Politics

*ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ: ಸಿಎಂ ತಾಕೀತು*

ಪ್ರಗತಿವಾಹಿನಿ ಸುದ್ದಿ: ಬಾಲ್ಯ ವಿವಾಹ, ಬಾಲಗರ್ಭಿಣಿ ಪ್ರಕರಣ ತಡಿಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಡಿಸಿ, ಸಿಇಒ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಹಿಂದುಳಿದವರು, ದಲಿತರು, ಅಶಿಕ್ಷಿತರು ಇರುವ ಕಡೆ ಬಾಲ್ಯವಿವಾಹ ಮತ್ತು ಬಾಲಗರ್ಭಿಣಿ ಪ್ರಕರಣಗಳು ಇರುತ್ತವೆ. ಇದನ್ನು ಸಮರ್ಪಕವಾಗಿ ತಡೆಯಬೇಕು ಎಂದು ನಿಮಗೆ ಅನ್ನಿಸಲ್ವಾ ಎಂದು ಸಿಎಂ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಸರಿಯಾಗಿ ನಿಗಾ ವಹಿಸಿ, ವರದಿ ನೀಡದ PDO ಗಳು ರೆವಿನ್ಯೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು.

ಅಗತ್ಯ ಇರುವ ಕಡೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ಕಾನೂನು ಕ್ರಮ ಕೈಗೊಳ್ಳಿ ಎಂದು ಸಿಎಂ ಸೂಚಿಸಿದರು.

Home add -Advt

ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳು ನೀಡಿದ ಸೂಚನೆಗಳು…

*ಶೇಕಡಾವಾರು ತೀವ್ರ ಅಪೌಷ್ಠಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳ ಪ್ರತೀ ವರ್ಷ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಶೇ೧ ರಷ್ಟು ಕಡಿಮೆ ಮಾಡಿಕೊಂಡು ಹೋಗಲು ಸಾಧ್ಯವಿದೆ. ಒಂದೇ ಸಾರಿಗೆ ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಾಮಾಜಿಕ ಕಾರಣಗಳೂ ಇವೆ. ಆದ್ದರಿಂದ ಪ್ರತೀ ವರ್ಷ ಶೇ೧ ರಷ್ಟು ಪ್ರಮಾಣ ಕಡಿಮೆ ಮಾಡಿಕೊಂಡು ಬಂದರೆ ಅಪೌಷ್ಠಿಕ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎನ್ನುವ ಸೂಚನೆ ನೀಡಿದರು. ಬೀದರ್‌, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಿಎಂ ಈ ಸೂಚನೆ ನೀಡಿದರು.

*ಮಕ್ಕಳ ಹಿಮೋಗ್ಲೋಬಿನ್‌ ಪ್ರಮಾಣ ಸೇರಿ ಅವರ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಹಾಳಿ, ಮೊಟ್ಟೆ, ಮಾತ್ರೆ ಎಲ್ಲವನ್ನೂ ಕೊಡುತ್ತಿದ್ದರೂ ಏಕೆ ಕೆಲವು ಕಡೆ ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕ ಮಟ್ಟ ಮಾತ್ರ ಸುಧಾರಿಸುತ್ತಿಲ್ಲ ಎನ್ನುವ ಬಗ್ಗೆ ವೈಜ್ಞಾನಿಕ ವರದಿ ನೀಡಿ, ವರದಿ ಆಧಾರದಲ್ಲಿ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಬಹುದು ಎಂದು ಸಿಎಂ ತಿಳಿಸಿದರು.

*ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರದ ಹಲವು ಯೋಜನೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳು ಮುಂದಿಟ್ಟಾಗ ಗರಂ ಆದ ಮುಖ್ಯಮಂತ್ರಿಗಳು, ಎಷ್ಟು ವರ್ಷಗಳಿಂದ ಇದೇ ಕತೆ ಹೇಳಿಕೊಂಡು ಕೂತಿರ್ತೀರಿ ? ಅಗತ್ಯ ಬಿದ್ದರೆ ಭೂ ಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಲು ನಾವು ಸಿದ್ದರಿದ್ದೇವೆ. ನೇಮಕ ಮಾಡಿಕೊಳ್ಳಿ. ಹಳೆ ಯೋಜನೆಗಳು ಪೂರ್ಣಗೊಳ್ಳದ ಹೊರತು ಹೊಸ ಹೆದ್ದಾರಿ ಯೋಜನೆಗಳು ನಮಗೆ ಸಿಗುವುದಿಲ್ಲ ಎಂದರು, ಇದಕ್ಕೆ ಧ್ವನಿಗೂಡಿಸಿದ ಸಚಿವ ಸತೀಶ್‌ ಜಾರಕಿಹೊಳಿಯವರು, ೪೨ ಬಾಕಿ ಯೋಜನೆಗಳಲ್ಲಿ ನಾವು ೨೨ಯೋಜನೆಗಳನ್ನು ಮುಗಿಸಿದ್ದೇವೆ. ಕೇಂದ್ರದಿಂದಲೇ ಬಹಳ ಮಸ್ಯೆ ಆಗುತ್ತಿದೆ. ಕೇಂದ್ರದ ಅಧಿಕಾರಿಗಳು ಹಲವು ಕಡೆ ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಮಾಡಬೇಕಿದೆ ಎಂದರು.

