Latest

ವೈದ್ಯರಿಗೆ ಬೆತ್ತದಿಂದ ಹೊಡೆದರಾ ಜಿಲ್ಲಾಧಿಕಾರಿ?

ಪ್ರಗತಿವಾಹಿನಿ ಸುದ್ದಿ; ಬೀದರ್: ವೈದ್ಯರುಗಳ ಜತೆ ಸಭೆ ನಡೆಸುತ್ತಿದ್ದ ವೇಳೆ ಬೀದರ್ ಜಿಲ್ಲಾಧಿಕಾರಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಬೀದರ್ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್ ವಿರುದ್ಧ ರಾಜ್ಯ ವೈದ್ಯಾಧಿಕಾರಿಗಳ ಸಂಘಕ್ಕೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಡಿಎಚ್​ಎಸ್ ಸಭೆ ವೇಳೆ ಈ ಘಟನೆ ನಡೆದಿದೆ. ಈ ಸಭೆ ವೇಳೆ ಕೆಲ ವೈದ್ಯಾಧಿಕಾರಿಗಳ ಮೇಲೆ ಜಿಲ್ಲಾಧಿಕಾರಿ ಬೆತ್ತದಿಂದ ಹೊಡೆದಿದ್ದಾರೆನ್ನಲಾಗಿದೆ.

ವೈದ್ಯರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಈ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ವೈದ್ಯರು ನೀಡಿರುವ ದೂರಿನ ಪ್ರಕಾರ, ನಿನ್ನೆ ಶನಿವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸುಮಾರು 4 ಗಂಟೆ ಕಾಲ ಡಿಎಚ್​ಎಸ್ ಸಭೆ ನಡೆದಿದೆ. ಡಿಎಚ್​ಒ ಮತ್ತು ಡಿಎಸ್​ಒ ಅವರ ಮೇಲೆ ಜಿಲ್ಲಾಧಿಕಾರಿಯವರು ಮೊದಲು ಕೋಪಗೊಂಡರು. ಆರ್​ಸಿಎಚ್ ಕಾರ್ಯಕ್ರಮ ಅಧಿಕಾರಿಯವರ ಕೈಗೆ ಲಾಠಿಯಿಂದ ಹೊಡೆದರು. ತಾಲೂಕು ಆರೋಗ್ಯ ಅಧಿಕಾರಿಗಳನ್ನು ಕರೆಸಿ ಅವರ ಕೈ ಮೇಲೂ ಲಾಠಿ ಏಟು ಕೊಟ್ಟರು. ಕೆಲ ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆಯೂ ಮಾಡಿದರು ಎಂದು ಬೆಂಗಳೂರಿನಲ್ಲಿರುವ ವೈದ್ಯಾಧಿಕಾರಿಗಳ ಸಂಘಕ್ಕೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

ಜಿಲ್ಲಾಧಿಕಾರಿಗಳ ಈ ವರ್ತನೆ ನ್ಯಾಯಸಮ್ಮತವಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಬೀದರ್ ವೈದ್ಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button