*ಕಾರು-ಬೈಕ್ ನಡುವೆ ಅಪಘಾತ: ಒಂದೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವು*

ಪ್ರಗತಿವಾಹಿನಿ ಸುದ್ದಿ: ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ 3 ಜನ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ಈ ಘಟನೆ ನಡೆದಿದೆ.
ಶಿವಪ್ಪ ಪಾಟ್ಲಿ (35), ಮುತ್ತಪ್ಪ ಮುದುಗಣ್ಣವರ್ (32), ಆನಂದ ಲಕ್ಷ್ಮೇಶ್ವರಮಠ (29) ಮೃತ ದುರ್ದೈವಿಗಳು. ಮೃತರು ಮುಂಡರಗಿ ತಾಲೂಕು ಜಂತ್ಲಿ ಗ್ರಾಮದ ನಿವಾಸಿಗಳು.
ಮುಂಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮಕ್ಕೆ ಒಂದೇ ಬೈಕ್ನಲ್ಲಿ ಮೂವರು ಬರುತ್ತಿದ್ದರು. ಇನ್ನು ಡೋಣಿ ಗ್ರಾಮದಿಂದ ಮುಂಡರಗಿ ಮಾರ್ಗವಾಗಿ ಹಿರೇಹಡಗಲಿಗೆ ಕಾರು ಹೊರಟಿತ್ತು. ಬೈಕ್ ಸವಾರರ ಬೇಜವಾಬ್ದಾರಿ ಚಾಲನೆ ಹಾಗೂ ಅತಿವೇಗದಿಂದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಕಾರು ಚಾಲಕನಿಗೆ ಗಂಭೀರವಾದ ಗಾಯಗಳಾಗಿವೆ.
ಅಪಘಾತದ ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



