
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಬರ್ಬರ ಹತ್ಯೆಗೆ ಬೇನಾಮಿ ಆಸ್ತಿ ಹಾಗೂ ಹಣದ ವ್ಯವಹಾರ ಕಾರಣವಾಯ್ತಾ ಎಂಬ ಅನುಮಾನ ಮೂಡಿದೆ.
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಎಂಬ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಗುರೂಜಿಯವರ ಆಪ್ತರೇ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೇನಾಮಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯೇ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಆರೋಪಿ ಮಹಾಂತೇಶ್ ಶಿರೂರ್ ಹಾಗೂ ಆತನ ಪತ್ನಿ ವನಜಾಕ್ಷಿ, ಚಂದ್ರಶೇಖರ್ ಗುರೂಜಿ ಪರಿಚಿತರು ಮಾತ್ರವಲ್ಲ, ಸರಳವಾಸ್ತು ಸಂಸ್ಥೆಯಲ್ಲಿ ಈ ಹಿಂದೆ ಉದ್ಯೋಗಿಗಳಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮಹಾಂತೇಶ್ ಪತ್ನಿ ವನಜಾಕ್ಷಿ 2019ರವರೆಗೆ ಸರಳವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಚಂದ್ರಶೇಖರ್ ಗುರೂಜಿ ವನಜಾಕ್ಷಿ ಹೆಸರಲ್ಲಿ ಹಲವು ಆಸ್ತಿ ನೋಂದಣಿ ಮಾಡಿಸಿದ್ದರು. ಅದರಲ್ಲಿ ಪ್ರಮುಖವಾಗಿ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ಕೂಡ ಸೇರಿತ್ತು.
ಕೋವಿಡ್ ಸಂದರ್ಭದಲ್ಲಿ ವನಜಾಕ್ಷಿ ಸರಳವಾಸ್ತು ಸಂಸ್ಥೆಯಿಂದ ಕೆಲಸ ಬಿಟ್ಟಿದ್ದಳು. ಕೋವಿಡ್ ನಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಸ್ತು ಸಂಸ್ಥೆಯಿಂದ ಚಂದ್ರಶೇಖರ್ ಗುರೂಜಿಯವರಿಗೆ ಆದಾಯ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ವನಜಾಕ್ಷಿ ಹಾಗೂ ಮಹಾಂತೇಶ್ ಬಳಿ ತಾವು ನೋಂದಾಯಿಸಿದ್ದ ಆಸ್ತಿ ವಾಪಸ್ ನೀಡುವಂತೆ ಗುರೂಜಿ ಕೇಳಿದ್ದರು. ಆಸ್ತಿ ವಾಪಸ್ ಕೇಳುತ್ತಿದ್ದಂತೆ ಕ್ಯಾತೆ ತೆಗೆದಿದ್ದರು ದಂಪತಿ. ಆಸ್ತಿ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹಾಂತೇಶ್ ದಂಪತಿ ಹಾಗೂ ಗುರೂಜಿ ನಡುವೆ ಆಗಗಾ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ.
ಸುಲಭವಾಗಿ ತಮ್ಮ ಹೆಸರಿಗೆ ಬಂದ ಆಸ್ತಿಯನ್ನು ವಾಪಸ್ ಕೊಡಲು ಮಹಾಂತೇಶ್ ಹಾಗೂ ವನಜಾಕ್ಷಿ ದಂಪತಿ ನಿರಾಕರಿಸಿದ್ದರು. ಈ ವಿಚಾರ ಗುರೂಜಿ ಹಾಗೂ ಮಹಾಂತೇಶ್ ಮನಸ್ತಾಪಕ್ಕೆ ಕಾರಣವಾಗಿತ್ತು. ಬೇನಾಮಿ ಆಸ್ತಿ ವಿವಾದಕ್ಕಾಗಿಯೇ ಇದೀಗ ಚಂದ್ರಶೇಖರ್ ಗುರೂಜಿಯವರನ್ನು ಮಹಾಂತೇಶ್ ಹಾಗೂ ವನಜಾಕ್ಷಿ ಸೇರಿ ಪ್ಲಾನ್ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ವನಜಾಕ್ಷಿಯನ್ನೂ ವಶಕ್ಕೆ ಪಡೆದಿರುವ ಹುಬ್ಬಳ್ಳಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್; ಹುಬ್ಬಳ್ಳಿ-ಬೆಳಗಾವಿ ಮಾರ್ಗದಲ್ಲಿ ಇಬ್ಬರು ಆರೋಪಿಗಳು ಅರೆಸ್ಟ್