Kannada NewsLatest

ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ; ಕಳಪೆ ರಸಗೊಬ್ಬರ ಮುಟ್ಟುಗೋಲು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2020 ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ರೈತಾಪಿ ವರ್ಗಕ್ಕೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳು ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಕೃಷಿ ಇಲಾಖೆ ಹಾಗೂ ಜಾಗೃತ ಕೋಶದ ಒಟ್ಟು 65 ಅಧಿಕಾರಿಗಳನ್ನೊಳಗೊಂಡ 19 ತಂಡಗಳು ಜಿಲ್ಲೆಯ ಎಲ್ಲಾ ತಾಲುಕುಗಳಲ್ಲಿ ಕೃಷಿ ಪರಿಕರ ಮಾರಾಟಮಳಿಗೆಗಳ ತಪಾಸಣೆ ಕೈಗೊಂಡು ನೂನ್ಯತೆ ಹೊಂದಿದ 112 ಮಾರಾಟ ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.

ಎರಡು ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 336 ಮಾರಾಟ ಮಳಿಗೆಗಳ ತಪಾಸಣೆ ನಡೆಸಿ ನೂನ್ಯತೆ ಹೊಂದಿರುವ 112 ಮಾರಾಟ ಮಳಿಗೆಗಳ ಮಾಲಿಕರಿಗೆ ಕಾರಣ ಕೇಳುವ ನೋಟೀಸನ್ನು ಜಾರಿಗೊಳಿಸಲಾಗಿದೆ. ಸೂಕ್ತ ದಾಖಲಾತಿಗಳಿಲ್ಲದ ಹಾಗೂ ಗುಣಮಟ್ಟದ ಬಗ್ಗೆ ಸಂಶಯಾತ್ಮಕ ಪರಿಕರ ಹೊಂದಿದ 76 ಮಾರಾಟಗಾರರಿಗೆ ಮಾರಾಟತಡೆ ನೋಟೀಸನ್ನು ಕೂಡ ಜಾರಿಗೊಳಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.

ಬೆಳಗಾವಿ ತಾಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯವಿದ್ದ ಒಂದು ರಸಗೊಬ್ಬರ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲಯದಿಂದ ಕಡಿಮೆ ಗುಣಮಟ್ಟದ್ದೆಂದು ವರದಿ ಪ್ರಯುಕ್ತ ರೂ 62,520 ಮೌಲ್ಯದ ರಸಗೊಬ್ಬರವನ್ನು ಮುಟ್ಟುಗೋಲು ಹಾಕಲಾಗಿದೆ.

ಚಿಕ್ಕೋಡಿ ತಾಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯಾತ್ಮಕವಿರುವ 180 ಲೀಟರ್ ಜೈವಿಕ ಉತ್ಪನ್ನ ವಿತರಣೆಗೆ ಮಾರಾಟ ತಡೆ ನೋಟೀಸ್ ಜಾರಿಮಾಡಿದೆ. ಸದರಿ ಉತ್ಪನ್ನದ ಮಾದರಿಯನ್ನು ವಿಷೇಶಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕಿತ್ತೂರು ತಾಲೂಕಿನಲ್ಲಿ ಪರವಾನಿಗೆ ಇಲ್ಲದ ಅನಧಿಕೃತ ಮಾರಾಟ ಮಳಿಗೆಯಲ್ಲಿ ರೂ 80000/- ಮೌಲ್ಯದ 740 ಕೆ.ಜಿ ಬಿತ್ತನೆ ಬೀಜ ಹಾಗು 100 ಲೀಟರ್ ಕಳೆನಾಶಕವನ್ನು ಮುಟ್ಟುಗೋಲು ಹಾಕಿ ಮಾರಾಟ ಮಳಿಗೆಯನ್ನು ಸೀಜ್ ಮಾಡಲಾಗಿದೆ.

ಸವದತ್ತಿ ತಾಲೂಕಿನಲ್ಲಿ ಗುಣಮಟ್ಟದ ಬಗ್ಗೆ ಸಂಶಯವಿರುವ ರೂ 25000/ ಜೈವಿಕ ಪೀಡೆನಾಶಕ ಹಾಗೂ ಪರವಾನಿಗೆಯಲ್ಲಿ ನಮೂದಾಗದೆ ಇರುವ ರೂ 50000/ ಮೌಲ್ಯದ ಪೀಡೆನಾಶಕವನ್ನು ಜಪ್ತಿ ಮಾಡಲಾಗಿದೆ. ಈ ರೀತಿ ಅಭಿಯಾನವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಹಾಗು ಗುಣಮಟ್ಟವಲ್ಲದ ಬಿತ್ತನೆ ಬೀಜ, ರಸಗೊಬ್ಬರ ಹಾಗು ಪೀಡೆನಾಶಕಗಳನ್ನು ವಿತರಿಸುವ ಮಾರಾಟಗಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು.

ರೈತಬಾಂಧವರಿಗೆ ಕೃಷಿ ಪರಿಕರಗಳ ಗುಣಮಟ್ಟದ ಬಗ್ಗೆ ಸಂಶಯ ಬಂದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button