Belagavi NewsBelgaum NewsEducation

*ಆರ್ ಸಿ ಯು ಶುಲ್ಕ ಎರಡುವರೆ ಪಟ್ಟು ಹೆಚ್ಚಳ: ಎಐಡಿಎಸ್ಓ ಖಂಡನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ಸ್ನಾತಕ ಕೋರ್ಸ್ ಗಳಿಗೆ 2025-26ನೇ ಸಾಲಿನಲ್ಲಿ ಎರಡುವರೆ ಪಟ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಬಿಎ ಬಿಕಾಂ ಮತ್ತು ಬಿ ಎಸ್ ಸಿ ಮುಂತಾದ (ವೃತ್ತಿಪರವಲ್ಲದ) ಕೋರ್ಸ್ ಗಳಿಗೆ ಕಳೆದ ವರ್ಷ 1,500 ರೂ ಶುಲ್ಕವಿತ್ತು. ಆದರೆ ಈ ವರ್ಷ ಹಠಾತ್ತಾಗಿ 4,300 ರೂ ಗೆ ಏರಿಸಲಾಗಿದೆ. ಇನ್ನು ಬಿಬಿಎ, ಬಿಸಿಎ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ 3,660 ರೂ ಇದ್ದ ಶುಲ್ಕವನ್ನು 4,800ರೂ ಗೆ ಏರಿಸಲಾಗಿದೆ. ವಿಶ್ವವಿದ್ಯಾಲಯದ ಈ ನಡೆಯನ್ನು ಎಐಡಿಎಸ್‌ಓ ತೀವ್ರವಾಗಿ ಖಂಡಿಸಿದೆ.

ಬೆಳಗಾವಿ ವಿಜಯಪುರ ಜಿಲ್ಲೆಗಳನ್ನೊಳಗೊಂಡಂತೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಆರ್ ಸಿ ಯು ನ ಸ್ನಾತಕ ಕೋರ್ಸ್ ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಕೃಷಿ ಹಾಗೂ ಕೈಗಾರಿಕೆ ಸೇರಿದಂತೆ ದಿನದ ದುಡಿಮೆಯನ್ನಾಧರಿಸಿ ಬದುಕುವ ಕುಟುಂಬಗಳೇ ಈ ಭಾಗದಲ್ಲಿ ಅಧಿಕವಾಗಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಈಗಾಗಲೇ ರೈತ-ಕಾರ್ಮಿಕರ ಜೀವನ ದುಸ್ತರವಾಗಿದೆ. ಹೀಗಿರುವಾಗ, ಈ ಅನಗತ್ಯ ಶುಲ್ಕ ಹೆಚ್ಚಳವು ಬಡವರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿ ಅವರನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತದೆ.

ವಿಶ್ವವಿದ್ಯಾಲಯದ ಈ ತೀರ್ಮಾನವು ವಿದ್ಯಾರ್ಥಿ ಹಾಗೂ ಬಡಜನ ವಿರೋಧಿಯಾಗಿದೆ. ಕೂಡಲೇ ವಿವಿಯು ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕೆಂದು ಆರ್ ಸಿ ಯು ಆಡಳಿತ ಮಂಡಳಿಯನ್ನು ಎಐಡಿಎಸ್ಓ ಆಗ್ರಹಿಸಿದೆ. ಇಲ್ಲವಾದಲ್ಲಿ ವಿದ್ಯಾರ್ಥಿಗಳು ಬೀದಿಗಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

Home add -Advt

Related Articles

Back to top button