
ಪ್ರಗತಿವಾಹಿನಿ ಸುದ್ದಿ: ತಾಲ್ಲೂಕಿನ ಚಿಂಚಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿರುವ ಕಾರಣಕ್ಕಾಗಿ ವ್ಯವಹಾರಕ್ಕೆ ಸಂಭಂದಿಸಿದಂತೆ ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಕಡತಗಳು ಕಳ್ಳತನವಾದ ಘಟನೆ ಬುಧವಾರ ರಾತ್ರಿ 2ಘಂಟೆಯ ಸುಮಾರಿಗೆ ನಡೆದಿದೆ. ಈ ಕಳ್ಳತನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಟ್ಟಣ ಪಂಚಾಯಿತಿಯ ಠರಾವು ಪುಸ್ತಕ, ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಹಲವಾರು ಫೈಲ್ ಗಳು ಕಳ್ಳತನವಾಗಿವೆ ಎಂದು ಪಟ್ಟಣ ಪಂಚಾಯಿತಿ ಆಧಿಕಾರಿ ವೆಂಕಟೇಶ ಬಳ್ಳಾರಿ ತಿಳಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳೆಲ್ಲ ಸೇರಿ ಸರ್ವೇ ನಂಬರ್ 400 ರಲ್ಲಿ ಇರುವ 2 ಎಕರೆ 10ಗುಂಟೆಗೆ ಜಾಗವನ್ನು ಕಬಳಿಕೆ ಮಾಡುವ ಉದ್ದೇಶದ ವ್ಯವಹಾರಕ್ಕೆ ಪೂರ್ವನಿಯೋಜಿತವಾಗಿ ಈ ಕಡತಗಳ ಕಳ್ಳತನ ನಡೆದಿರುವ ಶಂಕೆಯಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯತಿಯಲ್ಲಿ ಕಳ್ಳತನವಾದ ಕಡತಗಳು ಪತ್ತೆ ಹಚ್ಚಲು ಜಿಲ್ಲಾ ಹಂತದ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಬೇಕಿದೆ.ಇದರಲ್ಲಿ ಪಟ್ಟಣ ಪಂಚಾಯಿತಿಯ ಅಧಿಕಾರಿ ವೆಂಕಟೇಶ ಬಳ್ಳಾರಿ ಅವರ ಕೈವಾಡ ಹಾಗೂ ನಿರ್ಲಕ್ಷವೇ ಕಾರಣವೆಂದು ಸ್ಥಳೀಯ ನಿವಾಸಿ ಸಂಜಯ ಸೌಂದಲಾಗಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೆ ಏರಿದ ಸಂದರ್ಭದಲ್ಲಿನ ಎಲ್ಲ ದಾಖಲೆಗಳು ಕಳ್ಳತನವಾಗಿವೆ. ನಾವೆಲ್ಲ ಸೇರಿ ಕುಡಚಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಾಲಿಸಲಿದ್ದೇವೆ. ಪೋಲಿಸರು ಸಿಸಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ. ವೆಂಕಟೇಶ ಬಳ್ಳಾರಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಿಂಚಲಿ, ಜಿಲ್ಲಾ ಬೆರಳಚ್ಚು ತಜ್ಞರು ಹಾಗೂ ಕುಡಚಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.