Kannada NewsLatest

ಆರೋಗ್ಯ ಹಸ್ತ ಕಾಂಗ್ರೆಸ್ ಮಹತ್ವಾಕಾಂಕ್ಷಿ ಯೋಜನೆ: ವಿನಯ ನಾವಲಗಟ್ಟಿ

ಪ್ರಗತಿವಾಹಿನಿ ಸುದ್ದಿ; ಕೌಜಲಗಿ: ಕೊವಿಡ್ ನಿಂದಾಗಿ ದೇಶದಲ್ಲಿ ಜನಜೀವನ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಧೈರ್ಯಗುಂದಿದ ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಬಡವರಿಗೆ ಆರೋಗ್ಯ ಹಸ್ತ ಚಾಚಿದ್ದು, ಜನರ ಆರೋಗ್ಯ ಸುರಕ್ಷತೆಯ ಕಡೆಗೆ ಗಮನ ಹರಿಸಬೇಕೆಂದು ಕಾರ್ಯಕರ್ತರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಕರೆ ನೀಡಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ಭವನದಲ್ಲಿ ಜರುಗಿದ ಅರಭಾವಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಕೋವಿಡ್ ವಾರಿಯರ್ಸ್‍ಗಳ ಆರೋಗ್ಯ ಹಸ್ತ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೇಸ್ ಅಧಿಕಾರದಲ್ಲಿಲ್ಲದಿದ್ದರೂ ಜನಸಾಮಾನ್ಯರ ಸೇವೆಗೆ ಸದಾ ಕಂಕಣಬದ್ಧವಾಗಿದೆ. ಪ್ರತಿ ಗ್ರಾಮ ಮಟ್ಟದಲ್ಲಿ ಒರ್ವ ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತ ಕಾರ್ಯಕರ್ತ ಸೇವೆ ಸಲ್ಲಿಸಲಿದ್ದಾನೆ ಎಂದು ಹೇಳಿದರು.

ಆರೋಗ್ಯ ಹಸ್ತ ಕಾರ್ಯಕ್ರಮದ ಅರಭಾವಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಸದಾನಂದ ಡಂಗನವರ ಮಾತನಾಡಿ, ಕಾಂಗ್ರೆಸ್ ದೀನದಲಿತರ, ಹಿಂದುಳಿದವರ, ಅಲ್ಪ ಸಂಖ್ಯಾತರ ಬಡವರ ಪಕ್ಷವಾಗಿದ್ದು, ಅವರ ಆರೋಗ್ಯ ರಕ್ಷಣೆಯೇ ಪಕ್ಷದ ಪ್ರಮುಖ ಕರ್ತವ್ಯವಾಗಿದೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಜನರ ಜೊತೆ ಆರೋಗ್ಯ ಹಸ್ತ ಎಂದೆಂದಿಗೂ ಇರುತ್ತದೆ. ಭ್ರಷ್ಟಾಚಾರದ ಕೂಪದಲ್ಲಿ ಬಿದ್ದಿರುವ ಆಡಳಿತ ಪಕ್ಷಗಳು ಕೋವಿಡ್-19ನ್ನು ದುರುಪಯೋಗ ಪಡಿಸಿಕೊಂಡು ಜನರ ದಿಕ್ಕು ತಪ್ಪಿಸಿವೆ. ಇದರಿಂದಾಗಿ ಜನ ಭಯಭೀತರಾಗಿದ್ದು, ಅವರಿಗೆ ಧೈರ್ಯ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ಆರೋಗ್ಯ ಹಸ್ತ ಕಾರ್ಯಕ್ರಮ ಪಕ್ಷದ ಅತ್ಯಂತ ಮಹತ್ವದ ಯೋಜನೆಯಾಗಿದೆ. ಕೋವಿಡ್-19 ರ ಕಾಂಗ್ರೇಸ್ ಕಾರ್ಯಕರ್ತರು ಬಡವರ ನೋವಿಗೆ ಸ್ಪಂದಿಸಲಿದ್ದು, ಕಾರ್ಯಕರ್ತರ ಶ್ರಮದಿಂದಾಗಿ ಕಾಂಗ್ರೆಸ್ ರಾಜ್ಯ ಮತ್ತು ದೇಶದಲ್ಲಿ ಪುನಶ್ಚೇತನಗೊಳ್ಳಲಿದೆ ಎಂದು ಹೇಳಿದರು.

ಡಾ.ಮಾರ್ಟಿನ್ ಅವರು ಪ್ರಾತ್ಯಕ್ಷಿಕೆಯಾಗಿ ಆರೋಗ್ಯ ಹಸ್ತ ಕಾರ್ಯಕರ್ತರಿಗೆ ತರಬೇತಿ ನೀಡಿದರು. ಅರಭಾವಿ ಕ್ಷೇತ್ರದ 40 ಕಾರ್ಯಕರ್ತರಿಗೆ ಆರೋಗ್ಯ ಹಸ್ತ ಕಿಟ್‍ನ್ನು ವಿತರಿಸಲಾಯಿತು. ಅರಭಾವಿ ಕ್ಷೇತ್ರದ ನೂತನ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅರಭಾವಿ ಅಲ್ಪ ಸಂಖ್ಯಾತರ ಘಟಕದ ನೂತನ ಅಧ್ಯಕ್ಷ ಇಮಾಮಸಾಬ ಹೂನ್ನೂರ, ಗುಲಾಬ ಬಾಳೇಕುಂದ್ರಿ, ವಿ.ಪಿ.ನಾಯಿಕ, ಗುರಪ್ಪ ಹಿಟ್ಟಣಗಿ, ಬಸನಗೌಡ ಪಾಟೀಲ (ಪಟಗುಂದಿ), ಸುರೇಶ ಮಗದುಮ್, ಚನ್ನಯ್ಯ ನಿರ್ವಾಣಿ, ಹನಮಂತಗೌಡ ಚಿಕ್ಕೆಗೌಡರ, ಶಂಕರ ಸಣ್ಣಮೇತ್ರಿ, ರಮಜಾನ ಹಕ್ಕಿ, ಮೆಹಬೂಬ ಮುಲ್ತಾನಿ, ಸಿದ್ದಪ್ಪ ಸಣ್ಣಕ್ಕಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button