Kannada NewsLatest

ಪಠ್ಯಪುಸ್ತಕದಲ್ಲಿ ದೋಷ- ಸಮಗ್ರ ವರದಿಗೆ ಜಿಪಂ ಸೂಚನೆ; ಸಭೆಗೆ ಅಧ್ಯಕ್ಷೆ ಗೈರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಮರಾಠಿ ಮಾಧ್ಯಮ ಮೂರನೇ ತರಗತಿಯ ಪಠ್ಯಪುಸ್ತಕದಲ್ಲಿ ಲೋಪದೋಷಗಳಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ (ಜೂ.೧೮) ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಮೂರನೇ ತರಗತಿಯ ಮರಾಠಿ ಮಾಧ್ಯಮದ ಪಠ್ಯಪುಸ್ತಕದಲ್ಲಿ ಲೋಪದೋಷಗಳನ್ನು ಪ್ರಸ್ತಾಪಿಸಿದ ಜಿಪಂ ಸದಸ್ಯೆ ಸರಸ್ವತಿ ಪಾಟೀಲ ಅವರು, ತಕ್ಷಣವೇ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಓ ಡಾ.ರಾಜೇಂದ್ರ ಅವರು, ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಎರಡು ದಿನಗಳಲ್ಲಿ ವರದಿ ನೀಡಲು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
ಇಂತಹ ಗಂಭೀರ ವಿಷಯವನ್ನು ತಮ್ಮ ಗಮನಕ್ಕೆ ತರದಿರುವ ಬಗ್ಗೆ ಅಧಿಕಾರಿಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಹನೀಯರನ್ನು ಅವಹೇಳನ ಮಾಡುವಂತಹ ಅಂಶಗಳು ಪುಸ್ತಕದಲ್ಲಿರುವುದರಿಂದ ಸಂಬಂಧಪಟ್ಟ ಸಮಿತಿಯ ಸದಸ್ಯರ ಮೇಲೆ ಕ್ರಮಕ್ಕೆ ಸದಸ್ಯರು ಆಗ್ರಹಿಸಿದರು.

ಜಿಪಂ ಅಧ್ಯಕ್ಷರ ಗೈರು-ಚರ್ಚೆ:
ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಗೆ ಅಧ್ಯಕ್ಷೆ ಆಶಾ ಐಹೊಳೆ ಗೈರು ಬಗ್ಗೆ ಮಾಹಿತಿ ನೀಡುವಂತೆ ಕೇಳಿದ ಜಿತೇಂದ್ರ ಮಾದರ ಅವರು, ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಭೆ ನಡೆಸಲು ಅವಕಾಶವಿದೆಯೇ ಎಂದು ಪ್ರಶ್ನಿಸಿದರು.
ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ನಿಯಮಾವಳಿಯಲ್ಲಿ ಅವಕಾಶವಿದೆ. ಆರೋಗ್ಯದ ದೃಷ್ಟಿಯಿಂದ ಸಭೆಗೆ ಹಾಜರಾಗುತ್ತಿಲ್ಲ ಎಂದು ಅಧ್ಯಕ್ಷರು ತಿಳಿಸಿರುವುದರಿಂದ ಅವರ ಅನುಮತಿ ಮೇರೆಗೆ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಭೆಗೆ ತಿಳಿಸಿದರು.
ಮುಂದಿನ ಸಾಮಾನ್ಯ ಸಭೆಗಳನ್ನು ಯಾವ ದಿನಾಂಕಗಳಂದು ನಡೆಸಬೇಕು ಎಂಬುದನ್ನು ಈಗಾಗಲೇ ನಿರ್ಧರಿಸಿ, ವಾರ್ಷಿಕ ಕ್ಯಾಲೆಂಡರ್ ರೂಪಿಸಲಾಗಿದೆ. ಆ ಕ್ಯಾಲೆಂಡರ್ ಪ್ರಕಾರವೇ ಸಭೆಗಳನ್ನು ನಡೆಸಲಾಗುವುದು ಎಂದು ಸಿಇಓ ತಿಳಿಸಿದರು.