*ಎಲ್ಲೆಲ್ಲಿ ಬಾಟಲ್‌ ನೆಕ್‌ ಸಮಸ್ಯೆ ಇದೆ ಅವುಗಳನ್ನು ಮೊದಲ ಆಧ್ಯತೆ ನೀಡಿ ಬಗೆಹರಿಸಬೇಕು. ಎಸ್‌ಎಲ್‌ಎಒ ಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಬರುವಂತೆ ಒಂದು circular ಹೊರಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಮೇಲಿಂದ ಮೇಲೆ ಪರಿಶೀಲನೆ ನಡೆಸುತ್ತಿದ್ದರೆ ಪರಿಸ್ಥಿತಿ ಸುಧಾರಿಸಬಹುದು ಎಂದು ಸಚಿವ ಕೃಷ್ಣಬೈರೇಗೌಡರು ಸೂಚನೆ ನೀಡಿದರು.

*ಎಸ್‌ಎಲ್‌ಎಒ ಗಳ ಪ್ರಾಕ್ಟೀಸ್‌ ಅಷ್ಟು ಸರಿ ಇಲ್ಲ. ಮಾರುಕಟ್ಟೆ ಬೆಲೆ, ಗೈಡೆನ್ಸ್‌ ಬೆಲೆಗೂ ಇವರು ತರುವ ಬೆಲೆಗೂ ಯದ್ವಾ ತದ್ವಾ ವ್ಯತ್ಯಾಸ ಇರುತ್ತದೆ. ಇದು ಸರ್ಕಾರದ ಮೇಲೆ ಅನಗತ್ಯ ಹೊರೆ ಬೀಳುತ್ತದೆ. ಇದರಲ್ಲಿ ಎಸ್‌ ಎಲ್ ಎ ಒ ಗಳ ವರ್ತನೆಗಳು, ಪ್ರಾಕ್ಟೀಸ್‌ ಸರಿ ಇಲ್ಲ. ಹೀಗಾಗಿ ಇವರನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಸಭೆಯಲ್ಲಿ ಸಚಿವರುಗಳು ಮತ್ತು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವಂತೆ ಸೂಚನೆ ನೀಡಿದರು.

*ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದಕ್ಕೆ ಕಾರಣ ಏನು? ವೈಜ್ಞಾನಿಕ ಅಂಕಿಅಂಶಗಳು ಬೇರೆಯೇ ಹೇಳುತ್ತಿವೆ. ಯಾವ ಜಿಲ್ಲೆಯಲ್ಲೂ ಶೇ60 ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಶೇ೮೦, ಶೇ೯೦ ಅಂತೆಲ್ಲಾ ಇದ್ದರೆ ಅದನ್ನು ಯಾವ ಮಾನದಂಡದಲ್ಲೂ ಒಪ್ಪಲು ಸಾಧ್ಯವಿಲ್ಲ. ಇದರಿಂದ ದೊಡ್ಡ ಅನ್ಯಾಯ ಆಗುವುದು ನಿಜವಾದ ಅರ್ಹರಿಗೆ. ಅರ್ಹರಿಗೆ ಅನ್ಯಾಯ ಆಗುವುದನ್ನು ತಡೆಯಲು ನಕಲಿ, ಡೂಪ್ಲಿಕೇಟ್‌ ಮತ್ತು ಅನರ್ಹ ಕಾರ್ಡ್‌ಗಳನ್ನು ತಡೆಯಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

*ಶಿಕ್ಷಕರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್‌ ಪಡಿತರ ಚೀಟಿಗಳಿವೆ. ಇವರಲ್ಲಿ ಹಲವರು ಪಡಿತರ ಪಡೆಯುವುದಿಲ್ಲ. ಆದರೆ ಆಸ್ಪತ್ರೆಗಳಿಗೆ ಹೋಗಲು ಮತ್ತು ಇನ್ನಿತರೆ ಅಗತ್ಯಗಳಿಗೆ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.

*ಅರ್ಹರು ಯಾವುದೇ ಕಾರಣಕ್ಕೂ ತಪ್ಪಬಾರದು. ಅರ್ಹರಿಗೆ ಸವಲತ್ತು ತಪ್ಪಬಾರದು, ಸಮಸ್ಯೆ ಆಗಬಾರದು. ಆದರೆ ಅರ್ಹರಿಗೆ ಸಮಸ್ಯೆ ಆಗದಂತೆ ಅನರ್ಹ ಕಾರ್ಡ್‌ಗಳನ್ನು ರದ್ದಾಗುವ ದಿಕ್ಕಿನಲ್ಲಿ ಏನೇನು ಮಾಡಬಹುದು ಎನ್ನುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಉತ್ತರ ಕೇಳಿದರು. ನಿಮ್ಮ ಪ್ರಾಯೋಗಿಕ ಅನುಭವದಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೀರಿ, ಈ ಸಮಸ್ಯೆಗಳ ಪರಿಹಾರಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಪ್ರಶ್ನಿಸಿದರು.


Related Articles

Back to top button