
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸ್ಪಂದನ ಅಸೋಸಿಯೇಶನ್ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಫೆ.17) ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆದ ಬಾಲ್ಯ ವಿವಾಹ ಮುಕ್ತಿ ರಥ ಜಾಥಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ ಪಾಟೀಲ ರವರು ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಯನ್ನು ನೀಷದಿಸಬೇಕು. ಸರ್ಕಾರ ಹೆಣ್ಣುಮಕ್ಕಳಿಗೆ 18 ಹಾಗೂ ಗಂಡು ಮಕ್ಕಳಿಗೆ 21 ವರ್ಷ ಪೂರ್ಣಗೊಂಡ ಮೇಲೆ ವಿವಾಹ ಮಾಡಬೇಕು ಎಂದು ಕಾಯ್ದೆ ಜಾರಿಯಲ್ಲಿದೆ. ಯುವಕ -ಯುವತಿಯರು ದೈಹಿಕವಾಗಿ ಬೆಳೆದ ನಂತರ ವಿವಾಹ ಮಾಡಬೇಕು, ಇಲ್ಲವಾದಲ್ಲಿ ಅವರ ದೈಹಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಕುಟುಂಬದ ಜೊತೆಗೆ ಸಮಾಜದ ಅಭಿವೃದ್ದಿಗೆ ಕೈಜೋಡಿಸಬೇಕು. ಕೇವಲ ನಮಗಾಗಿ ಬದುಕುವುದಲ್ಲ ಸಮಾಜಕ್ಕಾಗಿ ಬದುಕಬೇಕು ಎಂದು ಸಂದಿಪ ಪಾಟೀಲ ತಿಳಿಸಿದರು.
ಶಾಲಾ, ಕಾಲೇಜು ವಿದ್ಯರ್ಥಿಗಳು ಬಾಲ್ಯ ವಿವಾಹದ ಅರಿವು ಪಡೆದುಕೊಳ್ಳಬೇಕು. ನಿಮ್ಮ ಸುತ್ತ-ಮುತ್ತ ಬಾಲ್ಯ ವಿವಾಹಗಳು ಕಂಡುಬಂದಲ್ಲಿ ಕೂಡಲೆ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಅಥವಾ ಮಕ್ಕಳ ರಕ್ಷಣಾ ಸಹಾಯವಾಣಿ ಸಂಪರ್ಕಿಸಿ ಬಾಲ್ಯ ವಿವಾಹ ತಡೆಗೆ ಮುಂದಾಗಬೇಕು ಎಂದು ಡಿಸಿಪಿ ನಾರಾಯಣ ಭರಮನಿ ಅವರು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಲ್ಯ ವಿವಾಹ ಕುರಿತು ಬಿದಿನಾಟಕ ಮಾಡಿದರು. ಮತ್ತು ರಾಣಿ ಚನ್ನಮ್ಮ ವೃತ್ತದಿಂದ ಬೋಗರವೆಸ್ ವರೆಗೂ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ, ಬಾಲ್ಯ ವಿವಾಹ ನಿಲ್ಲಿಸಿ, ಅವರನ್ನು ಶಾಲೆಗೆ ಕಳುಹಿಸಿ, ಮಕ್ಕಳ ಮೇಲೆ ಆಗುವ ಹಿಂಸೆ ಮತ್ತು ದೌರ್ಜನ್ಯವನ್ನು ಕೊನೆಗೊಳಿಸಿ ನಾಮಫಲಕವನ್ನು ಪ್ರದರ್ಶಿಸುತ್ತ ಕಾಲ್ನಡಿಗೆ ಮೂಲಕ ಜಾತಾ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸ್ಪಂದನ ಸಂಸ್ಥೆ ಕಾರ್ಯದರ್ಶಿ ವಿ. ಸುಶೀಲ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸಂತೋಷ ಪಾಟೀಲ ಹಾಗೂ ರಾಣಿ ಚನ್ನಮ್ಮ ಪ್ರಾಧ್ಯಾಪಕಿ ದೇವತಾ ಗಸ್ತಿ ಸೇರಿದಂತೆ ಎನ್.ಎಸ್.ಎಸ್ ಘಟಕ 2 ಸ್ವಯಂ ಸೇವಕರು, ವಿವಿಧ ಗ್ರಾಮೀಣ ಮಹಿಳೆಯರು ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