ಆರ್.ಓ.ಘಟಕ ದುರಸ್ತಿ-ಚರ್ಚೆ:
ಜಿಲ್ಲೆಯ ಬಹುತೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸದಸ್ಯರು ಪ್ರಸ್ತಾಪಿಸಿದರು.
ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಿತು. ಚಿಕ್ಕೋಡಿ ವ್ಯಾಪ್ತಿಯಲ್ಲಿ ಒಟ್ಟಾರೆ ೬೬೯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ೧೧೫ ಘಟಕಗಳು ದುರಸ್ತಿಯಲ್ಲಿವೆ ಎಂದು ಅಧಿಕಾರಿ ವಿವರಿಸಿದರು.
ಘಟಕಗಳ ಏಜೆನ್ಸಿ ಪಟ್ಟಿ ಪ್ರದರ್ಶಿಸಲಾಗುವುದು. ಎಲ್ಲ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದಲೇ ನಿರ್ವಹಿಸಲಾಗುವುದು ಎಂದು ಡಾ.ರಾಜೇಂದ್ರ ಸ್ಪಷ್ಟನೆ ನೀಡಿದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಅನುಕೂಲವಾಗುವಂತೆ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಟ್ಯಾಂಕರ್ ಖರೀದಿಗೆ ಪ್ರಸ್ತಾವ ಬಂದರೆ ಟ್ಯಾಂಕರ್ ಖರೀದಿಗೆ ಅನುಮೋದನೆ ನೀಡಲಾಗುವುದು ಎಂದರು.
ಗಡಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡದಿರುವುದರಿಂದ ವೃತ್ತಿಶಿಕ್ಷಣ ಕೋರ್ಸಗಳಿಗೆ ಪಕ್ಕದ ರಾಜ್ಯದ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯೆ ಸುಮಿತ್ರಾ ಉಗಳೆ ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಧರಣಿ ಕುಳಿತರು.

ಇದಕ್ಕೆ ಸ್ಪಂದಿಸಿದ ಸಿಇಓ ರಾಜೇಂದ್ರ ಅವರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು. ಕಳೆದ ವರ್ಷ ನೇಮಕ ಮಾಡಲಾಗಿದ್ದ ೧೩೦ ಅತಿಥಿ ಶಿಕ್ಷಕರ ಪೈಕಿ ಕೇವಲ ೩೦ ವೇತನ ಪಾವತಿಸಲಾಗಿದ್ದು, ಉಳಿದ ಶಿಕ್ಷಕರಿಗೆ ಇದುವರೆಗೆ ವೇತನ ಪಾವತಿಯಾಗಿಲ್ಲ ಎಂದು ಸದಸ್ಯರು ಪ್ರಸ್ತಾಪಿಸಿದರು.
ಅನುದಾನ ಬಳಕೆ ಮಾಡದೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಗ್ಗೆ ವರದಿ ನೀಡಬೇಕು. ಅದನ್ನು ಆಧರಿಸಿ ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಸಿಇಓ ತಿಳಿಸಿದರು.
ಒಂದು ವೇಳೆ ಅತಿಥಿ ಶಿಕ್ಷಕರ ವೇತನ ಹಾಗೂ ಅನುದಾನ ಬಳಕೆ ಮಾಡದಿರುವ ಅಧಿಕಾರಿಗಳ ಬಗ್ಗೆ ವರದಿ ನೀಡದಿದ್ದರೆ ಡಿಡಿಪಿಐ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಿಇಓ ಡಾ.ರಾಜೇಂದ್ರ ಎಚ್ಚರಿಕೆ ನೀಡಿದರು.

ಕಳಪೆ ಫಲಿತಾಂಶ- ನೋಟಿಸ್ ನೀಡಲು ಸೂಚನೆ:
ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೬೦ ಕ್ಕಿಂತ ಕಡಿಮೆ ಫಲಿತಾಂಶ ಗಳಿಸಿರುವ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಡಾ.ರಾಜೇಂದ್ರ ಸೂಚನೆ ನೀಡಿದರು.
ಅದೇ ರೀತಿ ವಿಷಯ ಶಿಕ್ಷಕರಿಗೂ ನೋಟಿಸ್ ನೀಡಬೇಕು. ಸೂಕ್ತ ವಿವರಣೆ ನೀಡದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐಗೆ ತಿಳಿಸಿದರು.

