LatestUncategorized

ಬೆಂಗಳೂರಿನಲ್ಲಿ 8 ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕದಲ್ಲಿ ಅಭಿವೃದ್ಧಿ ಹಾಗೂ ನಾವಿನ್ಯತೆಯ ಪಯಣ, ಇದಕ್ಕೆ ಕಾರಣವಾಗಿರುವ ಸಾಧಕರು, ಇವರ ಸಾಧನೆಗಳನ್ನು ಬಿಂಬಿಸುವ (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು ವಿನ್ಯಾಸಕಾರರ ಸಮುದಾಯದ ವತಿಯಿಂದ ಆಯೋಜಿಸಿದ್ದ ಬಿ.ಎಲ್.ಆರ್ ಡಿಸೈನ್ ವೀಕ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ನಾವಿನ್ಯತೆ, ಅವಿಷ್ಕಾರಗಳ ಬಗ್ಗೆ ಮಾಹಿತಿ ನೀಡುವ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ ಇದಾಗಲಿದ್ದು, ಹಸಿರಿನ ಪರಿಸರವನ್ನೂ ಒಳಗೊಂಡಿರಲಿದೆ. ಇದರಿಂದ ವಿದೇಶಿ ಪ್ರವಾಸೋದ್ಯಮವನ್ನು ಪ್ರೋತ್ಸಾಹ ದೊರೆಯುತ್ತದೆ. ಈ ಮ್ಯೂಸಿಯಂ ನಿಂದ ಯುವ ಆವಿಷ್ಕಾರಿಗಳು, ವಿನ್ಯಾಸಕಾರರಿಗೆ ಸ್ಪೂರ್ತಿ ದೊರೆಯಲಿದೆ ಎಂದರು.

ಬೆಂಗಳೂರಿಗೆ 8 ನಗರ ಕೇಂದ್ರಗಳ ನಿರ್ಮಾಣ :
ವಿಶ್ವದ ಯಾವುದೇ ಸಣ್ಣ ನಗರದಲ್ಲಿ ಒಂದು ನಗರ ಕೇಂದ್ರವಿರುವಂತೆ, ಬೆಂಗಳೂರಿನ 8 ದಿಕ್ಕುಗಳಲ್ಲಿ 8 ನಗರ ಕೇಂದ್ರಗಳ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಬೆಂಗಳೂರು ನಗರಕ್ಕೆ ಮಾತ್ರ ನಗರಕೇಂದ್ರವೆಂಬುದಿಲ್ಲ.. ಆದ್ದರಿಂದ 8 ನಗರಕೇಂದ್ರಗಳನ್ನು ನಿರ್ಮಿಸಿ, ಇದಕ್ಕೆ ಪೂರಕವಾಗಿ ರಸ್ತೆ, ರೈಲುಗಳನ್ನು ಅಭಿವೃದ್ಧಿಗೊಳಿಸಬಹುದು. ಈ ಯೋಜನೆಗೆ ಬೇಕಾದ ಸಲಹೆಗಳನ್ನು ವಿನ್ಯಾಸಕಾರರಿಂದ ಬಯಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

400 ಸಂಶೋಧನಾ ಕೇಂದ್ರ :
ಬೆಂಗಳೂರು ಜನರ ನೆಚ್ಚಿನ ನಗರವಾಗಿದ್ದು, ಈ ನಗರದಲ್ಲಿ ಅವಿಷ್ಕಾರ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರತಿಭಾವಂತರಿದ್ದಾರೆ. ಜೆನೋಟಿಕ್ಸ್ ನಿಂದ ಏರೋಸ್ಪೇಸ್ ವರೆಗೆ 400 ಸಂಶೋಧನಾ ಕೇಂದ್ರಗಳಿವೆ. ರಾಜ್ಯದಲ್ಲಿ 400 ಫಾರ್ಚೂನ್ ಕಂಪನಿಗಳಿವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರಿನಲ್ಲಿ ಅಭಿವೃದ್ಧಿಗೆ ಬಹಳ ಅವಕಾಶಗಳಿವೆ. ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಸಕಾರಾತ್ಮಕತೆ ಎಲ್ಲರಲ್ಲೂ ಇರಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದರು.

ಉತ್ತಮ ವಿನ್ಯಾಸ ಸ್ಪೂರ್ತಿ ನೀಡುತ್ತದೆ :
ಉತ್ತಮ ವಿನ್ಯಾಸಕಾರರು ಸೂಕ್ಷ್ಮವಾಗಿ ಗಮನಿಸಬೇಕು ಹಾಗೂ ಆಂತರ್ಯವನ್ನು ನೋಡಬೇಕು. ನಿಮ್ಮ ಆತ್ಮಸಾಕ್ಷಿಯ ಮಾತನ್ನು ಕೇಳಬೇಕು. ಆಗಲೇ ಉತ್ತಮ ವಿನ್ಯಾಸಗಳು ಹೊರಹೊಮ್ಮಲು ಸಾಧ್ಯ. ಹೊಸ ವಿನ್ಯಾಸಗಳು ಹೆಚ್ಚಿನ ವ್ಯತ್ಯಾಸವನ್ನು ಮಾಡುವ ಜೊತೆಗೆ ಪರಿಣಾಮವನ್ನೂ ಬೀರುತ್ತದೆ. ಯುವ ವಿನ್ಯಾಸಕಾರರು, ಜೀವನದಲ್ಲಿ ಸುಧಾರಣೆಗಳನ್ನು ತರುವಂತಹ ವಿನ್ಯಾಸಗಳನ್ನು ಮಾಡುವ ಶಕ್ತಿಯನ್ನು ಪ್ರತಿಭೆಯನ್ನು ಹೊಂದಿದ್ದಾರೆ. ಉತ್ತಮ ವಿನ್ಯಾಸ ಸ್ಪೂರ್ತಿಯನ್ನೂ ನೀಡುತ್ತದೆ. ವಿನ್ಯಾಸ ರಚನೆ ನಿರಂತರವಾದ ಪ್ರಕ್ರಿಯೆ ಎಂದರು.

