಿರಲಿ, ಆನಂದ ದೇಸಾಯಿ, ಕಿರಣ ಜಾಧವ, ದೀಪಾ ಕುಡಚಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button