
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಕೆಲ ದಿನಗಳ ಹಿಂದೆ ಬಿರುಗಾಳಿ ಮಳೆಯಿಂದಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಮರದ ಕೊಂಬೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಯುವಕ ಇಂದು ಕೊನೆಯುಸಿರೆಳೆದಿದ್ದಾರೆ.
29 ವರ್ಷದ ಅಕ್ಷಯ್ ಮೃತ ಯುವಕ. ತಲೆಯ ಮೇಲೆ ಮರದ ಕೊಂಬೆ ಬಿದ್ದು ತಲೆಯ ಭಾಗಕ್ಕೆ ಗಂಭೀರವಾದ ಪೆಟ್ಟು ಬಿದ್ದಿತ್ತು. ಬೆಂಗಳೂರಿನ ಜಯನಗರದ ಅಪೊಲೋ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿತ್ತು. ರಕ್ತಸ್ರಾವ ನಿಲ್ಲಿಸಲು ವೈದ್ಯರು ಆಪರೇಷನ್ ಮಾಡಿದ್ದರು. ಬಳಿಕ ಯುವಕ ಕೋಮಾಗೆ ಜಾರಿದ್ದರು. ನಿನ್ನೆ ಯುವಕನ ಬ್ರೇನ್ ಡೆಡ್ ಆಗಿದೆ ಎಂದು ತಿಳಿದುಬಂದಿತ್ತು. ಇಂದು ವೈದ್ಯರು ಯುವಕ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ವೃದ್ಧ ಅಜ್ಜ-ಅಜ್ಜಿಗೆ ಯುವಕ ಅಕ್ಷಯ್ ಆಸರೆಯಾಗಿದ್ದ. ಓರ್ವ ಮೊಮ್ಮಗನನ್ನೂ ಕಳೆದುಕೊಂಡಿರುವ ಅಜ್ಜ-ಅಜ್ಜಿ ಆಕ್ರಂದನ ಮುಗಿಲುಮುಟ್ಟಿದೆ. ಬಿಬಿಎಂಪಿ ನಿರ್ಲಕ್ಷಕ್ಕೆ ಯುವಕನ ಜೋವ ಹೋಗಿದೆ. ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.