ಸಹಕಾರ ಇಲಾಖೆ ಪಿ.ಕೆ.ಪಿ.ಎಸ್ ಸೊಸೈಟಿ ಬಗ್ಗೆ ಚರ್ಚೆ
ಯಾವುದೇ ಹಳ್ಳಿಗಳಲ್ಲಿ ಪಿ.ಕೆ.ಪಿ.ಎಸ್ ಸೊಸೈಟಿಗಳು ಪ್ರಾರಂಭವಿರುವುದಿಲ್ಲ ಇದರಿಂದ ರೈತರಿಗೆ ಸಾಲ ಕೂಡ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸದಸ್ಯರು ಪ್ರಸ್ತಾಪಿಸಿದರು.
ಸದಸ್ಯರು ತಿಳಿಸಿರುವ ಹಾಗೆ ಸೊಸೈಟಿಗಳು ಸ್ಥಗಿತಗೊಂಡಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಆದಷ್ಟು ಬೇಗನೆ ಸೊಸೈಟಿಗಳನ್ಬು ಪ್ರಾರಂಭಿಸಬೇಕೆಂದು ಸಿಇಒ ಅವರು ಇಲಾಖಾಧಿಕಾರಿಗಳಿಗೆ ತಿಳಿಸಿದರು.
ಹುಕ್ಕೇರಿ ತಾಲೂಕಿನ ನರಸಿಂಗಪೂರನಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳಲ್ಲಿ ೫೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕೇವಲ ೧೨ ಶಿಕ್ಷಕರು ಮಾತ್ರ ಬೋಧನೆ ಮಾಡುತ್ತಿದ್ದಾರೆ ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ ಹಾಗಾಗಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಬೇಕು ಎಂದು ಸದಸ್ಯರು ಪ್ರಸ್ತಾಪಿಸಿದರು.
ಈಗಾಗಲೇ ಸರ್ಕಾರವು ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ನಡೆಸಿದ್ದು ಸದ್ಯದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು ಅದರಲ್ಲಿ ಒಟ್ಟು ೭೨೯ ಹುದ್ದೆಗಳು ಚಿಕ್ಕೋಡಿ ಜಿಲ್ಲೆಗೆ ಇವೇ ಅದರಲ್ಲಿ ನಿಮ್ಮ ಶಾಲೆಗೆ ನೇಮಕಮಾಡುವುದಾಗಿ ಇಲಾಖಾಧಿಕಾರಿಗಳಿಗೆ ತಿಳಿಸುವುದಾಗಿ ಸಿ.ಇ.ಒ ಅವರು ಹೇಳಿದರು.
ಬೆಳಗಾವಿಯಿಂದ ಚಿಕ್ಕೋಡಿ ಮಾರ್ಗದಲ್ಲಿ ಚಲಿಸುವ ಬಸ್ ಗಳನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸ ವಂಟಮೂರಿಗೆ ನಿಲ್ಲಿಸಬೇಕು ಎಂದು ಸದಸ್ಯರು ಪ್ರಾಸ್ಥಾಪಿಸಿದರು. ಇದಕ್ಕೆ ಸ್ಪಂದಿಸಿದ ಸಿ.ಇ.ಒ ಅವರು ಮಾತನಾಡಿ ಇದರ ಬಗ್ಗೆ ಸಂಬಂಧ ಪಟ್ಟ ಚಿಕ್ಕೋಡಿ ಘಟಕದ ವಿಭಾಗಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.

ಪಿ.ಎಮ್ ಕಿಸಾನ ಯೋಜನೆ:
ಪಿ.ಎಮ್ ಕಿಸಾನ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ರೈತನ ಖಾತೆಗೆ ೪ತಿಂಗಳಿಗೊಮ್ಮೆ ರೂ.೨ ಸಾವಿರ, ಒಂದು ವರ್ಷಕ್ಕೆ ೬ ಸಾವಿರ ರೂಪಾಯಿ ನಿಡಲಾಗುತ್ತದೆ. ಈ ಕಾಯ್ದೆ ಇದೇ ತಿಂಗಳು ೩೦ ರಂದು ಚಾಲನೆಗೊಳ್ಳಲಿದೆ ಎಂದು ಸಿ.ಇ.ಒ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಕಟಾಂಬಳೆ ಅವರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತನ ಉಪಕಾರ್ಯದರ್ಶಿಗಳಾದ ಎಸ್. ಬಿ. ಮುಳ್ಳೊಳ್ಳಿ ಅವರು ಸಭೆ ನಿರ್ವಹಿಸಿದರು.
ಜಿಲ್ಲಾ ಪಂಚಾಯತನ ಮುಖ್ಯ ಲೆಕ್ಕಾಧಿಕಾರಿಗಳಾದ ಪರುಶುರಾಮ ದುಡಗುಂಟಿ, ಜಿಲ್ಲೆಯ ಎಲ್ಲಾ ಪಂಚಾಯತ ಸದಸ್ಯರು, ಸ್ಥಾಯಿ ಸಮಿತಿ ಸದಸ್ಯರು, ಎಲ್ಲ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೇರಿದಂತೆ ಸಭೆಗೆ ಸಂಬಂಧ ಪಟ್ಟ ಎಲ್ಲ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button