ಜನರ ಜೀವನ ಸುಗಮಗೊಳಿಸುವಂತಹ ವಿನ್ಯಾಸಗಳ ರಚನೆಯಾಗಬೇಕು:

ಬೆಂಗಳೂರು ನಮ್ಮ ಪರಂಪರೆ, ಕಲೆ, ಸಂಸ್ಕೃತಿ, ಇಂಜಿನಿಯರಿಂಗ್, ಆವಿಷ್ಕಾರ, ಸೃಜನಾತ್ಮಕತೆ ಎಲ್ಲವೂ ಇಲ್ಲಿದೆ. ಆದರೆ ಇವೆಲ್ಲವನ್ನೂ ಸಂಯೋಜಿಸುವ ಅಗತ್ಯವಿದೆ. ಈ ಸಂಯೋಜನೆಯ ಫಲವಾಗಿ ರಚಿಸಲಾಗುವ ವಿನ್ಯಾಸಗಳೇ ಬ್ರ್ಯಾಂಡ್ ಬೆಂಗಳೂರಿನ ವಿನ್ಯಾಸಗಳಾಗಬೇಕು. ಕಾಲ ಚಲಿಸಿದಂತೆ ನಾವೂ ಮುಂದುವರೆಯಬೇಕು. ಹಲವಾರು ಸವಾಲುಗಳು ಮಾನವ ನಿರ್ಮಿತವೇ. ನಾನು ಕೆಲವು ಸವಾಲುಗಳನ್ನು ನಿಮ್ಮ ಮುಂದಿರಿಸುತ್ತೇನೆ. ಈಗ ಲಭ್ಯವಿರುವ ಮೂಲಭೂತಸೌಕರ್ಯಗಳನ್ನು ಬಳಸಿ ಜನರ ಜೀವನ ಸುಗಮಗೊಳಿಸುವಂತಹ ಮಾಡೆಲ್ ಗಳನ್ನು ವಿನ್ಯಾಸಗೊಳಿಸಬೇಕು. ಈಗಿರುವ ಮೂಲಸೌಕರ್ಯಗಳನ್ನು ಬದಲಾಯಿಸದೇ ಅವುಗಳನ್ನು ಸುಧಾರಿಸುವ ಕೆಲಸವನ್ನು ಮಾಡುಬೇಕು. ಉದಾಹರಣೆಗೆ ಬೆಂಗಳೂರಿನ ಎಂಜಿರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಮಲ್ಲೇಶ್ವರಂ, ಇಂದಿರಾನಗರ, ಹೀಗೆ ಇಂತಹ ಪ್ರದೇಶಗಳನ್ನು ಜನರಿಗೆ ಅನುಕೂಲವಾಗುವಂತಹ, ಪರಂಪರೆಯನ್ನು ಉಳಿಸುವ ರೀತಿಯಲ್ಲಿ ಮರುವಿನ್ಯಾಸಗೊಳಿಸಬೇಕು. ಬೆಂಗಳೂರಿನಲ್ಲಿರುವ ಕೆರೆಗಳ ವಿನ್ಯಾಸವನ್ನು ಬದಲಿಸಬೇಕು. ನೀರು ನಿರ್ವಹಣೆ, ರಸ್ತೆ ನಿರ್ವಹಣೆ ಹಾಗೂ ವಾಣಿಜ್ಯ ನಿರ್ವಹಣೆಗಳನ್ನು ಎದುರಿಸಬೇಕೆನ್ನುವ ಸವಾಲುಗಳನ್ನು ತಮ್ಮ ಮುಂದಿಡುತ್ತೇನೆ ಎಂದರು.

ವಿನ್ಯಾಸಕಾರರು ತಾವು ರಚಿಸಿದ ವಿನ್ಯಾಸಗಳ ಬಗ್ಗೆ ಪ್ರಪಂಚಕ್ಕೆ ತಿಳಿಸಬೇಕು. ಬೆಂಗಳೂರು ನಗರವನ್ನು ಉತ್ತಮ ವಿನ್ಯಾಸಹೊಂದಿರುವ, ಜನಸ್ನೇಹಿಯಾಗಿರುವ ನಗರವನ್ನಾಗಿಸೋಣ. ಇಲ್ಲಿನ ಆವಿಷ್ಕಾರಗಳನ್ನು ಹಾಗೂ ವಿನ್ಯಾಸಗಳನ್ನು ಹೊರದೇಶದವರು ಸ್ಪೂರ್ತಿಯಾಗಿಸಿಕೊಳ್ಳುವಂತೆ ಕೆಲಸ ಮಾಡಬೇಕು. ಇದನ್ನು ಸರ್ಕಾರ ಎಲ್ಲ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡುತ್ತದೆ ಎಂದರು.

ಐ.ಟಿ. ಬಿ.ಟಿ, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸ್ಟಾರ್ಟ್ ಅಪ್ ವಿಷನ್ ಗುಂಪಿನ ಅಧ್ಯಕ್ಷ ಪ್ರಶಾಂತ್ ಭೂಷಣ್ ಮೊದಲಾದವರು ಉಪಸ್ಥಿತರಿದ್ದರು.

ರಾಜೀನಾಮೆ ಘೋಷಿಸಿದ ಸಿಎಂ ಜೈರಾಮ್ ಠಾಕೂರ್

https://pragati.taskdun.com/himachala-pradesha-cm-jairam-thakurresigncongress-win/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button