*ಬೆಳಗಾವಿ: ಸ್ನೇಹಿತನನ್ನೇ ಕೊಚ್ಚಿ ಕೊಲೆಗೈದ ಯುವಕ*

ಪ್ರಗತಿವಾಹಿನಿ ಸುದ್ದಿ: ಸ್ನೇಹಿತರ ನಡುವೆ ಸಾಲದ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ಗೌಡರ (30) ಕೊಲೆಯಾದ ಯುವಕ. ದಯಾನಂದ ಗುಂಡ್ಲೂರ ಎಂಬಾತ ತನ್ನ ಸ್ನೇಹಿತ ಮಂಜುನಾಥ್ ನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದಿದ್ದಾನೆ.
ಕೃತ್ಯದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ದಯಾನಂದ್ ನಿಂದ 2000 ರೂಪಾಯಿ ಹಣ ಪಡೆದಿದ್ದ ಮಂಜುನಾಥ್ ಒಂದು ವಾರದಲ್ಲಿ ವಾಪಸ್ ಕೊಡುವುದಾಗಿ ಹೇಳಿದ್ದ. ವಾರದ ಬಳಿಕ ಹಣ ವಾಪಸ್ ಕೊಡುವಂತೆ ಕೇಳಲು ದಯಾನಂದ ಮಮ್ಜುನಾಥ್ ಮನೆಗೆ ತೆರಳಿದ್ದಾನೆ. ಆದರೆ ಹಣ ವಾಪಸ್ ಕೊಟ್ಟಿಲ್ಲ. ಇದರಿಂದ ದಯಾನಂದ್ ಹಾಗೂ ಮಂಜುನಾಥ್ ನಡುವೆ ಗಲಾಟೆಯಾಗಿದೆ. ಇಬ್ಬರು ಸ್ನೇಹಿತರ ನಡುವೆ ಜಗಳ ವಿಕೋಪಕ್ಕೆ ತಿರುಗ್ದ್ದು, ದಯಾನಂದ ಮಂಜುನಾಥ್ ನನ್ನು ಕೊಡಲಿಯ್ಂದ ಹೊಡೆದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಮಂಜುನಾಥ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಮಂಜುನಾಥ್ ಸಾವನ್ನಪ್ಪಿದ ಸುದ್ದಿಕೇಳಿ ಆರೋಪಿ ದಯಾನಂದ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಬೈಲಹೊಂಗಲ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.



